ಓದಿ, 'ಥಟ್ ಅಂತ ಹೇಳಿ!?' ರೂವಾರಿಗಳ ಸಂದರ್ಶನ

ಜನವರಿ 4, 2002 ರಿಂದ ಜೂನ್ 30, 2011ರವರೆಗೆ 1,756 ಎಪಿಸೋಡುಗಳನ್ನು ಥಟ್ ಅಂತ ಹೇಳಿ ಕಾರ್ಯಕ್ರಮ ಪೂರೈಸಿದೆ. ಇದನ್ನು ದೃಢೀಕರಿಸಿ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನ ಸಂಪಾದಕರಾಗಿರುವ 'ವಿಜಯ ಘೋಷ್' ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಈ ಮೂಲಕ ಇದು 'ಲಿಮ್ಕಾ ಬುಕ್ ಸೇರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದಂತಾಗಿದೆ.
ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿ ಹೊಸ ದಾಖಲೆಯೊಂದಿಗೆ ಮೆರೆಯುತ್ತಿರುವ ಇದು, ಬರೋಬ್ಬರಿ 10 ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿರವುದು ಸಾಮಾನ್ಯ ಸಾಹಸವೇನಲ್ಲ. ಇದೇ ಬರುವ ಜೂನ್ 17, 2012ಕ್ಕೆ 2000 ಸಂಚಿಕೆಗಳನ್ನು ಪೂರೈಸಲಿರುವ ಈ ಯಶಸ್ವಿ ಕಾರ್ಯಕ್ರಮದ ಹಿಂದಿರುವವರು ನಿರೂಪಕ-ಲೇಖಕ ಡಾ. ನಾ. ಸೋಮೇಶ್ವರ ಹಾಗೂ ನಿರ್ಮಾಪಕಿ-ನಿರ್ದೇಶಕಿ ಆರತಿ ಎಚ್ ಎನ್. ಅವರಿಬ್ಬರು 'ಒನ್ ಇಂಡಿಯಾ ಕನ್ನಡ'ಕ್ಕಾಗಿ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ, ಓದಿ...
ಪ್ರಶ್ನೆ: ಈ ಯಶಸ್ವೀ ಕಾರ್ಯಕ್ರಮದ ರೂವಾರಿಗಳು ಯಾರು?
ಡಾ. ನಾ. ಸೋಮೇಶ್ವರ: ಉಷಾ ಕಿಣಿ, ಮಹೇಶ್ ಜೋಷಿ ಹಾಗೂ ನಾನು ಈ ಕಾರ್ಯಕ್ರಮದ ರೂಪು-ರೇಷೆ ಸಿದ್ಧಪಡಿಸಿದ್ದು. ನಂತರ ಈ ಕಾರ್ಯಕ್ರಮದ ನಿರ್ಮಾಪಕರು ಹಾಗೂ ನಿರ್ದೇಶಕರು ಬದಲಾಗುತ್ತಾ ಬಂದು ಇದೀಗ ಆರತಿ ಎಚ್ ಎನ್ ಇದರ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ಸಾರಥ್ಯ ವಹಿಸಿದ್ದಾರೆ. ಅತೀ ಹೆಚ್ಚು ಕಾರ್ಯಕ್ರಮ ನಿರ್ಮಿಸಿದ ಕೀರ್ತಿಯೂ ಆರತಿಯವರದು.
ಪ್ರಶ್ನೆ: ರೆಗ್ಯುಲರ್ ಕಾರ್ಯಕ್ರಮದ ಜೊತೆಗೆ ಸ್ಪೆಷಲ್ ಕಾರ್ಯಕ್ರಮವೇನಾದರೂ ಪ್ರಸಾರವಾಗಲಿದೆಯೇ?
ಆರತಿ: ಹೌದು, ಇದೀಗ ನಾವು 2000 ಕಂತುಗಳ ಸಮೀಪ ಇದ್ದೇವೆ. ಬರುವ ತಿಂಗಳು, ಜೂನ್ 17, 2012ಕ್ಕೆ ಪ್ರಸಾರವಾಗಲಿರುವ 2000ದ ಸಂಚಿಕೆಯನ್ನು ವಿಶೇಷವಾಗಿ ರೂಪಿಸಿ ಪ್ರಸಾರ ಮಾಡಲಿದ್ದೇವೆ. ಅದನ್ನು ವಿಭಿನ್ನವಾಗಿ ಹಾಗೂ ತೀರಾ ಗ್ರಾಂಡ್ ಆಗಿಯೂ ರೂಪಿಸಲಿದ್ದೇವೆ.
ಪ್ರಶ್ನೆ: ಅದನ್ನು ಎಲ್ಲಿ ಹಾಗೂ ಯಾವ ರೀತಿ ವಿಭಿನ್ನವಾಗಿ ಚಿತ್ರೀಕರಿಸಲಿದ್ದೀರಿ?
ನಾ ಸೋಮೇಶ್ವರ: 2000ದ ಸ್ಪೆಷಲ್ ಸಂಚಿಕೆಯನ್ನು ಜೂನ್ 17, 2012 ರಂದು ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಚಿತ್ರೀಕರಿಸಲಿದ್ದೇವೆ. ಬೆಳಿಗ್ಗೆ 10 ರಿಂದ ಮದ್ಯಾನ್ಹ 3 ಗಂಟೆವರೆಗೆ ಅಡಿಶನ್, ಸೆಲೆಕ್ಷನ್ ಹಾಗೂ ಚಿತ್ರೀಕರಣ ನಡೆಯಲಿದೆ.
'ಅಲ್ಲೇ ಡ್ರಾ, ಅಲ್ಲೇ ಬಹಮಾನ' ಮಾದರಿಯಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಅಲ್ಲೇ ಕೇಳಲಾಗುವ ಪ್ರಶ್ನೆಗೆ ಅಲ್ಲೇ ಉತ್ತರ ಪಡೆದು ವಿಜೇತರನ್ನು ಘೋಷಿಸಿ ಬಹುಮಾನವನ್ನು ವಿತರಿಸಲಾಗುವುದು. ಮೊದಲು ಬಂದವರಿಗೆ ಮೊದಲು ಆದ್ಯತೆ ಎಂಬುದನ್ನು ಮರೆಯಬೇಡಿ.
ಪ್ರಶ್ನೆ: ಇದಕ್ಕೂ ಮೊದಲು ಮಾಡಿದ್ದ ವಿಶೇಷ ಕಾರ್ಯಕ್ರಮದ ಬಗ್ಗೆ ಹೇಳಿ
ಆರತಿ: ಈ ಮೊದಲು ಅಂಧರಿಗೆ, ಖೈದಿಗಳಿಗೆ ಹಾಗೂ ಏಡ್ಸ್ ಪೀಡಿತರಿಗೆ ವಿಶೇಷವದ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಅಂಧರಿಗೆ ಮಾಡಿದ ಕಾರ್ಯಕ್ರಮದ ಬಗ್ಗೆ ಪ್ರಾರಂಭದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದರೆ ಕಾರ್ಯಕ್ರಮ ಪ್ರಸಾರದ ನಂತರ ಟೀಕೆಗಳೆಲ್ಲ ಪ್ರಶಂಸೆಗಳಾಗಿ ಬದಲಾಯ್ತು. ಖೈದಿಗಳಿಗೆ ಹಾಗೂ ಏಡ್ಸ್ ಪೀಡಿತರಿಗೆ ಮಾಡಿದ ಕಾರ್ಯಕ್ರಮವೂ ಬಹು ಯಶಸ್ವಿ ಎನಿಸಿತು.
ಇಷ್ಟೇ ಅಲ್ಲ, ಎನ್ ಆರ್ ಐ (NRI) ಸ್ಪೆಷಲ್ ಕಾರ್ಯಕ್ರಮವನ್ನೂ ಸಹ ಮಾಡಿದ್ದೇವೆ. ಅದರಲ್ಲಿ ಖ್ಯಾತನಾಮರಾದ ಶ್ರೀವತ್ಸ ಜೋಶಿ, ವಲ್ಲೀಶ ಶಾಸ್ತ್ರಿ ಹಾಗೂ ಗುರುಪ್ರಸಾದ್ ಕಾಗಿನೆಲೆ ಭಾಗವಹಿಸಿದ್ದರು. ಅದು ನಮ್ಮ ಬಹು ಜನಪ್ರಿಯ ಸಂಚಿಕೆಗಳಲ್ಲೊಂದು. ಮುಂದಿನ ಪುಟ ನೋಡಿ...


Click it and Unblock the Notifications











