'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ
ಅತ್ತೆ ಸೊಸೆ ಜಗಳ, ಕುಟುಂಬದ ಒಳಗಿನ ದ್ವೇಷ, ಅಸೂಯೆ ಕಿತ್ತಾಟದ ಧಾರಾವಾಹಿಗಳ ನಡುವೆ ವಿಭಿನ್ನ ಎಂಬ ಕಾರಣಕ್ಕೆ ಜನರ ಮೆಚ್ಚುಗೆಗೆ ಒಳಗಾಗಿದ್ದ ಟಿಎನ್ ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಪ್ರಸಾರ ಸ್ಥಗಿತಗೊಂಡಿರುವುದು ಅನೇಕರಲ್ಲಿ ಬೇಸರ ಮೂಡಿಸಿದೆ. 'ಕಲರ್ಸ್ ಸೂಪರ್' ವಾಹಿನಿ ಮುಚ್ಚಿ ಹೋಗುತ್ತಿರುವುದರಿಂದ ಧಾರಾವಾಹಿ ಕೂಡ ನಿಂತು ಹೋಗುತ್ತಿದೆ.
Recommended Video
ಧಾರಾವಾಹಿಯನ್ನು ನಿಲ್ಲಿಸಬೇಡಿ, ಕಲರ್ಸ್ನ ಇನ್ನೊಂದು ವಾಹಿನಿಯಲ್ಲಿ ಅದರ ಪ್ರಸಾರ ಮುಂದುವರಿಸಿ ಎಂದು ಅನೇಕರು ಬೇಡಿಕೆ ಇರಿಸಿದ್ದಾರೆ. ಜತೆಗೆ ಧಾರಾವಾಹಿ ನಿಲ್ಲಿಸುತ್ತಿರುವುದಕ್ಕೆ ವಾಹಿನಿ ಮುಖ್ಯಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಕ್ಷಕರ ಅಸಮಾಧಾನ, ಕೋಪ ಗಮನಿಸಿರುವ ನಿರ್ದೇಶಕರ ಟಿಎನ್ ಸೀತಾರಾಮ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ನೋವು ತಂದಿದೆ
ಮಗಳು ಜಾನಕಿ ನಿಲ್ಲುತ್ತಿರುವುದಕ್ಕಾಗಿ ಅನೇಕರು ಬೇಸರಗೊಂಡಿದ್ದೀರಿ.ಇದರ ಬಗ್ಗೆ ನನಗೆ ಅಸಂಖ್ಯಾತ ಫೋನ್ ಕರೆಗಳೂ ಮತ್ತು ಮೆಸೇಜುಗಳೂ ಬರುತ್ತಿವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ವಾಹಿನಿಯ ಬಗ್ಗೆ ಮತ್ತು ವಾಹಿನಿಯ ಮುಖ್ಯಸ್ಥರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತ ಪಡಿಸಿರುವುದು ನನಗೆ ಅಪಾರ ನೋವು ತಂದಿದೆ ಎಂದು ಸೀತಾರಾಮ್ ಹೇಳಿದ್ದಾರೆ.

ಧಾರಾವಾಹಿ ನಿಲ್ಲುವುದು ಅನಿವಾರ್ಯ
ಕೊರೋನಾದಿಂದಾಗಿ ಉಂಟಾದ ಆರ್ಥಿಕ ಕುಸಿತದಿಂದಾಗಿ ಅವರು ಚಾನಲ್ ಅನ್ನು ಕೆಲ ತಿಂಗಳ ಮಟ್ಟಿಗೆ ಸ್ಥಗಿತಗೊಳಿಸುತ್ತಿರುವುದರಿಂದ 'ಮಗಳು ಜಾನಕಿ' ನಿಲ್ಲುವುದು ಅನಿವಾರ್ಯ. ಅದಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಹೆಸರು ಕೊಟ್ಟವರು ಅವರೇ
ಈ ಮಗಳು ಜಾನಕಿ ನಿಮಗೆ ಪ್ರಿಯವಾಗಲು ನನ್ನಷ್ಟೇ ವಾಹಿನಿಯ ಮುಖ್ಯಸ್ಥ ರಾದ ಪರಮೇಶ್ವರ್ ಗುಂಡಕಲ್ ಅವರೂ ಕಾರಣ. ಮಗಳು ಜಾನಕಿಯ ಕಥೆಯನ್ನು ಹಗಲೂ ರಾತ್ರಿ ನನ್ನ ಜತೆ ಕೂತು ಸಿದ್ಧಪಡಿಸಿದ್ದು ಅವರೇ. 'ಮಗಳು ಜಾನಕಿ' ಎಂಬ ಚಂದದ ಹೆಸರನ್ನು ಕೊಟ್ಟವರೂ ಅವರೇ.

ಎಲ್ಲ ಸಹಕಾರ ನೀಡಿದ್ದಾರೆ
ಅದರ ಮೊದಲ 50 ಕಂತುಗಳ ಚಿತ್ರ ಕಥೆಯನ್ನು ಎಲ್ಲರಿಗೂ ಹೃದಯಕ್ಕೆ ತಟ್ಟುವಂತೆ ಬರೆದು ಕೊಟ್ಟಿದ್ದು ಅವರು ಮತ್ತು ಅವರ ತಂಡ. ನಂತರ ಎಲ್ಲ ಬಗೆಯ ನಿರೂಪಣಾ ಸ್ವಾತಂತ್ರ್ಯವನ್ನೂ ಕಥೆಯ ಬಗ್ಗೆ ಕೊಟ್ಟರು. ಮುಂಚೆ ಕೇವಲ ಒಂದು ವರ್ಷ ಪ್ರಸಾರವಾಗಲು 'ಮಗಳು ಜಾನಕಿ'ಯ ಕರಾರು ಆಗಿದ್ದು. ಅದನ್ನು ಎರಡು ವರ್ಷಕ್ಕೆ ವಿಸ್ತರಿಸಿ ಕೊಟ್ಟವರು ಅವರೇ. ನಿರ್ಮಾಣದ ಹಂತದಲ್ಲಿ ಅನೇಕ ಕಷ್ಟ ಗಳು ಬಂದಾಗ ಅದನ್ನು ಪರಿಹರಿಸಿ ಕೊಟ್ಟವರು ಅವರೇ ಎಂದು ವಿವರಿಸಿದ್ದಾರೆ.

ದೂಷಿಸುವುದು ಸರಿಯಲ್ಲ
ಪರಮೇಶ್ವರ್ ಗುಂಡ್ಕಲ್ ಅವರಿಗೆ ವೈಯಕ್ತಿಕವಾಗಿ ಮತ್ತು ನಮ್ಮ ತಂಡದ ಪರವಾಗಿ ನಾನು ಋಣಿಯಾಗಿದ್ದೇನೆ.
ಈಗ ಮಗಳು ಜಾನಕಿ ಅನಿವಾರ್ಯ ಕಾರಣಗಳಿಂದ ನಿಲ್ಲುತ್ತಿರುವುದಕ್ಕೆ ಅವರನ್ನು ವೈಯಕ್ತಿಕ ಹೊಣೆ ಮಾಡಿ ಕೆಲವರು ದೂಷಿಸುವುದು ಅಮಾನವೀಯ ಮತ್ತು ನನಗೆ ಅಪಾರ ನೋವು ಉಂಟು ಮಾಡುತ್ತದೆ.

ಮತ್ತೊಂದು ಧಾರಾವಾಹಿ ಮಾಡುತ್ತೇನೆ
20 ವರ್ಷಗಳಿಂದ ನನ್ನ ಎಲ್ಲಾ ಧಾರಾವಾಹಿಗಳನ್ನೂ ಪ್ರಸಾರ ಮಾಡಿದವರು ಇದೇ ವಾಹಿನಿಯವರು. ಮುಂದೆಯೂ ಕೂಡ ಇಷ್ಟರಲ್ಲೇ ಮತ್ತೊಂದು ಧಾರಾವಾಹಿ ಮಾಡಿ ನಿಮ್ಮ ಪ್ರೀತಿ ಬೇಡಲು ನಿಮ್ಮ ಮುಂದೆ ಬರುತ್ತಿದ್ದೇನೆ. ಅದು ಜಾನಕಿಯಷ್ಟೇ ಅಥವಾ ಅದಕ್ಕಿಂತ ನಿಮಗೆ ಇಷ್ಟವಾಗಬಹುದೆಂಬ ಭರವಸೆ ನನಗೆ ಇದೆ.

ವೈಯಕ್ತಿಕ ದೂಷಣೆ ಬೇಡ
ಯಾರನ್ನೂ ವೈಯಕ್ತಿಕವಾಗಿ ದೂಷಿಸಿ ಮನಸ್ಸುಗಳನ್ನು ಕಹಿ ಮಾಡುವುದು ದಯವಿಟ್ಟು ಬೇಡ. ಸಾಧ್ಯವಾಗಿದ್ದರೆ ಕಲರ್ಸ್ ಕನ್ನಡದಲ್ಲಿ ಅವರು ಇದನ್ನು ಖಂಡಿತಾ ಹಾಕುತ್ತಿದ್ದರು. ಕಾರಣಾಂತರಗಳಿಂದ ಹಾಕಲು ಆಗುತ್ತಿಲ್ಲ. ಅದನ್ನೆಲ್ಲಾ ಅವರು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ಅದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳೋಣ. ನಿಮ್ಮ ಪ್ರೀತಿಗೆ ಮತ್ತೊಮ್ಮೆ ನಾನು ಆಭಾರಿ. ನಿಮ್ಮ ಪ್ರೀತಿ ಹೀಗೇ ಇರಲಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











