'ಕಾಮಿಡಿ ಕಿಲಾಡಿಗಳು'ಗೆ ಹಿತೇಶ್, ಶಿವರಾಜ್ ಚಕ್ಕರ್: ಬುದ್ಧಿಮಾತು ಹೇಳಿದ ಜಗ್ಗೇಶ್.!
ಕನ್ನಡ ಕಿರುತೆರೆಯಲ್ಲಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಸೂಪರ್ ಹಿಟ್ ಆಯ್ತು. ಹಾಗೇ, ಅದರಲ್ಲಿ ಸ್ಪರ್ಧಿಸಿದ ಪ್ರತಿಭಾವಂತ ಕಲಾವಿದರು ಕರ್ನಾಟಕದ ಸೂಪರ್ ಸ್ಟಾರ್ ಗಳಾದರು.
'ಕಾಮಿಡಿ ಕಿಲಾಡಿಗಳು' ವೇದಿಕೆಯಿಂದ ಶಿವರಾಜ್.ಕೆ.ಆರ್.ಪೇಟೆ, ಹಿತೇಶ್ ಕರುನಾಡಲ್ಲಿ ಮನೆ ಮಾತಾದರು. ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುವ ಸಾಮರ್ಥ್ಯ ಇರುವ ಇವರಿಗೆ ಕನ್ನಡ ಚಿತ್ರರಂಗ ಕೂಡ ಕೈ ಬೀಸಿ ಕರೆಯಿತು. ಈಗಾಗಲೇ ಹಲವು ಸಿನಿಮಾಗಳಲ್ಲಿ ಶಿವರಾಜ್.ಕೆ.ಆರ್.ಪೇಟೆ ಹಾಗೂ ಹಿತೇಶ್ ಅಭಿನಯಿಸುತ್ತಿದ್ದಾರೆ.
ಶೂಟಿಂಗ್ ನಲ್ಲಿ ಬಿಜಿಯಾಗಿರುವ ಇವರಿಬ್ಬರು, ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ಕಾರ್ಯಕ್ರಮಕ್ಕೆ ಚಕ್ಕರ್ ಹಾಕಿದ್ದಾರೆ. ಇದನ್ನ ಗಮನಿಸಿದ ತೀರ್ಪುಗಾರರಾದ ಜಗ್ಗೇಶ್ ಹಾಗೂ ನಿರೂಪಕ ಮಾಸ್ಟರ್ ಆನಂದ್, ಅವರಿಬ್ಬರಿಗೂ ಬುದ್ಧಿಮಾತನ್ನ ಹೇಳಿದ್ದಾರೆ. ಮುಂದೆ ಓದಿರಿ...

ಅತಿಥಿಯಾಗಿ ಬಂದ ಅಪಾರ್ಟ್ಮೆಂಟ್ ಗೌಡ
ಹಿತೇಶ್ ಹಾಗೂ ಶಿವರಾಜ್.ಕೆ.ಆರ್.ಪೇಟೆ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಿದ್ದಾರೆ. ಹೀಗಾಗಿ ಅವರಿಬ್ಬರ ಬದಲು ಅತಿಥಿಯಾಗಿ ಅಪಾರ್ಟ್ಮೆಂಟ್ ಗೌಡ ಸ್ಕಿಟ್ ನಲ್ಲಿ ಅಭಿನಯಿಸಿದರು.

ಜಗ್ಗೇಶ್ ಹೇಳಿದ್ದೇನು.?
''ಸಂತೋಷ, ಬದುಕು, ಗುರುತು ಕೊಡುವಂತಹ ಕಾರ್ಯಕ್ರಮ ಇದು. ಇದನ್ನ ಯಾರೇ ಆದರೂ ಪರ್ವಾಗಿಲ್ಲ... ಎಷ್ಟೇ ಬಿಜಿಯಾಗಿದ್ದರೂ ಪರ್ವಾಗಿಲ್ಲ... ನನ್ನಷ್ಟು ಬಿಜಿ ಯಾರೂ ಇಲ್ಲ. ಈ ವಾರದಲ್ಲಿ ನಾನು 7 ಸಾವಿರ ಕಿ.ಮಿ ಓಡಾಡಿದ್ದೇನೆ. ನನ್ನ ಜೀವನದಲ್ಲಿ ನಾನು ಏನನ್ನ ಬೇಕಾದರೂ ಬಿಡುವೆ... ಆದರೆ, ಕಾಮಿಡಿ ಕಿಲಾಡಿಗಳನ್ನು ಮಾತ್ರ ಬಿಡಲ್ಲ. ಯಾಕಂದ್ರೆ, ಇದು ನಮ್ಮ ಕಿರೀಟಕ್ಕೆ ಗರಿ ಇದ್ದ ಹಾಗೆ'' ಎಂದು ನಟ ಜಗ್ಗೇಶ್ ಹೇಳಿದರು.

ವಿನಂತಿ ಮಾಡಿದ ಜಗ್ಗೇಶ್
''ಕೊಟ್ಟಿರುವ ಡೇಟ್ ಗಳನ್ನ ಬಳಸಿಕೊಂಡು, ಈ ವೇದಿಕೆ ಮೇಲೆ ಬಂದು ಆಕ್ಟ್ ಮಾಡಬೇಕು. ಇಲ್ಲಾಂದ್ರೆ, ನೀವು ಹೆತ್ತ ತಾಯಿಗೆ ದ್ರೋಹ ಮಾಡಿದ ಹಾಗೆ ಅಂತ ಎಲ್ಲರಿಗೂ ನಾನು ವಿನಂತಿ ಮಾಡುತ್ತೇನೆ'' - ನಟ ಜಗ್ಗೇಶ್.

ಬೇಕೇ ಬೇಕು ಅಂತಿದ್ರೆ, ಕಾಯುತ್ತಾರೆ.!
''ಯಾವುದೇ ಆಫರ್ ಇರಲಿ, ನೀವು ಬೇಕೇ ಬೇಕು ಅಂತಿದ್ರೆ, ಅವರು ನಿಮಗೋಸ್ಕರ ಖಂಡಿತ ಕಾಯುತ್ತಾರೆ. ನೀವಿಲ್ಲದೇ ಶೂಟಿಂಗ್ ಆಗುತ್ತಿದೆ, ಮ್ಯಾನೇಜ್ ಮಾಡುತ್ತಿದ್ದಾರೆ ಅಂದ್ರೆ, ಆ ಚಿತ್ರದಲ್ಲಿ ನೀವೂ ಆಕ್ಟ್ ಮಾಡಿದ್ರೂ ಒಂದೇ, ಬಿಟ್ಟರೂ ಒಂದೇ'' - ಮಾಸ್ಟರ್ ಆನಂದ್.

ನಮ್ಮ ಹಾರೈಕೆ ಖಂಡಿತ ಇದೆ
''ಸಿನಿಮಾ ಮುಖ್ಯ ನಿಜ. ಆದ್ರೆ, ಕಾಮಿಡಿ ಕಿಲಾಡಿಗಳು ವೇದಿಕೆಯಿಂದ ಬಂದಿರುವ ಕಾರಣ ತಾಯಿಯನ್ನ ಮರೆಯಬೇಡಿ. ಸಿನಿಮಾಗಳಲ್ಲಿ ಆಕ್ಟ್ ಮಾಡುತ್ತಿರುವವರಿಗೆ ಖಂಡಿತ ನಮ್ಮ ಹಾರೈಕೆ ಇದ್ದೇ ಇರುತ್ತದೆ'' ಎಂದರು ಮಾಸ್ಟರ್ ಆನಂದ್.


Click it and Unblock the Notifications











