ಚಿತ್ರನಟ ಅಮೀರ್ ಖಾನ್ ಗೆ 'ಪದ್ಮಭೂಷಣ' ಪ್ರಶಸ್ತಿ
ಅರುವತ್ತನೇ ಗಣರಾಜ್ಯೋತ್ಸವ ಪ್ರಯುಕ್ತ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಪ್ರತಿಷ್ಠಿತ 'ಪದ್ಮ ಭೂಷಣ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 'ತ್ರಿ ಇಡಿಯಟ್ಸ್' ಚಿತ್ರದ ಗೆಲುವಿನ ಖುಷಿಯಲ್ಲಿರುವ ಅಮೀರ್ ಖಾನ್ ಅವರ ಸಂಭ್ರಮವನ್ನು ಪ್ರಶಸ್ತಿ ಇಮ್ಮಡಿಸಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಹಾಗೂ ಮಲ್ಲಿಕಾ ಸಾರಾಬಾಯ್ ಅವರನ್ನೂ 'ಪದ್ಮಭೂಷಣ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಖ್ಯಾತ ಬಾಲಿವುಡ್ ಅಭಿನೇತ್ರಿ ರೇಖಾ ಹಾಗೂ ನಟ ಸೈಫ್ ಆಲಿ ಖಾನ್ ಅವರೊಂದಿಗೆ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಬ್ಯಾಡ್ಮಿಟನ್ ತಾರೆ ಸೈನಾ ನೆಹ್ವಾಲ್ ಅವರನ್ನು' ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ಹೆಸರಾಂತ ನಟ ಜೋಹ್ ರಾ ಸೆಹ್ಗಲ್ ಅವರ ಹೆಸರನ್ನು 'ಪದ್ಮಶ್ರೀ' ಪ್ರಶಸ್ತಿಗೆ ಸೂಚಿಸಲಾಗಿದೆ ಎನ್ನುತ್ತವೆ ಮೂಲಗಳು.
ನಲವತ್ತು ನಾಲ್ಕರ ಹರೆಯದ ಅಮೀರ್ ಖಾನ್ 2007ರಲ್ಲಿ ತಮ್ಮ ಚೊಚ್ಚಲ ನಿರ್ದೇಶನದ 'ತಾರೆ ಜಮೀನ್ ಫರ್' ಮೂಲಕ ಗಮನಸೆಳೆದಿದ್ದರು. ಇದೀಗ 'ತ್ರಿ ಇಡಿಯಟ್ಸ್' ಚಿತ್ರ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿರುವುದು ಗೊತ್ತೆ ಇದೆ.


Click it and Unblock the Notifications











