'ಇಮ್ಮಡಿ ಸಾವಿತ್ರಿ'ಯ ಅದ್ದೂರಿ ಕಲ್ಯಾಣ ಮಹೋತ್ಸವ!
ಸಿನಿಮಾ ಮುಹೂರ್ತಗಳು ಸುದ್ದಿಯಾಗೋದು ಎಲ್ಲರಿಗೂ ಗೊತ್ತು. ಆದರೆ 'ಜೀ ಕನ್ನಡ'ದಲ್ಲಿ ಧಾರಾವಾಹಿ ಮುಹೂರ್ತಗಳೂ ಸುದ್ದಿ ಮಾಡಲು ಶುರು ಮಾಡಿದವು. ಇವು ಸೀರಿಯಲ್ ಗಳ 'ಮದುವೆ ಮುಹೂರ್ತ'ಗಳು! ಅಂತಹ ಮತ್ತೊಂದು ಭರ್ಜರಿ ಮದುವೆ ಮುಹೂರ್ತ ಈಗ ನಿಶ್ಚಯವಾಗಿದೆ. ಅದು ಎರಡನೇ ಸಾವಿತ್ರಿಯ ಮದುವೆ ಮುಹೂರ್ತ; ಚಿ.ಸೌ. ಸಾವಿತ್ರಿಯ ಕಲ್ಯಾಣೋತ್ಸವ.
'ಚಿ.ಸೌ.ಸಾವಿತ್ರಿ' ವೊದಲನೇ ಆವೃತ್ತಿಯ ಯಶಸ್ಸಿನ ಅಲೆಯಲ್ಲಿ, ಕಳೆದ ಜುಲೈ 30 ರಂದು ಶುರುವಾಯ್ತು 'ಚಿ.ಸೌ.ಸಾವಿತ್ರಿ'ಯ ಎರಡನೇ ಸೀಸನ್. ಈ 'ಇಮ್ಮಡಿ ಸಾವಿತ್ರಿ', ಈಗ ಜನರ ಇಮ್ಮಡಿ ಪ್ರೀತಿಯನ್ನೂ ಗಳಿಸಿಕೊಂಡು ಮದುವೆಗೆ ತಯಾರಾಗಿ ನಿಂತಿದ್ದಾಳೆ.

ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್
ಸಾವಿತ್ರಿ ಪ್ರೀತಿಸಿದ್ದು ಸತ್ಯನನ್ನೇ, ಅಪ್ಪ ಅಮ್ಮ ನೋಡಿರೋದೂ ಸತ್ಯನನ್ನೇ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಆದರೆ ಸತ್ಯನ ಅಮ್ಮ ನೂರು ಸುಳ್ಳು ಹೇಳಿ ಈ ಮದುವೆ ಮಾಡಲು ಹೊರಟಿದ್ದಾಳೆ. ಸಾವಿತ್ರಿ ಅಪ್ಪ ಈ ಮದುವೆಗಾಗಿ ಲಕ್ಷ ಲಕ್ಷ ರೂ ವರದಕ್ಷಿಣೆ ಕೊಟ್ಟಿದ್ದಾರೆ. ರಾಮನಂಥ ಸತ್ಯ, ರಾವಣನಂಥ ಪ್ರತಾಪ ಎಂಬುವನನ ಜತೆ ಫ್ರೆಂಡ್ಶಿಪ್ ಮಾಡಿದ್ದಾನೆ. ಈ ರಾಮ-ಸೀತೆ ಮದುವೇಲಿ ಆ ರಾವಣ ಏನು ಮಾಡ್ತಾನೆ?

ವರದಕ್ಷಿಣೆಯಿಂದಲೇ ಸಮಸ್ಯೆ ಸಾವಿತ್ರಿ ಮದುವೆ
ಸತ್ಯನ ಅಮ್ಮನ ಸುಳ್ಳುಗಳು ಇಲ್ಲಿ ಬಯಲಾಗುತ್ತವಾ? ಸತ್ಯನ ಅಪ್ಪ, ಕೊಟ್ಟಿರೋ ವರದಕ್ಷಿಣೆಯಿಂದಲೇ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ತಾರಾ? ಈ ಎಲ್ಲ ಪ್ರಶ್ನೆಗಳ ಜತೆಗೇ ಮದುವೆ ತಯಾರಿ ಶುರುವಾಗಿದೆ. ಅನಂತವೇಲು, ಪದ್ಮಾವಾಸಂತಿ, ಮೈಸೂರು ಬಾಲು, ಉಷಾ ಭಂಡಾರಿ, ಸೌಮ್ಯಲತಾ ಹೀಗೆ ಅನುಭವಿ ನಟರ ದಂಡು ಈ ಧಾರಾವಾಹಿಯಲ್ಲಿದೆ.

ಸಾವಿತ್ರಿ ಪಾತ್ರದಲ್ಲಿ ನಟಿಸುತ್ತಿರುವ ನಂದಿನಿ ಮೂರ್ತಿ
ನಾಯಕ ಸತ್ಯನ ಪಾತ್ರದಲ್ಲಿ ಹೊಸ ಪರಿಚಯ ಸುನಿಲ್ ಸಾಗರ ಹಾಗೂ ಖಳನಾಯಕ ಪ್ರತಾಪನ ಪಾತ್ರದಲ್ಲಿ ಪ್ರಕಾಶ್ ಶೆಟ್ಟಿ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಾವಿತ್ರಿ ಪಾತ್ರದಲ್ಲಿ ನಟಿಸುತ್ತಿರುವ ನಂದಿನಿ ಮೂರ್ತಿ, ತಂಗಿಯರಾದ ವಿನುತಾ-ರಂಜಿತಾರ ಪಾತ್ರದಲ್ಲಿರೋ ಅನುಪಮಾ ಹಾಗೂ ಶ್ರೇಯಾ ಈಗಾಗಲೇ ವೀಕ್ಷಕರ ಕಣ್ಮನ ಸೆಳೆದಿದ್ದಾರೆ.

ನಟ ಅಜಯ್ ರಾವ್ ವಿಶೇಷ ಅತಿಥಿ
"ಕಳೆದ ಹತ್ತು ದಿನಗಳಿಂದ ಈ ಅದ್ದೂರಿ ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಮದುವೆಗಾಗಿ ಹೊಸ ರೀತಿಯ ಸೆಟ್ ಗಳನ್ನ ಹಾಕಿದ್ದೇವೆ. ನಟ ಅಜಯ್ ರಾವ್ ವಿಶೇಷ ಅತಿಥಿಯಾಗಿ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ' ಅಂತಾರೆ ಚಿ.ಸೌ.ಸಾವಿತ್ರಿ ನಿರ್ದೇಶಕಿ ಶ್ರುತಿ ನಾಯ್ಡು.

ನವೆಂಬರ್ 15ರಿಂದ ಸಾವಿತ್ರಿ ಕಲ್ಯಾಣೋತ್ಸವ
"ಮೊದಲನೇ ಸಾವಿತ್ರಿಯ ಮದುವೆ ಲಲಿತ ಮಹಲ್ನಲ್ಲಿ ನಡೆದಾಗ ನಮಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಸಾವಿತ್ರಿಯ ಎರಡನೇ ಸೀಸನ್ ಕೂಡಾ ಹೆಸರು ಗಳಿಸಿದೆ. ಇದು ನಮಗೆ ಹೆಮ್ಮೆ" ಅಂತಾರೆ ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಉಪಾಧ್ಯಕ್ಷ ಡಾ. ಎಂ. ಗೌತಮ್ ಮಾಚಯ್ಯ. ಜೀ ಕನ್ನಡದಲ್ಲಿ ನವಂಬರ್ 15 ರಿಂದ 23ರವರೆಗೆ ಸಂಜೆ 7 ಗಂಟೆಗೆ 'ಸಾವಿತ್ರಿ ಕಲ್ಯಾಣೋತ್ಸವ'ದ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ.
ಇದೇ ನವಂಬರ್ 15ರಿಂದ 'ಸಾವಿತ್ರಿ ಕಲ್ಯಾಣೋತ್ಸವ' ಶುರು. ವೊದಲನೇ ದಿನ ಮದುವೆ ತಯಾರಿ. ಎರಡನೇ ದಿನ ಚಪ್ಪರ ಪೂಜೆ. ಮೂರನೇ ದಿನ ವರ ಪೂಜೆ. ನಾಲ್ಕನೇ ದಿನ ಬಾಚುಲರ್ಸ್ ಪಾರ್ಟಿ ! ಐದನೇ ದಿನ 'ಬೆಂಗಳೂರು ಅರಮನೆ'ಯಲ್ಲಿ ಅದ್ದೂರಿ ಮದುವೆ. ಸಮಾಜದ ಅನೇಕ ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಿ ನೂತನ ವಧೂವರರಿಗೆ ಶುಭ ಹಾರೈಸುತ್ತಾರೆ.


Click it and Unblock the Notifications











