'ಲಗಾನ್' ನಟ ಅನುಪಮ್ ಶ್ಯಾಮ್ ನಿಧನ, ಸೆಲೆಬ್ರಿಟಿಗಳಿಂದ ಸಂತಾಪ
ಹಿಂದಿ ಚಿತ್ರರಂಗದ ಹಿರಿಯ ಕಲಾವಿದ ಅನುಪಮ್ ಶ್ಯಾಮ್ ಸೋಮವಾರ (ಆಗಸ್ಟ 9) ಕೊನೆಯುಸಿರೆಳೆದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್ ಅವರನ್ನು ಕಳೆದ ವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಕಿಡ್ನಿ ಸಮಸ್ಯೆ ಬಹಳ ಗಂಭೀರವಾಗಿ ಕಾಡಿದ ಪರಿಣಾಮ ಅನುಪಮ್ ಶ್ಯಾಮ್ (63) ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರ ಆಪ್ತ ಸ್ನೇಹಿತ ಯಶ್ಪಾಲ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅನುಪಮ್ ಶ್ಯಾಮ್ ಅವರಿಗೆ ಇಬ್ಬರು ಸಹೋದರಿದ್ದು, ಅನುರಾಗ್ ಮತ್ತು ಕಾಂಚನ್ ಇಬ್ಬರು ಆಸ್ಪತ್ರೆಯ ಬಳಿಯೇ ಇದ್ದರು ಎಂದು ಶರ್ಮಾ ಹೇಳಿದ್ದಾರೆ. ''ಬೆಳಗ್ಗೆ ಅನುಪಮ್ ಇನ್ನಿಲ್ಲ ಎಂದು ವೈದ್ಯರು ಹೇಳಿದರು. ಈ ವೇಳೆ ಅವರಿಬ್ಬರು ಸಹೋದರರು ಹಾಗೂ ನಾನು ಅಲ್ಲಿಯೇ ಇದ್ದೆ. ಮಂಗಳವಾರ ಅಂತಿಮ ಸಂಸ್ಕಾರ ಮಾಡಲು ಚಿಂತಿಸಲಾಗಿದೆ'' ಎಂದು ಯಶ್ಪಾಲ್ ಶರ್ಮಾ ಪಿಟಿಐಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

ಸುಮಾರು ಮೂರು ದಶಕಗಳಿಂದ ಬಣ್ಣ ಜಗತ್ತಿನಲ್ಲಿದ್ದ ಅನುಪಮ್ ಶ್ಯಾಮ್ ಚಿತ್ರರಂಗ ಹಾಗೂ ಕಿರುತೆರೆ ಎರಡರಲ್ಲೂ ತೊಡಗಿಕೊಂಡಿದ್ದರು. ಸತ್ಯ, ದಿಲ್ ಸೇ, ಲಗಾನ್ ಸೇರಿದಂತೆ ಹಲವು ಉತ್ತಮ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಸ್ಟಾರ್ ಪ್ಲಸ್ ಟಿವಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಮನ್ ಕಿ ಅವಾಝ್ ಪ್ರತಿಗ್ಯಾ'ದಲ್ಲಿ ಠಾಕೂರ್ ಸಜ್ಜನ್ ಸಿಂಗ್ ಪಾತ್ರಕ್ಕಾಗಿ ಮೆಚ್ಚುಗೆ ಪಡೆದುಕೊಂಡಿದ್ದರು. ಇತ್ತೀಚಿಗೆ ಮನ್ ಕಿ ಅವಾಝ್ ಪ್ರತಿಗ್ಯಾ ಸೀಸನ್ 2ಕ್ಕೆ ಚಾಲನೆ ಕೊಡಲಾಗಿತ್ತು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್ ಕಳೆದ ವರ್ಷ (2020) ಡಯಾಲಿಸಿಸ್ಗೆ ಒಳಗಾಗಿದ್ದರು. ಡಯಾಲಿಸಿಸ್ ಸಮಯದಲ್ಲಿ ಕುಸಿದು ಬಿದ್ದ ನಂತರ ಅವರನ್ನು ಗೋರೆಗಾಂವ್ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಅನುರಾಗ್ ಪಿಟಿಐಗೆ ತಿಳಿಸಿದ್ದರು. ಆ ಸಮಯದಲ್ಲಿ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಬೇಕಿದೆ ಎಂದು ಕುಟುಂಬದವರು ಚಿತ್ರರಂಗದವರ ಬಳಿ ಮನವಿ ಮಾಡಿದ್ದರು.

2020ರಲ್ಲಿ ನಟನನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಈ ವೇಳೆ ಡಯಾಲಿಸಿಸ್ ಪ್ರಾರಂಭಿಸಿದರು. ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA) ನಟನ ಪರವಾಗಿ ಹಣಕಾಸಿನ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿರಿಯ ಕಲಾವಿದನ ಚಿಕಿತ್ಸೆಗಾಗಿ 20 ಲಕ್ಷ ರೂಪಾಯಿ ಸಹಾಯವನ್ನು ಘೋಷಿಸಿದ್ದರು. ಬಾಲಿವುಡ್ ನಟ ಸೋನು ಸೂದ್ ಕೂಡ ಸಹಾಯ ಮಾಡಿದ್ದರು.
ಅನುಪಮ್ ಶ್ಯಾಮ್ ಅವರ ನಿಧನಕ್ಕೆ ಚಿತ್ರರಂಗದಿಂದ ಬಹಳಷ್ಟು ಜನರು ಸಂತಾಪ ಸೂಚಿಸಿದ್ದಾರೆ. ''ನನ್ನ ಸ್ನೇಹಿತ ಮತ್ತು ಅತ್ಯಂತ ಪ್ರತಿಭಾವಂತ ನಟ ಅನುಪಮ್ ಶ್ಯಾಮ್ ಜಿ ಅವರ ನಿಧನದಿಂದ ಬಹಳ ದುಃಖವಾಗಿದೆ. ನಾವು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ತೀವ್ರ ಸಂತಾಪಗಳು." ಎಂದು ಮನೋಜ್ ಜೋಶಿ ಟ್ವೀಟ್ ಮಾಡಿದ್ದಾರೆ.

ಹಿರಿಯ ನಟ ಮನೋಜ್ ಬಾಜಪೇಯಿ ಸಹ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದು, ''ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ. ನಿಮ್ಮನ್ನು ಓರ್ವ ನಟನಾಗಿ ಮತ್ತು ವ್ಯಕ್ತಿಯಾಗಿ ಇಷ್ಟಪಡುತ್ತಿದ್ದೇವು. ದೆಹಲಿ ಮತ್ತು ಮುಂಬೈನಲ್ಲಿ ನಿಮ್ಮೊಂದಿಗೆ ಕಳೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ'' ಎಂದಿದ್ದಾರೆ.
ಸಿನಿಮಾ ಮೇಕರ್ ಅಶೋಕ್ ಪಂಡಿತ್ ಟ್ವೀಟ್ ಮಾಡಿ, ''ಒಬ್ಬ ಅದ್ಭುತ ನಟ ಹಾಗೂ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದು ದುಃಖ ತಂದಿದೆ. ಅವರ ಕುಟುಂಬಕ್ಕೆ ನಮ್ಮ ಸಂತಾಪ ಇರಲಿ. ಚಿತ್ರರಂಗಕ್ಕೆ ಹಾಗೂ ಟಿವಿ ಕ್ಷೇತ್ರಕ್ಕೆ ಇದು ತುಂಬಾ ದೊಡ್ಡ ನಷ್ಟ'' ಎಂದಿದ್ದಾರೆ.


Click it and Unblock the Notifications











