ಕೇಂದ್ರ ಸಚಿವರ ಭೇಟಿ ಮಾಡಿದ 'ಅಧೀರ' ಸಂಜಯ್: ರಾಜಕೀಯಕ್ಕೆ ಪ್ರವೇಶ?
ನಟ ಸಂಜಯ್ ದತ್ ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ್ದಾರೆ. ತಾವು ಸಚಿವರನ್ನು ಭೇಟಿ ಮಾಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಜಯ್, ಜೊತೆಗೆ ಒಂದಿಷ್ಟು ವಾಕ್ಯಗಳನ್ನು ಬರೆದಿದ್ದಾರೆ.
ಸಂಜಯ್ ಹಠಾತ್ತನೆ ಸಚಿವರನ್ನು ಭೇಟಿಯಾಗಿರುವುದು ಮತ್ತು ಸಂಜಯ್ ಬರೆದುಕೊಂಡಿರುವ ಸಾಲುಗಳು ಅವರ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದ್ದು ಸಂಜಯ್ ದತ್ ರಾಜಕೀಯ ಸೇರುತ್ತಿದ್ದಾರೆಯೇ ಎಂಬ ಅನುಮಾನವನ್ನು ಮೂಡಿಸಿದೆ.
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿಯನ್ನು ಸಂಜಯ್ ದತ್ ಭೇಟಿಯಾಗಿದ್ದಾರೆ. ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಜಕೀಯ ಮತ್ತು ರಾಜಕಾರಣದಿಂದ ಬಹುತೇಕ ದೂರವೇ ಇರುವ ಸಂಜಯ್ ದತ್ ನಿತಿನ್ ಗಡ್ಕರಿಯನ್ನು ಭೇಟಿ ಆಗಿರುವುದು ಸಹಜವಾಗಿಯೇ ಆಶ್ಚರ್ಯ ಮೂಡಿಸಿದೆ.
ನಿತಿನ್ ಗಡ್ಕರಿ ಜೊತೆಗಿನ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಂಜಯ್ ದತ್, ''ನೀವು ನನಗೆ ಬೆಂಬಲವಾಗಿ ನಿಂತಿದ್ದಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ಜೀವನದ ಪ್ರತಿ ಸಮಸ್ಯೆಗಳಿಗೂ ನೀವು ಷರತ್ತು ರಹಿತವಾಗಿ ಬೆಂಬಲ ನೀಡಿದ್ದೀರಿ, ನನ್ನ ಪರವಾಗಿ ನಿಂತಿದ್ದೀರಿ. ನಿಮ್ಮ ಈ ಸಹಾಯವನ್ನು ಜೀವನ ಪರ್ಯಂತ ನೆನಪಿಟ್ಟುಕೊಳ್ಳುತ್ತೇನೆ'' ಎಂದಿದ್ದಾರೆ ಸಂಜಯ್ ದತ್.
ಮುಂದುವರೆದು, ''ಈ ವರೆಗೂ ನೀವು ಮಾಡಿರುವ ಸಹಾಯಕ್ಕೆ ಅಗಣಿತ ಧನ್ಯವಾದಗಳು. ನನ್ನ ಏಳಿಗೆಗೆ ಇನ್ನು ಮುಂದೆಯೂ ನೀವು ಮಾಡಲಿರುವ ಒಳ್ಳೆಯ ಕಾರ್ಯಗಳಿಗೂ ಧನ್ಯವಾದಗಳು'' ಎಂದಿರುವ ಸಂಜಯ್, ನಿರ್ಮಾಪಕ ಜಯ್ ಪಟೇಲ್ಗೂ ಧನ್ಯವಾದ ಹೇಳಿದ್ದಾರೆ. ''ನನ್ನ ಜೀವನದ ಪ್ರತಿ ತಿರುವಿನಲ್ಲಿಯೂ ನನ್ನ ಜೊತೆ ನಿಂತಿದ್ದಕ್ಕೆ, ನನ್ನ ಶಕ್ತಿಯಾಗಿ ನಿಂತಿದ್ದಕ್ಕೆ ಧನ್ಯವಾದ'' ಎಂದು ಜೈ ಪಟೇಲ್ಗೆ ಹೇಳಿದ್ದಾರೆ ಸಂಜಯ್ ದತ್.

ಬಿಜೆಪಿ ಸೇರ್ಪಡೆಗೊಳ್ಳು ಮಾತುಕತೆ?
ಸಂಜಯ್ ದತ್ ಬಿಜೆಪಿ ಸೇರ್ಪಡೆ ಆಗಲಿದ್ದು ಅದೇ ಕಾರಣಕ್ಕೆ ನಿತಿನ್ ಗಡ್ಕರಿಯನ್ನು ಭೇಟಿಯಾಗಿದ್ದಾರೆ ಮತ್ತು ನಿತಿನ್ ಗಡ್ಕರಿಯನ್ನು ಅಷ್ಟೆಲ್ಲ ಹೊಗಳಿದ್ದಾರೆ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಜಯ್ ಬರೆದಿರುವ ''ನನ್ನ ಕ್ಷೇಮಕ್ಕಾಗಿ ಮುಂದಿನ ದಿನಗಳಲ್ಲಿ ನೀವು ಮಾಡಲಿರುವ ಕಾರ್ಯಕ್ಕೆ ಧನ್ಯವಾದ'' ಎಂಬರ್ಥದ ಸಾಲುಗಳು ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿವೆ.

ಸಮಾಜವಾಗಿ ಪಕ್ಷದಿಂದ ಚುನಾವಣೆ ನಿಲ್ಲಲು ಸಜ್ಜಾಗಿದ್ದರು
ಸಂಜಯ್ ದತ್ ಈ ಹಿಂದೊಮ್ಮೆ ಸಮಾಜವಾದಿ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅದೇ ಸಮಯದಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದ ಕಾರಣ ಚುನಾವಣೆಯಿಂದ ಅವರು ಹಿಂದೆ ಸರಿದರು. ಅಲ್ಲದೆ ಸಮಾಜವಾದಿ ಪಕ್ಷದಲ್ಲಿ ಹೊಂದಿದ್ದ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಮಾತನಾಡಿದ್ದ ಸಂಜಯ್ ದತ್, ''ನಾನು ರಾಜಕಾರಣಿ ಅಲ್ಲ ಆದರೆ ರಾಜಕೀಯದ ಕುಟುಂಬದ ಹಿನ್ನೆಲೆ ಉಳ್ಳವನು'' ಎಂದಿದ್ದರು.

ಐದು ಬಾರಿ ಸಂಸದರಾಗಿದ್ದ ಸಂಜಯ್ ದತ್ ತಂದೆ
ಸಂಜಯ್ ದತ್ ತಂದೆ ಸುನಿಲ್ ದತ್ ಹಿರಿಯ ನಟರಾಗಿರುವ ಜೊತೆಗೆ ಜನಪ್ರಿಯ ರಾಜಕಾರಣಿಯೂ ಆಗಿದ್ದರು. ಕಾಂಗ್ರೆಸ್ನಿಂದ ಚುನಾವಣೆ ಸ್ಪರ್ಧಿಸಿ ಐದು ಬಾರಿ ಗೆದ್ದು ಲೋಕಸಭೆಗೆ ಆಯ್ಕೆ ಆಗಿದ್ದರು ಸುನಿಲ್ ದತ್. ಸಂಜಯ್ ದತ್ರ ಸಹೋದರಿ ಪ್ರಿಯಾ ದತ್ ಸಹ ರಾಜಕಾರಣಿಯಾಗಿದ್ದು, ಕಾಂಗ್ರೆಸ್ನಿಂದ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದೆಯಾಗಿದ್ದರು. ಆದರೆ 2014 ಹಾಗೂ 2019 ರಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿ
ನಟ ಸಂಜಯ್ ದತ್ ಕನ್ನಡದ ಬಹು ನಿರೀಕ್ಷಿತ ಸಿನಿಮಾ 'ಕೆಜಿಎಫ್ 2'ನಲ್ಲಿ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ದತ್ಗೆ ಇದು ಮೊದಲ ಕನ್ನಡ ಸಿನಿಮಾ ಆಗಿದ್ದು, 'ಅಧೀರ' ಪಾತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 'ಕೆಜಿಎಫ್ 2' ಮಾತ್ರವೇ ಅಲ್ಲದೆ, 'ತುಳಸಿದಾಸ್ ಜೂನಿಯರ್', 'ಮುನ್ನಾಭಾಯ್ 3', 'ದಿ ಗುಡ್ ಮಹಾರಾಜ', 'ಪೃಥ್ವಿರಾಜ್', 'ಶಂಶೇರಾ' ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











