ವಿಲನ್ ಜೊತೆ ದುಬೈಗೆ ಪರಾರಿಯಾದ ವಿಶಾಖಾ!

ದುಬೈ ಕನ್ನಡಿಗರ ಜೊತೆ ಅಲ್ಲಿ ಈ ಧಾರಾವಾಹಿ ತಂಡ ಸಂವಾದ ಕಾರ್ಯಕ್ರಮವನ್ನೂ ನಡೆಸಿದೆ. ರಾಧಾ ಕಲ್ಯಾಣ ಅಲ್ಲಿಯೂ ಕೂಡ ಸಾಕಷ್ಟು ಜನಪ್ರಿಯತೆ ಪಡೆದಿದೆ. ಅಲ್ಲಿರುವ ಸಾಕಷ್ಟು ಕನ್ನಡಿಗರು ತಪ್ಪದೇ ಈ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬಹಳಷ್ಟು ಮಂದಿ ಇದನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಲ್ಲಿನ ಕನ್ನಡಿಗರಲ್ಲಿ ಸಾಕಷ್ಟು ಮಂದಿ ಅಲ್ಲಿ ನಡೆದ ಚಿತ್ರೀಕರಣವನ್ನೂ ವೀಕ್ಷಿಸಿದ್ದಾರೆ.
ರಾಧಾ ಕಲ್ಯಾಣ ಧಾರಾವಾಹಿ ಸಾಕಷ್ಟು ಕುತೂಹಲದ ತಿರುವು ಪಡೆದುಕೊಂಡಿದೆ. ಸಿನಿಮಾದಲ್ಲಿ ನಟಿಸಬೇಕೆಂಬ ಹುಚ್ಚು ಹಿಡಿಸಿಕೊಂಡಿರುವ ಕಥಾನಾಯಕಿಯ ಅಕ್ಕ ವಿಶಾಖಾ, ಆಗಿರುವ ಮದುವೆಯನ್ನು ಧಿಕ್ಕರಿಸಿ ಜಾಹೀರಾತು ಏಜೆಂಟನ ಮಾತನ್ನು ನಂಬಿ ನಟಿಯಾಗಲು ದುಬೈಗೆ ತೆರಳಿದ್ದಾಳೆ. ಅಲ್ಲಿ ಖಳನಾಯಕನ ಕೈಗೆ ಸಿಕ್ಕ ವಿಶಾಖಾ ಏನಾಗಲಿದ್ದಾಳೋ!
ಇತ್ತ ಕಥಾನಾಯಕಿ ರಾಧಿಕಾ ತನ್ನಿಂದಲೇ ಎಲ್ಲಾ ಆಗುತ್ತಿದೆ ಎಂದು ನೊಂದು ಮನೆಬಿಟ್ಟು ಆಶ್ರಮ ಸೇರಿಕೊಂಡಿದ್ದಾಳೆ. ಅವಳನ್ನು ಹುಡುಕುತ್ತಾ ಅಲೆಯುತ್ತಿದ್ದಾನೆ ಕಥಾನಾಯಕ ಕೃಷ್ಣ. ಇತ್ತ ಮನೆ ಬಿಟ್ಟು ದುಬೈ ಸೇರಿಕೊಂಡಿರುವ ವಿಶಾಖಾ, ಖಳನಾಯಕ ಪಾತ್ರಧಾರಿಯೊಂದಿಗೆ ಸಿಕ್ಕು ಅದೇನೇನನ್ನು ಅನುಭವಿಸಲಿದ್ದಾಳೋ ಎಂಬ ಚಿಂತೆ ರಾಧಾ ಕಲ್ಯಾಣ ಧಾರಾವಾಹಿಯ ಅಭಿಮಾನಿ ವರ್ಗವನ್ನು ಕಾಡುತ್ತಿದೆ.
ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಚಂದನ್, ಕೃತಿಕಾ, ರೂಪೇಶ್ ಹಾಗೂ ಚೈತ್ರಾ ರೈ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಪ್ರಶಾಂತ್ ಹಾಲ್ದೊಡ್ಡೇರಿ ಇದನ್ನು ನಿರ್ದೇಶಿಸುತ್ತಿದ್ದಾರೆ. ಆಶು ಬೆದ್ರೆ ನಿರ್ಮಾಣದ ಈ ಧಾರಾವಾಹಿ ಭಾರೀ ಜನಪ್ರಿಯತೆ ಪಡೆದಿದೆ. ವಿದೇಶದಲ್ಲಿ ನಡೆದ ಚಿತ್ರೀಕರಣದ ಸಂಚಿಕೆ ಶೀಘ್ರದಲ್ಲೇ ಪ್ರಸಾರವಾಗಲಿದೆ. ಅಂದಹಾಗೆ, ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರ ಸಾಯಂಕಾಲ 6-30ಕ್ಕೆ ಪ್ರಸಾರವಾಗುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











