ಕೋರ್ಟ್ ಗೆ ಗೋವಾ ದಮ್ ಓಕೆ, ನಿರ್ಮಾಪಕ ಸಿಪ್ಪಿ ನಿರಾಳ...
ಗೋವಾದವರನ್ನು ಕೀಳಾಗಿ ಬಿಂಬಿಸಲಾಗಿದೆ. ಆದ್ದರಿಂದ ದಮ್ ಮಾರೊ ದಮ್ ಸಿನಿಮಾವನ್ನು ನಿಷೇಧಿಸಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬಾಂಬೆ ಹೈಕೋರ್ಟಿನ ಪಣಜಿ ಪೀಠ ಮಂಗಳವಾರ ವಜಾಗೊಳಿಸಿದೆ. ನಿರ್ದೇಶಕ ರೋಹನ್ ಸಿಪ್ಪಿ ನಿರಾಳಗೊಂಡಿದ್ದಾರೆ. ಆದರಿಂದ ಯಾವುದೇ ಅಡೆತಡೆಯಿಲ್ಲದೆ ಸಿನಿಮಾ ನಾಳೆ ಶುಕ್ರವಾರ (ಏಪ್ರಿಲ್ 22) ಬಿಡುಗಡೆಗೊಳ್ಳುತ್ತಿದೆ. ಆದರೆ ಒಂದೇ ವ್ಯತ್ಯಯ, ಯಹಾ ಶರಾಬ್ ಸಸ್ತಾ ಮಿಲ್ತಾ ಹೈ ಸಂಭಾಷಣೆಯಲ್ಲಿದ್ದ ಗೋವಾ ಮಹಿಳೆ ಕಾಣೆಯಾಗಿದ್ದಾಳೆ, ಅಷ್ಟೆ.
ಆದರೆ ಇದೆಲ್ಲದರಿಂದ ನಮ್ಮ ದೀಪಿಕಾ ಪಡುಕೋಣೆ ಭರ್ಜರಿಯಾಗಿಯೇ ಹೆಜ್ಜೆ ಹಾಕಿದ್ದ ದಮ್ ಮಾರೊ ದಮ್ ಹಾಡಿಗೆ ಬಿಟ್ಟಿ ಪ್ರಚಾರವಂತೂ ಸಿಕ್ಕಿದೆ. ಈ ಮಧ್ಯೆ ಕೋರ್ಟ್ ಕಟೆಕಟೆ ಹತ್ತಲು ಇನ್ನೂ ಸಾಕಷ್ಟು ಮಂದಿ ಸರದಿಯಲ್ಲಿ ನಿಂತಿದ್ದಾರೆ. ಸಿನಿಮಾ ನಿಷೇಧಿಸಿ ಎಂದು ಬೇಡಿ, ಅಲಹಾಬಾದ್ ಹೈಕೋರ್ಟ್ ಪೀಠಕ್ಕೆ ಯಾರೋ ಪುಣ್ಮಾತ್ಮ ಮಂಗಳವಾರವೂ ಅರ್ಜಿ ಗುಜರಾಯಿಸಿದ್ದಾನೆ.
ಹಾಗೆ ನೋಡಿದರೆ ದೀಪಿಕಾ ಮಾದಕ ಭಂಗಿಯಲ್ಲಿ ಮಿಟ್ ಜಾಯೇ ಹಮ್ ... ಎಂದು ಗುನುಗಿದ್ದೇ ತಡ ಮೀಠಾ ಜೇನುಗೂಡಿಗೆ ಕಲ್ಲು ಎಸೆದಂತಾಗಿತ್ತು. ತಮ್ಮ ಪುರಾತನ ಚಿತ್ರದ ಗೀತೆಯನ್ನು ಅನಾಮತ್ತಾಗಿ ಎತ್ತಿಹಾಕಿಕೊಂಡಿದ್ದಕ್ಕೆ ರೋಹನ್ ಸಿಪ್ಪಿ ವಿರುದ್ಧ ಸ್ವತಃ ದೇವಾನಂದ್ ಅವರೇ 'ಹರೇ ರಾಮ ಹರೇ ಕೃಷ್ಣಾ' ಎಂದು ಗರಂ ಆಗಿದ್ದರು. ಹಾಡಿನ ಮೂಲ ನಟಿ ಜೀನತ್ ಅಮಾನ್ ಸಹ 'ಆಶಾ ಭೋಂಸ್ಲೆ ಕಂಠದಲ್ಲಿ ಅಮಾಯಕ ಮಾದಕತೆ ಇತ್ತು. ಆದರೆ ಹೊಸದರಲ್ಲಿ ಎಲ್ಲಾ ಚೆಲ್ಲು ಚೆಲ್ಲು. ಆಶಾ ಕಂಠಕ್ಕೆ ಇದು ಕಂಟಕವಾಗಿದೆ' ಎಂದು ಚೀರಾಡಿದ್ದರು.
ಆದರೆ ದೀಪಿಕಾ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ನಾಳೆ ಶುಕ್ರವಾರ ನೋಡಿ, ಚಿತ್ರ ಹೇಗಿರುತ್ತೆ ಅಂತ ಎಂದು ವಿಶ್ವಾಸದ ಚಿಲುಮೆಯಾಗಿದ್ದಾರೆ. ಆದರೆ ಲಂಡನ್ ನಲ್ಲಿ ಯಾರೋ ಸಿಖ್ ಪುಣ್ಮಾತ್ಮ 'ಅಮ್ಮಿ ನಾಲ್ಕು ಕೋಟಿ ಕೊಡ್ತೀತಿ. ವಸಿ ನಮ್ಮ ಮನೇಗ್ ಬಂದು ಹಂಗೇ ಹಾಡು' ಎಂದು ಗೊಗ್ಗರು ಧ್ವನಿಯಲ್ಲಿ ಕೇಳಿದ್ದಕ್ಕೆ 'ಯೋವ್ ಮುಚ್ಗಂಡ್ ಹೋಗಯ್ಯಾ' ಅಂತ ವಕ್ರ ದೃಷ್ಟಿ ಬೀರಿದ್ದಳು. ಇನ್ಯಾರೋ ಅಭಿಮಾನಿಗಳು 'ನನಗೆ ಪಿಂಕ್ ಸ್ಕರ್ಟ್ ಕಳಿಸವ್ರೆ' ಅಂತ ದೀಪಿಕಾ ಕುಣಿದಾಡಿದ್ದಳು. ಆದರೆ ಇದೆಲ್ಲ ಬಿಟ್ಟಿ ಪ್ರಚಾರದ ಸರಕಾಗಿದೆ. ದಮ್ ಗೆ ಮತ್ತಷ್ಟು ದಮ್ ತುಂಬಿದೆ ಎಂಬುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











