ರಾವಣ ಸೆಟ್ಸ್ ನಲ್ಲಿ ಆನೆ ದಾಳಿಗೆ ಮಾವುತ ಬಲಿ
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ 'ರಾವಣ' ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದೆ.ರಾವಣ ಚಿತ್ರೀಕರಣ ವೇಳೆ ರೊಚ್ಚಿಗೆದ್ದ ಆನೆಯೊಂದು ಮಾವುತನನ್ನು ಎಡ ದಂತದಿಂದ ತಿವಿದು ಸಾಯಿಸಿದ ದುರಂತ ಘಟನೆ ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸನಿಹದಲ್ಲೇ ಇದ್ದರು.ಅವರಿಬ್ಬರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಐಶ್, ಅಭಿ ದಂಪತಿಗಳು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಮಣಿರತ್ನಂ ಅವರ 'ರಾವಣ' ಚಿತ್ರೀಕರಣ ಕೇರಳದ ದಟ್ಟ ಕಾನನಗಳಲ್ಲಿ ನಡೆಯುತ್ತಿದೆ. ಚಿತ್ರೀಕರಣ ವೇಳೆ ರೊಚ್ಚಿಗೆದ್ದ ಆನೆ ಸೆಟ್ಸ್ ಗೆ ನುಗ್ಗಿ ಆ ದಾಂಧಲೆ ಸೃಷ್ಟಿಸಿತು. ಭಯಭೀತರಾದ ರಾವಣ ಚಿತ್ರತಂಡದಿಕ್ಕಾಪಾಲಾಗಿ ಓಟಕಿತ್ತಿತು.
ರಾವಣ ಚಿತ್ರದ ಭಾಗವಾಗಿ ಆನೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಚಿತ್ರೀಕರಣ ವೇಳೆ ರೊಚ್ಚಿಗೆದ್ದ ಆನೆ ಮಾವುತನನ್ನು ತನ್ನ ಎಡ ದಂತದಿಂದ ತಿವುದು ಸಾಯಿಸಿದೆ. ಆನೆ ಸೃಷ್ಟಿಸಿದ ದಾಂಧಲೆಯಿಂದ ರಸ್ತೆಯಲ್ಲಿ ಅಡಚಣೆ ಉಂಟಾಗಿ ಚಿತ್ರದ ತಾರಾಗಣ, ಮಣಿರತ್ನಂ ಸೇರಿದಂತೆ ಉಳಿದವರು ತಾವು ಉಳಿದುಕೊಂಡ ಹೋಟೆಲ್ ಗೆ ಹೋಗಲು ಸಾಧ್ಯವಾಗಲಿಲ್ಲ.
ರಾವಣ ಚಿತ್ರದ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅರಣ್ಯಾಧಿಕಾರಿಗಳು ಆನೆಯನ್ನು ಹದ್ದುಬಸ್ತಿಗೆ ತಂದು ಸರಪಳಿಗಳ ಮೂಲಕ ಬಂಧಿಸಿದರು. ಆನಂತರ ಚಿತ್ರತಂಡವನ್ನು ವಾಜಾಚಲ್ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











