ಜೊತೆ ಜೊತೆಯಲಿ: ಆರ್ಯವರ್ಧನ್ ಜಾಗಕ್ಕೆ ಬರುವವರು ಯಾರು?
ಕಳೆದ ವಾರ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಧಾರಿಯ ಅನಿರುದ್ಧ್ ಅವರನ್ನು ಸೀರಿಯಲ್ ನಿಂದ ಹೊರ ಹಾಕಲಾಗಿತ್ತು. ಅನಿರುದ್ಧ್ ಶೂಟಿಂಗ್ಗೆ ಬರುವುದಾಗಿ ಹೇಳಿದ್ದಾರೆ. ಆದರೆ, ಧಾರಾವಾಹಿ ತಂಡ ಒಪ್ಪಿಕೊಂಡಿಲ್ಲ.
ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಬದಲು ಬೇರೆ ನಟನನ್ನು ತರುವ ಪ್ರಯತ್ನ ನಡೆದಿದೆ. ಹೀಗಾಗಿ ಕೆಲವರನ್ನು ಶಾರ್ಟ್ ಲಿಸ್ಟ್ ಕೂಡ ಮಾಡಲಾಗಿದೆ. ಅದರಂತೆ ಆರ್ಯವರ್ಧನ್ ಪಾತ್ರಧಾರಿಯಾಗಿ ಯಾರು ಬರುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಈ ಹಿಂದೆ ಅನಿರುದ್ಧ್ ಬದಲು ಅನೂಪ್ ಭಂಡಾರಿಯನ್ನು ಕರೆತರುವ ಪ್ರಯತ್ನ ನಡೆದಿತ್ತು. ಆದರೆ ಧಾರಾವಾಹಿ ತಂಡದ ಪ್ರಯತ್ನ ವಿಫಲವಾಗಿತ್ತು. ಇದೀಗ ಮತ್ತೊಬ್ಬ ನಟನಿಗೆ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ಕರೆ ಮಾಡಿದ್ದಾರೆ ಅವರು ಈ ಸೀರಿಯಲ್ನಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.

ಜೊತೆ ಜೊತೆಯಲಿ ತಂಡದಲ್ಲಿ ಎದ್ದ ಬಿರುಗಾಳಿ!
ಕಳೆದ ವಾರ ಸ್ಕ್ರಿಪ್ಟ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಅನಿರುದ್ಧ ಅವರು ಮೂರ್ಖ ಎಂದು ಬೈದಿದ್ದರು. ಈ ಮಾತಿನಿಂದ ಧಾರಾವಾಹಿ ತಂಡದಲ್ಲಿ ಸುನಾಮಿ ಅಲೆ ಎದ್ದಿತ್ತು. ಹಾಗೇಳಿದ ಅನಿರುದ್ಧ್ ಅವರು ಶೂಟಿಂಗ್ ಸೆಟ್ ನಿಂದ ಹೊರ ಬಂದಿದ್ದರು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಕೊನೆಗೆ ಆರೂರು ಜಗದೀಶ್, ಧಾರಾವಾಹಿಯ ನಿರ್ಮಾಪಕರು ಸೇರಿದಂತೆ ಕೆಲವರು ಸುದ್ಧಿಗೋಷ್ಠಿ ನಡೆಸಿದ್ದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಮುಂದುವರೆಯೊಲ್ಲ. ಹಾಗಂತ ಧಾರಾವಾಹಿಯನ್ನೂ ಕೂಡ ನಿಲ್ಲಿಸೊಲ್ಲ ಎಂದು ಹೇಳಿದ್ದರು. ಈಗ ಈ ವಿಚಾರ ಹಳೆಯದ್ದು. ಆದರೆ ಕುತೂಹಲವಿರುವುದು ಮುಂದಿನ ಆರ್ಯವರ್ಧನ್ ಪಾತ್ರವನ್ನು ಯಾರು ಮುಂದುವರೆಸುತ್ತಾರೆ ಎಂಬುದು.

ಆರ್ಯವರ್ಧನ್ ಆಗಲು ಹಲವು ಹೆಸರು!
ಆರ್ಯವರ್ಧನ್ ಪಾತ್ರಕ್ಕೆ ಯಾರೆಲ್ಲಾ ಸೂಟ್ ಆಗುತ್ತಾರೆ. ಯಾವ ನಟ ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿತ್ತು. ಸಿಟಿ ರವಿ ಯಿಂದ ಹಿಡಿದು ನಿರ್ದೇಶಕ ಅನೂಪ್ ಭಂಡಾರಿ ವರೆಗೂ ನಟಿಸಬಹುದು ಎಂದು ಊಹಿಸಲಾಗಿತ್ತು. ನಟ ವಿಜಯ್ ರಾಘವೇಂದ್ರ, ಜೆಕೆ, ದಿಲೀಪ್ ರಾಜ್, ಅನೂಪ್ ಭಂಡಾರಿ, ಹೀಗೆ ಎಲ್ಲರ ಹೆಸರೂ ಕೇಳಿ ಬಂದಿತ್ತು. ಧಾರಾವಾಹಿ ತಂಡ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಕರೆಯನ್ನು ಕೂಡ ಮಾಡಿದ್ದರು. ಆದರೆ ಸಿನಿಮಾ ಕಾರಣ ನೀಡಿ ಅನೂಪ್ ಭಂಡಾರಿ ಅವರು ಆರ್ಯವರ್ಧನ್ ಪಾತ್ರವನ್ನು ನಿರಾಕರಿಸಿದ್ದರು.

ಯಾರಾಗುತ್ತಾರೆ ಆರ್ಯವರ್ಧನ್?
ಈಗಾಗಲೇ ಧಾರಾವಾಹಿ ಎಪಿಸೋಡ್ಗಳು ಮುಂದಕ್ಕೋಗುತ್ತಿವೆ. ಜೊತೆ ಜೊತೆಯಲಿ ಧಾರಾವಾಹಿ ತಂಡ ಆರ್ಯವರ್ಧನ್ ಪಾತ್ರಕ್ಕಾಗಿ ಹುಡುಕಾಟ ನಡೆಸಿದೆ. ಈ ನಡುವೆ ಅನಿರುದ್ಧ್ ತಾವು ಮತ್ತೆ ಶೂಟಿಂಗ್ ನಡೆಸಿಕೊಡಲು ಬರುವುದಾಗಿ ಹೇಳಿದ್ದರು. ಆದರೆ ಧಾರಾವಾಹಿ ತಂಡ ನಿರಾಕರಿಸಿದ್ದು, ಶತಾಯಗತಾಯ ಬೇರೆ ನಟನನ್ನು ತರುವ ಪ್ರಯತ್ನ ಮಾಡಿದೆ. ಇದೀಗ ನಟ ಹರೀಶ್ ರಾಜ್ ಅವರಿಗೆ ಕರೆ ಮಾಡಿದ್ದಾರೆ.

ಹರೀಶ್ ರಾಜ್ ಎಂಟ್ರಿ ಬಹುತೇಕ ಖಚಿತ!
ನಟ ಹರೀಶ್ ರಾಜ್ ಅವರಿಗೆ ಆರೂರು ಜಗದೀಶ್ ಕರೆ ಮಾಡಿದ್ದಾರೆ. ಆರ್ಯವರ್ಧನ್ ಪಾತ್ರಕ್ಕೆ ನಟಿಸಲು ಹರೀಶ್ ರಾಜ್, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ, ಹರೀಶ್ ರಾಜ್ ಇನ್ನೂ ಮಾತುಕತೆಯನ್ನು ನಡೆಸುತ್ತಿದ್ದಾರೆ. ಹೀಗಾಗಿ ಎಲ್ಲಾ ಒಪ್ಪಿಗೆಯಾಗಿ ಓಕೆ ಎಂತಾದರೆ ಹರೀಶ್ ರಾಜ್ ಅವರು ಆರ್ಯವರ್ಧನ್ ಆಗಿ ಕಿರುತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಮಾಹಿತಿ ಬಂದಿದೆ. ಈಗಾಗಲೇ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಹರೀಶ್ ರಾಜ್ ಅವರು ಜೊತೆ ಜೊತೆಯಲಿ ತಂಡವನ್ನು ಸೇರುವುದು ಬಹುತೇಕ ಖಚಿತವಾಗಿದೆ.


Click it and Unblock the Notifications











