ಜೀ ಕುಟುಂಬ ಅವಾರ್ಡ್ಸ್ 2012 ಹೈಲೈಟ್ಸ್
ಜೀ ಕನ್ನಡ ವಾಹಿನಿಯು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 'ಜೀ ಕುಟುಂಬ ಅವಾರ್ಡ್ಸ್ 2012' ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಕಾರ್ಯಕ್ರಮ ನೋಡಲು ಅಸಂಖ್ಯಾತ ಪ್ರೇಕ್ಷಕರು ನೆರೆದಿದ್ದರು.
ಜೀ ಕನ್ನಡ ಧಾರಾವಾಹಿಗಳು, ರಿಯಾಲಿಟಿ ಶೋ ಹಾಗೂ ವಿವಿಧ ಕಾರ್ಯಕ್ರಮಗಳ ಕಲಾವಿದರಲ್ಲಿ ಬೆಸ್ಟ್ ಅಪ್ಪ-ಅಮ್ಮ, ಬೆಸ್ಟ್ ಮಗ-ಮಗಳು, ಅತ್ತೆ-ಸೊಸೆ, ಬೆಸ್ಟ್ ಕೇಡಿ ಜೋಡಿ ಹೀಗೆ 21 ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವೀಕ್ಷಕರ ಎಸ್ಎಂಎಸ್ ಮತ್ತು ತೀರ್ಪುಗಾರರು ನೀಡಿದ ನಿರ್ಣಯದ ಆಧಾರದ ಮೇಲೆ 'ಬೆಸ್ಟ್'ಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲಾಯಿತು.

ಈ ಕಾರ್ಯಕ್ರಮದ ರೂವಾರಿ ಜೀ ವಾಹಿನಿಯ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಗೌತಮ್ ಮಾಚಯ್ಯ. ಅವರ ಮಾರ್ಗದರ್ಶನದಲ್ಲಿ ಜೀ ಕನ್ನಡದ ಎಲ್ಲ ಕಲಾವಿದರನ್ನು, ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅವರನ್ನೆಲ್ಲಾ ಪ್ರತ್ಯಕ್ಷವಾಗಿ ವೇದಿಕೆಯಲ್ಲಿ ನೋಡುವ ಅವಕಾಶವನ್ನು ಜೀ ಕನ್ನಡದ ಅಭಿಮಾನಿ ಪ್ರೇಕ್ಷಕರಿಗೆ ಒದಗಿಸುವ ಪ್ರಯತ್ನ ಮಾಡಲಾಯಿತು.
ಜೊತೆಯಲ್ಲಿ ಕಲಾವಿದರೆಲ್ಲರೂ ಪರಸ್ಪರ ಭೇಟಿಯಾಗಿ ನಂಟು ಇನ್ನೂ ಹೆಚ್ಚು ಬೆಸೆಯುವಂತಾಗಿ ಜೀ ಕುಟುಂಬ ಇನ್ನೂ ದೊಡ್ಡ ಕುಟುಂಬವಾಗಿ ಬೆಳೆಯಲು ಸಹಕಾರಿ ಎನಿಸಿತು ಈ ಜೀ ಕುಟುಂಬ ಅವಾರ್ಡ್ಸ್ 2012' ಕಾರ್ಯಕ್ರಮ.
ಜೀ ಕನ್ನಡದ ಮೇಲಿನ ಅಭಿಮಾನದಿಂದ ನಾಡಿನ ಗಣ್ಯ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿ ಅವರ ಕಲೆಗೆ ಪ್ರೋತ್ಸಾಹ ನೀಡಿದರು. ಕರ್ನಾಟಕ ಸರ್ಕಾರದ ವಸತಿ ಸಚಿವರಾದ ವಿ.ಸೋಮಣ್ಣ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಹೇಮಚಂದ್ರ ಸಾಗರ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್, ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಉಪಸ್ಥಿತರಿದ್ದರು.
ಕನ್ನಡ ಪ್ರಭ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್, ವಿಜಯವಾಣಿ ಪತ್ರಿಕೆ ಸಂಪಾದಕರಾದ ತಿಮ್ಮಪ್ಪ ಭಟ್, ಹಿರಿಯ ಕಲಾವಿದೆಯರಾದ ಭಾರತೀ ವಿಷ್ಣುವರ್ಧನ್, ಜಯಂತಿ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಕಲಾವಿದರಾದ ಜಗ್ಗೇಶ್, ಹರ್ಷಿಕಾ ಪೂಣಚ್ಚ, ದುನಿಯಾ ರಶ್ಮಿ, ಮೇಘನಾ ಗಾಂವ್ಕರ್, ಪೂಜಾ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮುಖರು. (ಒನ್ಇಂಡಿಯಾ ಕನ್ನಡ)


Click it and Unblock the Notifications











