"ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಭಿಕ್ಷೆ"-ಕಂಗನಾ ರನೌತ್
ನಟಿ ಕಂಗನಾ ರನೌತ್ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದ್ದಾರೆ. ಪದೇ ಪದೇ ಮೋದಿಯನ್ನು ಹೊಗಳುವ ಬರದಲ್ಲಿ ಜನರಲ್ಲಿ ಗೊಂದಲ ಮೂಡಿಸುವ ಹಾಗೂ ಸಿಟ್ಟಿಗೆಬ್ಬಿಸುವ ಸ್ಟೇಟ್ಮೆಂಟ್ಗಳನ್ನು ನೀಡುತ್ತಿರುವ ನಟಿ ಕಂಗನಾ ಈಗ ಮತ್ತೆ ಅಂತದ್ದೇ ಹೇಳಿಕೆಯೊಂದನ್ನು ನೀಡಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದ ಕಂಗನಾ ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ "ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆಯೇ" ಎಂದು ಹೇಳುವ ಮೂಲಕ ಗಾಂಧಿಜೀ ಅವರ ಅಹಿಂಸಾ ಮಂತ್ರವನ್ನು ಗೇಲಿ ಮಾಡಿದ್ದಾರೆ.
ಗಾಂಧೀಜಿ ಅವರಿಂದ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ಗೆ ಬೆಂಬಲವೇ ಸಿಗಲಿಲ್ಲಾ. ಹಾಗೇ ಬಾಪು ಹೇಳಿದಂತೆ ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯ ಅಲ್ಲ ಅದು ಭಿಕ್ಷೆ ಎಂದಿದ್ದಾರೆ. ಹೀಗಾಗಿ ನೀವು ಯಾರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ 1940ರಲ್ಲಿ ಪ್ರಕಟಗೊಂಡಿದ್ದ ಲೇಖನ ಒಂದನ್ನು ಶೇರ್ ಮಾಡಿಕೊಂಡಿರುವ ಕಂಗನಾ "ನೀವು ಗಾಂಧಿ ಮತ್ತು ನೇತಾಜಿಯನ್ನು ಒಂದೇ ತರ ಅಭಿನಂದಿಸಬೇಡಿ. ಇವರಿಬ್ಬರನ್ನು ಹೋಲಿಕೆ ಮಾಡೋದು ಬೇಡ. ನೀವೇ ಯಾರು ಉತ್ತಮರು ಎಂದು ತಿಳಿದುಕೊಂಡು ಆಯ್ಕೆ ಮಾಡಿ" ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಮತ್ತಷ್ಟು ಬರೆದುಕೊಂಡಿರುವ ಕಂಗನಾ "ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರ ಕೈಗಿಟ್ಟಿದ್ದು ಹೋರಾಟ ಮಾಡುವ ಧೈರ್ಯ ಇಲ್ಲದವರು ಹಾಗೇ ಅವರಿಗೆ ಬಿಸಿರಕ್ತ ಇರಲಿಲ್ಲ. ಅಧಿಕಾರದ ಆಸೆಯಷ್ಟೆ ಇತ್ತು ಎಂದು ಕಂಗನಾ ಕಿಡಿಕಾರಿದ್ದಾರೆ. ಹೀಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಸಾಲು ಸಾಲು ಸ್ಟೋರಿಗಳನ್ನು ಶೇರ್ ಮಾಡಿರುವ ಕಂಗನಾ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ.
ಈ ಹಿಂದೆ ಕೂಡ ಕಂಗನಾ ಇದೇ ರೀತಿಯಾಗಿ ಮಾತಿನ ಚಾಟಿ ಬೀಸಿದ್ದರು. "ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯತಂದುಕೊಟ್ಟವರು ಹುತಾತ್ಮರಾಗಿದ್ದರು. ಬ್ರಿಟೀಷರ ವಿರುದ್ಧ ಹೋರಾಡಿದವರ ಪ್ರಾಣ ತೆಗೆದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಪ್ರಾಣವನ್ನೇ ಬಲಿ ಕೊಟ್ಟ ನಾಯಕರು, ಹಾಗೂ ಅದೆಷ್ಟೋ ಅಮಾಯಕ ಸಾರ್ವಜನಿಕರನ್ನು ಕೊಂದ ಬ್ರಿಟಿಷರ ವಿರುದ್ಧ ಯಾವುದೇ ಕೇಸ್ ದಾಖಲಿಸದೇ, ಎಲ್ಲಾ ರೀತಿಯ ಸಾಧ್ಯತೆಗಳು ಇದ್ದರೂ ಅವರನ್ನು ಸುಮ್ಮನೆ ಯಾಕೆ ಬಿಡಲಾಗಿತ್ತು" ಎಂದು ಪ್ರಶ್ನೆ ಮಾಡಿದ್ದರು.
ಹಾಗೆ ಈ ಹಿಂದೆ ಕಂಗನಾ ಅವರು 1947ರಲ್ಲಿ ನಮಗೆ ಸಿಕ್ಕಿರೋದು ಭಿಕ್ಷೆ ಎಂಬ ಹೇಳಿಕೆಯನ್ನು ಖಾಸಗೀ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.ಈ ಸಂದರ್ಭರ್ದಲ್ಲಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕಂಗನಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸುವಂತೆ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷೆ ಪ್ರೀತಿ ಮೆನನ್ ಮುಂಬೈ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು.

ಹಾಗೇ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಆ ಸಂದರ್ಭದಲ್ಲಿ ಟ್ವೀಟ್ ಮಾಡಿ ಕಂಗನಾ ನೀಡಿರುವ ಈ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ. ಅವರ ಈ ಹೇಳಿಕೆಯನ್ನು ದೇಶದ್ರೋಹ ಎನ್ನಬೇಕಾ, ಹುಚ್ಚುತನ ಎನ್ನಬೇಕಾ ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು. ಇಷ್ಟೆಲ್ಲಾ ವಿರೋಧದ ನಡುವೆಯೂ ಈಗ ಮತ್ತೆ "ನಾನು ಈಗಲೂ ಹೇಳುತ್ತೇನೆ 1947ರಲ್ಲಿ ನಮಗೆ ಸಿಕ್ಕಿರೋದು ಭಿಕ್ಷೆಯೇ. ನೀವು ಹೇಳಿದಂತೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿರೋದು ನಾನಲ್ಲ. ನಿಜವಾಗಿಯೂ ದೇಶಕ್ಕಾಗಿ ಹೋರಾಟ ಮಾಡಿದ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಪ್ರಾಣ ತೆತ್ತರು. ಅವರಿಗೆ ಯಾವ ಕ್ರೆಡಿಟ್ ಕೂಡ ಸಿಗಲಿಲ್ಲ" ಎಂದಿದ್ದಾರೆ. ಹೀಗೆ ಸಾಲು ಸಾಲಾಗಿ ಕಂಗನಾ ಸ್ಟೇಟ್ಮೆಂಟ್ಗಳನ್ನು ನೀಡುತ್ತಿದ್ದಾರೆ. ಅದು ಸಾಕಷ್ಟು ಚರ್ಚೆಗೂ ಕೂಡ ಕಾರಣವಾಗುತ್ತಿದೆ.


Click it and Unblock the Notifications











