5 ಕೋಟಿ ಗೆದ್ದು ಬೀದಿಗೆ ಬಂದ 'ಕರೋಡ್ ಪತಿ' ವಿನ್ನರ್ ಸುಶೀಲ್ ಕುಮಾರ್ ಜೀವನದ ಕಹಿ ಘಟನೆ
ಹಣ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ಎನ್ನುವುದಕ್ಕೆ 'ಕೌನ್ ಬನೇಗಾ ಕರೋಡ್ ಪತಿ' ಯಲ್ಲಿ 5 ಕೋಟಿ ಗೆದ್ದು ಬೀಗಿದ ಸುಶೀಲ್ ಕುಮಾರ್ ಜೀವನವೆ ಸಾಕ್ಷಿ. ಹೌದು, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಪ್ರಸಿದ್ಧ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ ಪತಿ 2011ನೇ ಆವೃತ್ತಿಯಲ್ಲಿ ಭಾಗಿಯಾಗಿದ್ದ ಸುಶೀಲ್ ಕುಮಾರ್ 5 ಕೋಟಿ ರೂ. ಗೆದ್ದಿದ್ದರು. 'ಕರೋಡ್ ಪತಿಯಲ್ಲಿ' 5 ಕೋಟಿ ರೂ. ಗೆದ್ದ ಮೊದಲ ಸ್ಪರ್ಧಿ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿದರು.
ಜೀವನದಲ್ಲಿ ಒಮ್ಮೆಯೂ ನೋಡಿರದ ಅಷ್ಟು ದೊಡ್ಡ ಮೊತ್ತದ ಹಣವನ್ನು ಗೆದ್ದು ಬೀಗಿದ್ದರು ಸುಶೀಲ್ ಕುಮಾರ್. ಒಮ್ಮೆಗೆ 5 ಕೋಟಿ ರೂ. ಗಳಿಸಿದ್ದರೂ ಸುಶೀಲ್ ಕುಮಾರ್ ನಂತರ ಬೀದಿಬಂದರು. 'ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯ ರಾತ್ರಿಲಿ ಕೊಡೆ ಹಿಡ್ಕೊಂಡ' ಎನ್ನುವ ಹಾಗೆ ಆಯ್ತು ಸುಶೀಲ್ ಕುಮಾರ್ ಜೀವನ.
ಐಎಎಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದ ಸುಶೀಲ್ ಕುಮಾರ್, ಕೋಟಿ ಕೋಟಿ ಹಣ ನೋಡುತ್ತಿದ್ದಂತೆ ಜೀವನದ ದಿಕ್ಕೆ ಬದಲಾಯಿತು. ಬಿಹಾರ ಮೂಲಕ ಸುಶೀಲ್ ಕುಮಾರ್ ಜೀವನದಲ್ಲಿ ಭಾರಿ ಹಣ ಬಂದ ಬಳಿಕ ಏನೆಲ್ಲ ಆಯಿತು ಎನ್ನುವ ನೋವಿನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಕೋಟಿ ಗೆದ್ದ ಬಳಿಕ ಜೀವನದ ಕೆಟ್ಟ ಸಮಯ ಪ್ರಾರಂಭವಾಯಿತು
'ಕೌನ್ ಬನೇಗಾ ಕರೋಡ್ ಪತಿಯಲ್ಲಿ 5 ಕೋಟಿ ಗೆದ್ದ ಬಳಿಕ ನನ್ನ ಜೀವನದ ಕೆಟ್ಟ ಸಮಯ ಪ್ರಾರಂಭವಾಯಿತು. 2015 ಮತ್ತು 2016 ನನ್ನ ಜೀವನದ ಅತ್ಯಂತ ಸವಾಲಿನ ಸಮಯ. ನಾನು ಸ್ಥಳಿಯ ಸೆಲೆಬ್ರಿಟಿ ಆಗಿದ್ದೇನೆ. ಪ್ರತೀ ತಿಂಗಳು 10 ರಿಂದ 15 ದಿನಗಳವರೆಗೆ ಬಿಹಾರದಾದ್ಯಂತ ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದರು. ಹಾಗಾಗಿ ನಾನು ಓದುವುದನ್ನು ನಿಲ್ಲಿಸಿದೆ. ನಿರುದ್ಯೋಗಿ ಅಂತ ಹೇಳಿಕೊಳ್ಳಲು ಅವಮಾನವಾಗುತ್ತಿದ್ದ ಕಾರಣ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದೆ." ಎಂದು ಸುಶೀಲ್ ಕುಮಾರ್ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಸಾಕಷ್ಟು ಹಣ ದಾನ ಮಾಡಿದೆ
"ಸಾಕಷ್ಟು ವ್ಯವಹಾರ ನಷ್ಟವಾಗಿ ತುಂಬ ಹಣ ಕಳೆದುಕೊಂಡೆ. ಗೆದ್ದ ಹಣವನ್ನು ದಾನ ಮಾಡಲು ಮುಂದಾದೆ. ತಿಂಗಳಿಗೆ 50 ಸಾವಿರ ದಾನ ಮಾಡುತ್ತಿದ್ದೆ. ಆದರೆ ಅನೇಕರು ನನ್ನ ಹಣವನ್ನು ದುರುಪಯೋಗ ಪಡಿಸಿಕೊಂಡರು. ಸಾಕಷ್ಟು ಜನ ನನಗೆ ವಂಚಿಸಿದರು. ಈ ಮಧ್ಯೆ ಪತ್ನಿ ಜೊತೆಗಿನ ಸಂಬಂಧವು ಹಾಳಾಯಿತು" ಎಂದಿದ್ದಾರೆ.

ಬಾವಿಯೊಳಗಿನ ಕಪ್ಪೆಯಾಗಿದ್ದೆ
''ಈ ಅವಧಿಯಲ್ಲಿ ಆದಾಯಕ್ಕೆ ಒಂದು ಮಾರ್ಗವನ್ನು ಕಂಡುಕೊಂಡೆ. ಸ್ನೇಹಿತರೊಡನೆ ಸೇರಿ ದೆಹಲಿಯಲ್ಲಿ ಕಾರುಗಳನ್ನು ಬಾಡಿಗೆಗೆ ಪಡೆದೆ. ಇದರಿಂದ ಪ್ರತಿನಿತ್ಯ ದೆಹಲಿಗೆ ಪ್ರಯಾಣಿಸಲು ಪ್ರಾರಂಭಿಸಬೇಕಾಯಿತು. ಈ ಸಮಯದಲ್ಲಿ ನಾನು ಕೆಲವು ವಿದ್ಯಾರ್ಥಿಗಳ ಗುಂಪನ್ನು ಭೇಟಿಯಾಗುತ್ತಿದ್ದೆ. ಹೊಸ ಆಲೋಚನೆಗಳನ್ನು ಬೆಳಸಿಕೊಂಡೆ. ಬಾವಿಯೊಳಗಿನ ಕಪ್ಪೆಯಂತಿದ್ದ ನನಗೆ ಬಹಳಷ್ಟು ವಿಷಯಗಳ ಬಗ್ಗೆ ಅರಿವಾಯಿತು. ಅಲ್ಲದೆ ಇದರಿಂದ ನಾನು ಮದ್ಯಪಾನ ಮತ್ತು ಧೂಮಪಾನ ಚಟಕ್ಕೆ ಬಲಿಯಾದೆ'' ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ.

ಪತ್ನಿ ಜೊತೆ ಜಗಳವಾಡಿಕೊಂಡೆ
''ಈ ನಡುವೆ ಸಿನಿಮಾ ಮಾಡುವುದರಲ್ಲಿ ಆಸಕ್ತಿ ಬೆಳೆಯಿತು. ಹಾಗಾಗಿ ದಿನ ಸಿನಿಮಾಗಳನ್ನು ನೋಡಿಕೊಂಡು ಸಮಯ ಕಳೆಯಲು ಪ್ರಾರಂಭಿಸಿದೆ. ಪದೇ ಪದೇ ಒಂದೇ ಸಿನಿಮಾವನ್ನು ನೋಡುತ್ತಿದ್ದೆ, ಪತ್ನಿ ಕೋಣೆಗೆ ಬಂದು ಕೇಳಿದಾಗ ಆಕೆಗೆ ಕೋಣೆಯಿಂದ ಹೊರಹೋಗುವಂತೆ ಗದರಿಸುತ್ತಿದ್ದೆ. ಇಬ್ಬರು ತಿಂಗಳುಗಳ ಕಾಲ ಮಾತು ಬಿಡಬೇಕಾಯಿತು'' ಎಂದು ನೋವು ತೋಡಿಕೊಂಡಿದ್ದಾರೆ.

ಹಸು ಹಾಲು ಮಾರಿ ಜೀವನ ನಡೆಸುತ್ತಿದ್ದೆ
''ಈ ಸಮಯದಲ್ಲಿ ಪತ್ರಕರ್ತರೊಬ್ಬರು ಕರೆ ಮಾಡಿದರು. ಆ ಸಮಯದಲ್ಲಿ ನನ್ನ ಗೆಲುವಿನ ಮೊತ್ತವನ್ನು ಕಳೆದುಕೊಂಡಿದ್ದೇನೆ, ಎರಡು ಹಸುಗಳನ್ನು ಖರೀದಿಸಿ, ಹಸು ಹಾಲನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೀನಿ ಎಂದು ಹೇಳಿದೆ. ಇದು ದೊಡ್ಡ ಮಟ್ಟಕ್ಕೆ ಸುದ್ದಿಯಾಯಿತು. ನಂತರ ಜನ ನನ್ನನ್ನು ಈವೆಂಟ್ ಗಳಿಗೆ ಆಹ್ವಾನಿಸುವುದನ್ನು ನಿಲ್ಲಿಸಿದರು. ಇನ್ನೂ ಕೆಲವರು ನನ್ನಿಂದ ದೂರ ಉಳಿದರು''
Recommended Video

ಎಲ್ಲಾ ದುಶ್ಚಟಗಳನ್ನು ಬಿಟ್ಟಿದ್ದೇನೆ
"ಪತ್ನಿ ಜೊತೆಗಿನ ಜಗಳ ವಿಚ್ಛೇದನ ಹಂತಕ್ಕೆ ಹೋಗಿತ್ತು. ಸಮಸ್ಯೆಗಳಿಂದ ಹೆದರಿ ಓಡುತ್ತಿದ್ದೆ. ನಂತರ ಮತ್ತೆ ಮನೆಗೆ ಮರಳಿ ಕೋಚಿಂಗ್ ತರಗತಿ ಪ್ರಾರಂಭಿಸಿದೆ. ಬಳಿಕ ಮನ ಶಾಂತಿಗಾಗಿ ಪರಿಸರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ. ಕಳೆದ ವರ್ಷ ಮದ್ಯಪಾನ ಮತ್ತು ಧೂಮಪಾನ ತ್ಯಜಿಸಿದೆ. ಈಗ ಪ್ರತೀ ದಿನ ನಾನು ನನ್ನನ್ನು ಸೆಲೆಬ್ರೇಟ್ ಮಾಡುತ್ತಿದ್ದೀನಿ" ಎಂದು 5 ಕೋಟಿ ರೂ.ಗೆದ್ದ ಬಳಿಕ ತನ್ನ ಜೀವನದಲ್ಲಾದ ಕಹಿ ಘಟನೆಯನ್ನು ಸುಶೀಲ್ ದೀರ್ಘವಾಗಿ ಬರೆದುಕೊಂಡಿದ್ದಾರೆ.


Click it and Unblock the Notifications











