ಪಬ್ಲಿಕ್ ಟಿವಿಯಲ್ಲಿ ಅಣ್ಣಾ ಹಜಾರೆ ಲೈವ್
ಪಬ್ಲಿಕ್ ಟಿವಿ ಆರಂಭವಾಗಿ ಬುಧವಾರ ಫೆಬ್ರವರಿ 12ಕ್ಕೆ 2 ವರ್ಷ. ಈ ಹಿನ್ನೆಲೆಯಲ್ಲಿ ವಾಹಿನಿ ನಾಲ್ಕು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ಈ ಸಂಭ್ರಮದಲ್ಲಿ ಜೊತೆಯಾಗುತ್ತಿರುವುದು ವಿಶೇಷ.
ಫೆ. 12ರ ಬೆಳಗ್ಗೆ 7.30ಕ್ಕೆ ಆರಂಭವಾಗುವ ನ್ಯೂಸ್ ಕೆಫೆಯಿಂದ ವಾರ್ಷಿಕೋತ್ಸವ ಸಂಭ್ರಮಗಳು ಶುರುವಾಗಲಿದೆ. ಚಾನಲ್ ಮುಖ್ಯಸ್ಥ ಎಚ್.ಆರ್. ರಂಗನಾಥ್ ನಡೆಸಿಕೊಡುವ ನ್ಯೂಸ್ ಕೆಫೆಯಲ್ಲಿ ಸುದ್ದಿಯ ವಿಶ್ಲೇಷಣೆ ಮಾಡಲಿದ್ದಾರೆ ಪುಟಾಣಿ ಮಕ್ಕಳು. [ಪಬ್ಲಿಕ್ ಟಿವಿ ಕನ್ನಡ ಚಾನಲ್ ಈಗ ನಂ. 2]

ಮಧ್ಯಾಹ್ನ 1 ಗಂಟೆಗೆ ಪಬ್ಲಿಕ್ ಸಂಭ್ರಮದ ಅತಿ ವಿಶಿಷ್ಠ "ಪಬ್ಲಿಕ್ ಟಿವಿಯಲ್ಲಿ ಗಾಂಧೀವಾದಿ ಅಣ್ಣಾ ಹಜಾರೆ" ಕಾರ್ಯಕ್ರಮ ಆರಂಭವಾಗಲಿದೆ. ಸ್ಟುಡಿಯೋದಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ನಿರ್ದೇಶಕ ಟಿ.ಎನ್. ಸೀತಾರಾಮ್, ಜ್ಞಾನಪೀಠ ಪುರಸ್ಕೃತರಾದ ಯು.ಆರ್. ಅನಂತಮೂರ್ತಿ, ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ, ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುಗತ ಶ್ರೀನಿವಾಸ್ ರಾಜು ಪಾಲ್ಗೊಳ್ಳಲಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಎಸ್.ಆರ್. ಹಿರೇಮಠ, ವಿವೇಕಾನಂದ ಯೂತ್ ಮೂವ್ಮೆಂಟ್ ನ ಡಾ. ಬಾಲಸುಬ್ರಮಣ್ಯಂ, ನಟ ಉಪೇಂದ್ರ, ನಟಿ ಶ್ರುತಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಜನಶಕ್ತಿಯ ಶಂಕರ ಬಿದರಿ, ಉದ್ಯಮಿ ಎಂ.ಪಿ. ಶ್ಯಾಮ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಗೋಪಾಲಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ. ರಾಮಮೂರ್ತಿ, ಸಾಹಿತಿ ಹಾಗೂ ಮಾಜಿ ಸಚಿವೆ ಪ್ರೊ.ಬಿ.ಟಿ. ಲಲಿತಾನಾಯಕ್, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶರಣ್ ಪಾಟೀಲ್, ಮಾಜಿ ಸಚಿವ ಸುರೇಶ್ ಕುಮಾರ್, ಖ್ಯಾತ ಗಾಯಕರಾದ ಕವಿತಾ ಕೃಷ್ಣಮೂರ್ತಿ, ಎಲ್. ಸುಬ್ರಮಣ್ಯಂ ಮತ್ತು ಸಂಗೀತ ಕಟ್ಟಿ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.
ಜೊತೆಗೆ ಆಯ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂವಾದಕ್ಕೆ ದನಿಗೂಡಿಸಲಿದ್ದಾರೆ. ಇದರ ಮರು ಪ್ರಸಾರ ಸಂಜೆ 7ಕ್ಕೆ ಇರುತ್ತದೆ. ರಾತ್ರಿ 10ಕ್ಕೆ ಸ್ಪೆಷಲ್ 'ಹಾಟ್ ಸೀಟ್' ಕಾರ್ಯಕ್ರಮ ಪ್ರಸಾರವಾಗಲಿದೆ. ಸದಾ ರಾಜಕಾರಣಿಗಳಿಗೆ ನೇರ ಪ್ರಶ್ನೆ ಹಾಕಿ ಬೆವರಿಳಿಸುವ ವಾಹಿನಿಯ ಮುಖ್ಯಸ್ಥ ಎಚ್ ಆರ್ ರಂಗನಾಥ್ ಗೆ ಪ್ರಶ್ನೆ ಹಾಕಿದ್ದಾರೆ, ಉತ್ತರವನ್ನೂ ಪಡೆದಿದ್ದಾರೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ. ತಪ್ಪದೆ ವೀಕ್ಷಿಸಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











