ಗುಜರಾತ್ ರಾಯಭಾರಿಯಾಗಿ ಬಿಗ್ ಬಿ
ಹಿಂದಿ ಚಿತ್ರರಂಗದ ಅನಭಿಷಿಕ್ತ ದೊರೆ ಅಮಿತಾಬ್ ಬಚ್ಚನ್ ಗುಜರಾತ್ ರಾಜ್ಯದ ರಾಯಭಾರಿಯಾಗಿ ಕೆಲಸ ನಿರ್ವಹಿಸಲಿದ್ದಾರೆ. ರಾಜ್ಯದ ಮುಂದಿನ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅಮಿತಾಬ್ ಭಾಗವಹಿಸಲಿದ್ದಾರೆ ಅಲ್ಲದೆ ತನಗಿರುವ ಜನಪ್ರಿಯತೆಯನ್ನು ವಿಶ್ವಾದ್ಯಂತ ಪ್ರವಾಸಿಗರನ್ನು ಗುಜರಾತ್ ನತ್ತ ಸೆಳೆಯಲು ಬಳಸಿಕೊಳ್ಳಲಿದ್ದಾರೆಂದು ಗುಜರಾತ್ ಮುಖ್ಯಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಜನವರಿ 26ರಂದು ಅಮಿತಾಬ್ ಪತ್ರ ಮೂಲಕ ಗುಜರಾತ್ ಸರಕಾರಕ್ಕೆ ಈ ಹೊಸ ಜವಾಬ್ದಾರಿಗೆತನ್ನ ಒಪ್ಪಿಗೆ ಸೂಚಿಸಿದ್ದಾರೆ.
ಕಳೆದ ಜನವರಿ 6ರಂದು ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅಮಿತಾಬ್ ಜೊತೆಯಾಗಿ 'ಪಾ' ಚಿತ್ರ ವೀಕ್ಷಿಸಿದ್ದರು. ಇದಾದ ನಂತರ ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಬೇಕೆಂದು ಅಮಿತಾಬ್ ರಾಜ್ಯ ಸರಕಾರವನ್ನು ಕೋರಿದ್ದರು . ಇದಕ್ಕೆ ಸ್ಪಂದಿಸಿದ ಸರಕಾರ 48 ಗಂಟೆಯಲ್ಲಿ ಚಿತ್ರಕ್ಕೆ ತೆರಿಗೆ ವಿಯಾಯಿತಿ ಘೋಷಿಸಿತ್ತು ಮತ್ತು ಅಮಿತಾಬ್ ಅವರನ್ನು ರಾಜ್ಯದ ರಾಯಭಾರಿಯಾಗಿ ಕೆಲಸ ನಿರ್ವಹಿಸುವಂತೆ ಕೋರಿತ್ತು. ಅದೇ ದಿನ ಅಮಿತಾಬ್ ಆಪ್ತಮಿತ್ರ ಅಮರ್ ಸಿಂಗ್ ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
'ನರೇಂದ್ರ ಮೋದಿ ಸರಳವಾದ ಜೀವನ ನಡೆಸುತ್ತಿದ್ದಾರೆ. ಸದಾ ತನ್ನ ರಾಜ್ಯ ವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವಲ್ಲಿ ನಿರತರಾಗಿರುತ್ತಾರೆ. ಅವರ ಕಾರ್ಯ ವೈಖರಿ ಬೆರಗು ಹುಟ್ಟಿಸುವಂತದ್ದು. ಗುಜರಾತ್ ರಾಜ್ಯದ ಸಂಸ್ಕೃತಿ ಮತ್ತು ಅಭಿವೃದ್ಧಿ ಮೆಚ್ಚುವಂತದ್ದು' ಎಂದು ತನ್ನ ಬ್ಲಾಗ್ ನಲ್ಲಿ ಬರೆದಿದ್ದರು. ನಂತರ ತಾನು ಮೋದಿ ಪರವಾಗಿ ಅಲ್ಲ ಗುಜರಾತ್ ಪರವಾಗಿ ಎಂದುಅಮಿತಾಬ್ ಹೇಳಿಕೆ ನೀಡಿದ್ದರು.


Click it and Unblock the Notifications











