ಬಿಗ್ ಬಾಸ್ 2ನೇ ಆವೃತ್ತಿಗೆ ಸುದೀಪ್ ಇಲ್ಲ!
ಕನ್ನಡ ಬಿಗ್ ಬಾಸ್ ಮೊದಲ ಆವೃತ್ತಿಯ ಯಶಸ್ಸಿನಲ್ಲಿ ನಿರೂಪಕನಾಗಿ ಜನರ ಮನ್ನಣೆಗಳಿಸಿರುವ ನಟ 'ಕಿಚ್ಚ' ಸುದೀಪ್ ಅವರ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಸುದೀಪ್ ಅವರ ನಿರೂಪಣೆ ಇದ್ದಿದ್ದರಿಂದಲೇ ಬಿಗ್ ಬಾಸ್ ಈ ಪರಿಯ ಜನಪ್ರಿಯತೆ ಗಳಿಸಿದೆ ಅನ್ನುವವರೂ ಇದ್ದಾರೆ. ನಮ್ಮ ಓದುಗರಂತೂ ನಿರೂಪಕರಲ್ಲಿ ಸುದೀಪ್ ಅವರೇ ಬೆಸ್ಟ್ ಎಂದು ಕೂಡ ತೀರ್ಪು ನೀಡಿದ್ದಾರೆ.
ಬಿಗ್ ಬಾಸ್ ಮತ್ತು ಸುದೀಪ್ ಬಗ್ಗೆ ಅಭಿಪ್ರಾಯ ಹೀಗಿರುವಾಗ ಸುದೀಪ್ ತಮ್ಮ ಅಭಿಮಾನಿಗಳಿಗೆ, ಬಿಗ್ ಬಾಸ್ ನಿರ್ಮಾತೃಗಳಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಬಿಗ್ ಬಾಸ್ ಮುಂದಿನ ಆವೃತ್ತಿಯಲ್ಲಿ ಅವರು ನಿರೂಪಣೆ ಮಾಡುವುದಿಲ್ಲ ಎಂದು. ಈ ಆಘಾತಕಾರಿ ಸಂಗತಿಯನ್ನು ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದು, ಇನ್ನು ಮುಂದೆ ಸಿನೆಮಾಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ.
ಈ ವಿಷಯ ಕೇಳಿ ಅವರ ಟ್ವಿಟ್ಟರ್ ಸ್ನೇಹಿತರು ತಮ್ಮ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ತೀರ್ಮಾನ ಬದಲಾಯಿಸಲು ಒಪ್ಪದ ಸುದೀಪ್, "ಸಿನೆಮಾ ಮೂಲಕವೇ ನಾನು ಸಹಸ್ರಾರು ಅಭಿಮಾನಿಗಳ ಹೃದಯ ಗೆದ್ದಿದ್ದೇನೆ. ಅದನ್ನೇ ಮುಂದುವರಿಸಲು ಇಚ್ಛಿಸುತ್ತೇನೆ. ಮುಂದಿನ ಆವೃತ್ತಿ ನಡೆಸಿಕೊಡುವವರು ಬಿಗ್ ಬಾಸ್ಗೆ ಇನ್ನೂ ಹೆಚ್ಚಿನ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ" ಎಂದು ಟ್ವೀಟಿಸಿದ್ದಾರೆ. [ಸುದೀಪ್ ಸ್ಥಾನ ತುಂಬುವವರು ಯಾರು?]
ಕಾರಣಗಳೇನಿರಬಹುದು? ಒಂದೊಂದಾಗಿ ನೋಡೋಣ ಬನ್ನಿ.

ಚಂದ್ರಿಕಾ ಹಿಂದಿರುಗಿದ ಬಗ್ಗೆ ಕೇಳಿಬಂದ ಟೀಕೆ
ಮಹಾನ್ ಜಗಳಗಂಟಿ ಎಂದು ಕುಖ್ಯಾತಿ ಗಳಿಸಿ ಜನರ ಅವಕೃಪೆಗೆ ಪಾತ್ರರಾಗಿದ್ದ ಚಂದ್ರಿಕಾ ಮರುಪ್ರವೇಶಕ್ಕೆ ಎಲ್ಲ ಕಡೆಯಿಂದ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಸುದೀಪ್ ಅವರು, ನನ್ನದು ನಿರೂಪಣೆ ಮಾತ್ರ, ನಿರ್ಧಾರ ತೆಗೆದುಕೊಳ್ಳುವವರು ಬಿಗ್ ಬಾಸ್ ಮಾತ್ರ ಎಂದು ಟ್ವೀಟಿಸಿದ್ದಾರೆ. ಈ ಟೀಕೆಯೇ ಅವರು ಹಿಂದೆ ಸರಿಯಲು ಕಾರಣವಾಯಿತೆ?

ಬಿಗ್ ಬಾಸ್ ಜೊತೆ ಸುದೀಪ್ ಕಿರಿಕ್?
ಅಶರೀರವಾಣಿಯಂತೆ ಬರುವ ಬಿಗ್ ಬಾಸ್ ಜೊತೆ ಸುದೀಪ್ ಅವರು ಏನಾದರೂ ಕಿರಿಕ್ ಮಾಡಿಕೊಂಡರಾ? ಓದುಗರಿಂದ ಇದು ಸಹಜವಾಗಿ ಬಂದಿರುವ ಮಾತು. ಸುದೀಪ್ ನಿರೂಪಕನಂತೆ ವರ್ತಿಸುತ್ತಿದ್ದರೂ, ಅನೇಕ ನಿರ್ಣಯಗಳಲ್ಲಿ ಸುದೀಪ್ ಅವರು ಕೈವಾಡ ಇದೆ ಎಂಬುದನ್ನು ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ.

ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಬೆಸ್ಟ್
ಬಿಗ್ ಬಾಸ್ ನಲ್ಲಿ ತಾವು ನಡೆಸಿಕೊಡುತ್ತಿರುವ ನಿರೂಪಣೆ ಅತ್ಯುತ್ತಮವಾಗಿದೆ ಎಂದು ಎಲ್ಲರೂ ಹೇಳುತ್ತಿರುವಾಗಲೇ ನಿವೃತ್ತರಾಗುವುದು ಬೆಸ್ಟ್ ಎಂದು ಅವರು ಅಂದುಕೊಂಡರೆ? ಅಥವಾ 2ನೇ ಆವೃತ್ತಿಯಲ್ಲಿ ಸ್ಟಿರಿಯೋಟೈಪ್ ಆಗಬಹುದೆಂಬ ಭಯದಿಂದ ಈ ನಿರ್ಧಾರವನ್ನು ತೆಗೆದುಕೊಂಡರೆ? ಉತ್ತರ ಕಂಡುಕೊಳ್ಳುವುದು ಬಲು ಕಷ್ಟ.

ಕಳಪೆ ಕಾರ್ಯಕ್ರಮ ಎಂಬ ಟೀಕೆಗೆ ಬೇಸರ?
ಬಿಗ್ ಬಾಸ್ ಕಾರ್ಯಕ್ರಮದಿಂದ ಎಷ್ಟೇ ಟಿಆರ್ಪಿ ಏರಿದ್ದರೂ ಈ ರಿಯಾಲಿಟಿ ಶೋ ಅತ್ಯಂತ ಕಳಪೆ ಮಟ್ಟದ್ದಾಗಿದೆ ಎಂಬ ಟೀಕೆಗಳು ಕೂಡ ಕೇಳಿಬಂದಿದ್ದವು. ಅಸಹ್ಯಕರ ಜಗಳ, ಅಸಂಬದ್ಧ ಟಾಸ್ಕುಗಳು, ಅರ್ಥವಿಲ್ಲದ ಒಡನಾಟಗಳ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಸಾಕು ನಿಲ್ಲಿಸ್ರಿ ಎಂದು ಹಲವಾರು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕಾರಣಗಳಿಂದಾಗಿ ಸುದೀಪ್ ಅವರಿಗೂ ಬೇಸರವಾಗಿತ್ತಾ? ಸುದೀಪ್ ಅವರ ನಿರ್ಧಾರ ಸರಿ ಅಂತೀರಾ?

ಆರ್ಜಿವಿ ಜೊತೆ ಮುಂದಿನ ಸಿನೆಮಾ
ರಾಮ್ ಗೋಪಾಲ್ ವರ್ಮಾ ನಿರ್ಮಾಣದ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಜೊತೆ ತಾವು ಸದ್ಯದಲ್ಲೇ ಮತ್ತೊಂದು ಹಿಂದಿ ಚಿತ್ರ ಮಾಡುತ್ತಿರುವುದಾಗಿ ಸುದೀಪ್ ಘೋಷಿಸಿದ್ದಾರೆ. ಅದರ ಜೊತೆಗೆ ಸುಮಾರು 6 ಕನ್ನಡ ಚಿತ್ರಗಳಲ್ಲಿಯೂ ಸುದೀಪ್ ನಟಿಸುತ್ತಿದ್ದಾರೆ. ಇಷ್ಟೊಂದು ಕಮಿಟ್ಮೆಂಟ್ ಇರುವಾಗ ಬಿಗ್ ಬಾಸ್ ಗೊಡವೆ ಬೇಡ ಅಂತ ಅಂದುಕೊಂಡಿರಲೂಬಹುದು.

ಸುದೀಪ್ ಸ್ಥಾನ ತುಂಬುವವರು ಯಾರು?
ಗಡುಸಾದ ಧ್ವನಿ, ಮೃದುವಾದ ಮಾತುಕತೆ, ಕಚಗುಳಿಯಿಡುವ ಹಾಸ್ಯಪ್ರಜ್ಞೆ, ಎಲ್ಲ ಸ್ಪರ್ಧಿಗಳನ್ನು ಶಿಸ್ತುಬದ್ಧಿನಲ್ಲಿಡುವ ಗತ್ತು, ಮೋಹಕ ನಗುವಿನಿಂದ ವೀಕ್ಷಕರನ್ನು ಸುದೀಪ್ ಸಮ್ಮೋಹಗೊಳಿಸಿದ್ದರು. ಆದರೆ, ಸುದೀಪ್ ಸ್ಥಾನ ತೆರವಾದ ನಂತರ ಆ ಸ್ಥಾನ ತುಂಬುವವರು ಯಾರು? ಯಾರಾದರೂ ಇದ್ದಾರಾ ಅಂಥವರು ನಿಮ್ಮ ಮನದಲ್ಲಿ? ಇದ್ದರೆ ಅವರ ಹೆಸರು ಇಲ್ಲಿ ಬರೆಯಿರಿ.


Click it and Unblock the Notifications











