ಸುವರ್ಣದಲ್ಲಿ ವೀರಗಡದ ಪ್ರೇಮಕಥೆ 'ಅಂತಃಪುರ'
ಸ್ಟಾರ್ ನೆಟ್ ವರ್ಕ್ ಕನ್ನಡ ಮನೋರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು ಮತ್ತೊಂದು ಹೊಸ ಧಾರಾವಾಹಿ 'ಅಂತಃಪುರ'ವನ್ನು ಇದೇ ಏಪ್ರಿಲ್ 20 ರಂದು ಸಂಜೆ 7 ಗಂಟೆಗೆ ಪ್ರಸಾರ ಪ್ರಾರಂಭಿಸುತ್ತಿದೆ.
'ಅಂತಃಪುರ' ಧಾರಾವಾಹಿಯು ಹೋರಾಟದೊಂದಿಗೆ ಶುರುವಾದ ಒಂದು ಪ್ರೇಮದ ಕಥೆಯಾಗಿದೆ. ವೀರಗಡ ಎಂಬ ಸ್ಥಳದಲ್ಲಿ ಹುಟ್ಟಿರುವ ಕಥೆ 'ಅಂತಃಪುರ'. ವೀರಗಡ ಮನೆತನದ ವಾರಸುದಾರನಾದ ಸುದೀಪನನ್ನು ಮೈಸೂರಿನ ಸರಳ ಸ್ವಭಾವದ ಹುಡುಗಿ ಸಹನಾ ಪ್ರೀತಿಸುತ್ತಾಳೆ. ಆದರೆ ಪ್ರೀತಿಸಿದವನ ಜೊತೆ ಮೊದಲ ಬಾರಿಗೆ ವೀರಗಡಕ್ಕೆ ತೆರಳಿದಾಗ ಅಲ್ಲಿನ ಮನೆಯೊಡತಿ ರುದ್ರಾಣಿ ದೇವಿಯಿಂದ ಕಹಿ ಸತ್ಯ ಅನುಭವಕ್ಕೆ ಬರುತ್ತದೆ.

ವೀರಗಡ ಮನೆತನದಿಂದ ಸಹನಾ ಮತ್ತು ಸುದೀಪ್ ಪಾರಾಗಲು ಪಡುವ ಪರದಾಟ ಹಾಗೂ ಮದುವೆಯಾಗಿ ರುದ್ರಾಣಿ ದೇವಿಯನ್ನು ಎದುರಿಸುವ ಬಗೆ ಇತ್ಯಾದಿಗಳನ್ನು ಅನಾವರಣಗೊಳಿಸುವ ಕತೆಯೇ ಅಂತಃಪುರ. [ಅರಗಿಣಿ ಸೀರಿಯಲ್ ಖುಷಿ 'ಗುಡುಗು' ಯಾರ ಮೇಲೆ]
ನಿರ್ದೇಶನದಲ್ಲಿ ದಶಕಗಳ ಕಾಲ ಅನುಭವ ಹೊಂದಿರುವ ನಾಡಿನ ಜನಪ್ರಿಯ ಅನುಭವಿ ನಿರ್ದೇಶಕ ಹಾಗೂ ನಟರೂ ಆದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ 'ಅಂತಃಪುರ' ಧಾರಾವಾಹಿಯು ಮೂಡಿಬರಲಿದೆ. ಇವರು ಕೆಲವು ಕಿರುತೆರೆ ಕಾರ್ಯಕ್ರಮಗಳನ್ನೂ ನಿರ್ದೇಶಿಸಿದ್ದಾರೆ ಅಲ್ಲದೇ ಕೇವಲ 2 ಗಂಟೆಯಲ್ಲಿ ಒಂದು ಚಲನಚಿತ್ರವನ್ನು ಚಿತ್ರಿಸಿದ ದಾಖಲೆ ಇವರದು.

ಅಂತಃಪುರ ಧಾರಾವಾಹಿಯು ಏಪ್ರಿಲ್ 20ರಿಂದ ಸಂಜೆ 7 ಗಂಟೆಗೆ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗುತ್ತದೆ. ವಾಹಿನಿಯ ಬಿಜಿನೆಸ್ ಹೆಡ್ ಆದ ಅನುಪ್ ಚಂದ್ರಶೇಖರ್ ಹೇಳುವಂತೆ, "ಅಂತಃಪುರ ಧಾರಾವಾಹಿಯು ಒಂದು ವಿಭಿನ್ನ ಪ್ರೇಮಕಥೆಯಾಗಿದ್ದು ಉತ್ತರ ಕರ್ನಾಟಕದಲ್ಲಿ ಚಿತ್ರಿಸಲಾಗಿದೆ. ವೀಕ್ಷಕರನ್ನು ಮನರಂಜಿಸಲು ಸುವರ್ಣ ವಾಹಿನಿಯು ಸದಾ ವಿನೂತನ ಹಾಗೂ ವಿಭಿನ್ನವಾದ ಕಾರ್ಯಕ್ರಮಗಳನ್ನು ಪರಿಚಯಿಸಿದೆ..."
'ಅಂತಃಪುರ' ಧಾರಾವಾಹಿಯಲ್ಲಿ ನುರಿತ ಕಲಾವಿದರು ಹಾಗೂ ತಂತ್ರಜ್ಞರ ಕಾರ್ಯವೈಖರಿ ವಿಶಿಷ್ಟವಾಗಿದ್ದು ಪ್ರೋಮೋಗಳಿಗೆ ಈಗಾಗಲೇ ಧನಾತ್ಮಕ ಪ್ರತಿಕ್ರಿಯೆ ದೊರೆತಿದೆ. 'ಅಂತಃಪುರ' ಧಾರಾವಾಹಿಯು ಸಾಕಷ್ಟು ವೀಕ್ಷಕರ ಮನಗೆಲ್ಲುತ್ತದೆ ಹಾಗೂ ನಮ್ಮ ವಾಹಿನಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸುತ್ತದೆ ಎಂಬ ಭರವಸೆ ನನ್ನದು" ಎಂದರು.

ಸುವರ್ಣ ವಾಹಿನಿಯಲ್ಲಿ ಈಗಾಗಲೇ ಮೂಡಿಬರುತ್ತಿರುವ ಅಮೃತವರ್ಷಿಣಿ, ಮಿಲನ, ಅನುರೂಪ, ಪಂಚರಂಗಿ ಪೋಂ ಪೋಂ, ಮಧುಬಾಲ ಹಾಗೂ ಅವನು ಮತ್ತೆ ಶ್ರಾವಣಿಗಳ ಗುಂಪಿಗೆ ಈಗ ಅಂತಪುರ ಹೊಸ ಸೇರ್ಪಡೆಯಾಗುತ್ತಿದೆ. ಸುವರ್ಣ ವಾಹಿನಿಯು ವೈವಿಧ್ಯತೆಗಷ್ಟೆ ಅಲ್ಲದೇ ನೋಡುಗರಿಗೆ ಮುದ ನೀಡುವ ಅನುಭವವನ್ನು ನೀಡಿರುವ ಖ್ಯಾತಿಯನ್ನು ಹೊಂದಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











