Shrirastu Shubhamasthu: ಇಳಿ ವಯಸ್ಸಿನಲ್ಲೂ ಯುವಕರಂತೆ ನಟಿಸಿ ಪ್ರೇಕ್ಷಕರ ಮನ ಗೆದ್ದ ವೆಂಕಟ್ ರಾವ್
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಕೆಲ ತಿಂಗಳ ಹಿಂದಷ್ಟೇ ಆರಂಭವಾಗಿದೆ. ಅಕ್ಟೋಬರ್ 31 ರಿಂದ ಈ ಧಾರಾವಾಹಿ ಶುರುವಾಗಿದ್ದು, ಜನರು ಧಾರಾವಾಹಿಯ ಕಥೆಯನ್ನು ಮೆಚ್ಚಿಕೊಂಡಿದ್ದಾರೆ.
ಧಾರಾವಾಹಿಯಲ್ಲಿ ಅತ್ತೆ ಎಲ್ಲರಿಗೂ ತಲೆ ಬಾಗಿ ತಾನೊಬ್ಬಳೇ ಮನೆಯ ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುತ್ತಾಳೆ. ಆದರೆ ಮನೆಗೆ ಬರುವ ಸೊಸೆ ಅತ್ತೆಯನ್ನು ಬದಲಾಯಿಸಲು ಮುಂದಾಗುತ್ತಾಳೆ. ಸಣ್ಣ ಪುಟ್ಟ ವಿಚಾರಗಳಲ್ಲಿ ಅತ್ತೆಗೆ ಬುದ್ಧಿ ಹೇಳಿ, ಅವರವರ ಕೆಲಸವನ್ನು ಅವರೇ ಮಾಡಿಕೊಳ್ಳಲಿ ಎಂಬುದನ್ನು ಜಾಣ್ಮೆಯಿಂದ ಹೇಳುತ್ತಾಳೆ.
ಅತ್ತೆಗೂ ಸೊಸೆ ಎಂದರೆ ಮುದ್ದು ಜಾಸ್ತಿ. ಮನೆಯಲ್ಲಿ ಮಾವ ಹಾಗೂ ಮಗನ ಮಾತನ್ನೇ ಕೇಳುತ್ತಿದ್ದ ತುಳಸಿ, ಈಗ ನಿಧಾನವಾಗಿ ತಾನೂ ಕೂಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ ಇದರಲ್ಲಿ ದತ್ತ ತಾತನ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು.

ದತ್ತ ತಾತನ ಡೈಲಾಗ್ಸ್ಗೆ ಫಿದಾ
ದತ್ತ ತಾತನ ಬಗ್ಗೆ ತಿಳಿಯುವ ಕುತೂಹಲ ಹಲವರಿಗೆ ಇದ್ದೇ ಇರುತ್ತದೆ. ಅಂತಹವರು ಈ ಲೇಖನವನ್ನು ಓದಲೇಬೇಕು. ದತ್ತ ತಾತ ಸ್ಟ್ರಿಕ್ಟ್ ಆಗಿ ಕಂಡರೂ ತುಂಬಾ ತಮಾಷೆ ಹಾಗೂ ಮೃದು ಮನಸ್ಸಿನವರು. ದತ್ತ ತಾತನ ಒಂದೊಂದು ಡೈಲಾಗ್ ಕೂಡ ಕೇಳಲು ಚೆನ್ನಾಗಿರುತ್ತದೆ. ಪ್ರೇಕ್ಷಕರಂತೂ ದತ್ತ ತಾತ ಇರುವ ಸನ್ನಿವೇಶಗಳನ್ನು ಎಂಜಾಯ್ ಮಾಡುತ್ತಿರುತ್ತಾರೆ. ಧಾರಾವಾಹಿ ನೋಡದವರು ಕೂಡ ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ನೋಡುತ್ತಿದ್ದಾರೆ. ಇದಕ್ಕೆ ಕಾರಣವೇ ದತ್ತ ತಾತನ ಅಭಿನಯ. ಮೊಮ್ಮಗನನ್ನು ದಂಡಪಿಂಡ ಎಂದು ಕರೆಯುವ ತಾತ, ಸೊಸೆಗೆ ಸೋಗಲಾಡಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಮೊಮ್ಮಗಳು ಓಡಿ ಹೋಗಿ ಮದುವೆಯಾದಳು ಎಂದು ಅವಳನ್ನು ಓಡಿ ಹೋದವಳು ಎಂದೇ ಮಾತನಾಡಿಸುವ ತಾತನ ನಡವಳಿಕೆ ನಿಜ ಜೀವನದಲ್ಲಿ ಇರಿಟೇಟ್ ಆದರೂ, ರೀಲ್ ಧಾರಾವಾಹಿಯಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದೆ.

ತಿಂಡಿಪೋತ ದತ್ತ ತಾತ
ದತ್ತ ತಾತ ಎಷ್ಟು ಕೋಪ ಮಾಡಿಕೊಳ್ಳುತ್ತಾರೋ ಅಷ್ಟೇ ಸಾಫ್ಟ್ ಮನುಷ್ಯ. ಸದಾ ಎಲ್ಲರ ಬಳಿ ಜಂಭದಿಂದಲೇ ಮಾತನಾಡುವ ತಾತ, ಮನೆಯವರ ಒಳಿತಿಗಾಗಿಯೇ ಶ್ರಮಿಸುತ್ತಿರುತ್ತಾರೆ. ಯಾವಾಗಲೂ WWF ನೋಡುತ್ತಾ, ಸೊಸೆಗೆ ಕುರುಕಲು ತಿಂಡಿಯನ್ನು ಮಾಡಿಕೊಡುವಂತೆ ಪೀಡಿಸುತ್ತಿರುತ್ತಾರೆ. ಮನೆಗೆ ಯಾರೇ ಬಂದರೂ ಜೋರಾಗಿ ಮಾತನಾಡುವ ತಾತನಿಗೆ ತನ್ನದೇ ಮುಂದಾಳತ್ವವಿರಬೇಕು. ಯಾರ ಮಾತನ್ನೂ ಒಪ್ಪುವುದಿಲ್ಲ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾತ ನಡೆದುಕೊಳ್ಳುತ್ತಾರೆ. ಹಾಗಾಗಿ ಪ್ರೇಕ್ಷಕರಿಗೆ ತಾತನ ಪಾತ್ರ ತುಂಬಾ ಇಷ್ಟವಾಗಿದೆ.

ಅನುಭವ ಹಂಚಿಕೊಂಡ ಹಿರಿಯ ನಟ
ತಾತನ ನಿಜವಾದ ಹೆಸರು ಎಂಪಿ ವೆಂಕಟ್ ರಾವ್. ಇವರು 1959 ರಲ್ಲಿ ಮೊದಲ ಬಾರಿಗೆ ವೇದಿಕೆ ಹತ್ತಿದರು. ವೆಂಕಟ್ ರಾವ್ ಅವರು ಬರೋಬ್ಬರಿ ಆರೇಳು ದಶಕಗಳಿಂದ ಅಭಿನಯಿಸುತ್ತಿದ್ದಾರೆ. ಇವರು ತಮ್ಮ ನಟನೆಯ ಆರಂಭದಲ್ಲಿ ಬಹಳ ಕಷ್ಟ ಪಟ್ಟಿದ್ದು, ಪುಟ್ಟಣ್ಣಯ್ಯ ಕಣಗಾಲ್ ಅವರ ಬಳಿಯೂ ಕೆಲಸ ಮಾಡಿದ್ದಾರೆ. ಆಗ ಬರುತ್ತಿದ್ದ ಧಾರಾವಾಹಿಗಳೆಲ್ಲವೂ ಕೇವಲ 15-16 ದಿನಗಳು ಪ್ರಸಾರವಾಗುತ್ತಿತ್ತು. ಹೆಚ್ಚೆಚ್ಚು ಎಂದರೆ 60 ಎಪಿಸೋಡ್ಗಳು ಅಷ್ಟೇ. ಆದರೆ, ಈಗ ಬರುವ ಧಾರಾವಾಹಿಗಳು ಸಾವಿರ, ಎರಡು ಸಾವಿರ ಎಪಿಸೋಡ್ಗಳಾಗಿ ಪ್ರಸಾರವಾಗುತ್ತವೆ ಎಂದು ವೆಂಕಟ್ ರಾವ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆರೇಳು ವರ್ಷದ ಬಣ್ಣದ ಲೋಕದ ನಂಟು
90ರ ದಶಕದಲ್ಲಿ ದೂರದರ್ಶನ ಒಂದೇ ವಾಹಿನಿ ಪ್ರಸಾರವಾಗುತ್ತಿತ್ತು. ಈಗ ಹತ್ತಾರು ವಾಹಿನಿಗಳು ಇವೆ. ಎಸ್ಜೆಪಿ ಕಾಲೇಜಿನಲ್ಲಿ ಶೂಟಿಂಗ್ ನಡೆದರೂ ಟೇಪ್ ಅನ್ನು ಹೈದರಾಬಾದ್ಗೆ ತೆಗೆದುಕೊಂಡು ಹೋಗಬೇಕಿತ್ತು. ಬೆಂಗಳೂರಿನಲ್ಲಿ ಸ್ಟುಡಿಯೋ ಇರಲಿಲ್ಲ ಎಂದು ಅವರು ಹೇಳಿದ್ದರು. ಇನ್ನು ವೆಂಕಟ್ ರಾವ್ ಅವರು ಇತ್ತೀಚೆಗೆ ರಿಲೀಸ್ ಆದ 'ತೋತಾಪುರಿ' ಸಿನಿಮಾದಲ್ಲೂ ನಟಿಸಿದ್ದಾರೆ. ಅದೇನೇ ಇರಲಿ 82 ವರ್ಷದ ವೆಂಕಟ್ ರಾವ್ ಅವರು ಈಗಲೂ ನಟಿಸುವ ಹುಮ್ಮಸ್ಸನ್ನು ತೋರಿಸಿದ್ದಾರೆ ಎಂದರೆ ಎಲ್ಲರೂ ಖುಷಿ ಪಡುವ ವಿಚಾರ.


Click it and Unblock the Notifications











