200 ಕೋಟಿ ಸುಲಿಗೆ ಪ್ರಕರಣ: ನಟಿ ಲೀನಾ ಪೌಲ್ ವಿಚಾರಣೆ ನಡೆಸಿದ ಇಡಿ
ಬ್ಲಾಕ್ ಬಸ್ಟರ್ ಸಿನಿಮಾ 'ಮದ್ರಾಸ್ ಕೆಫೆ'ಯಲ್ಲಿ ನಟಿಸಿದ್ದ ನಟಿ ಲೀನಾ ಮರಿಯಾ ಪೌಲ್ ಅನ್ನು ಕೇಂದ್ರ ತನಿಖಾ ಸಂಸ್ಥೆ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ನಡೆಸಿದೆ.
ಈಗಾಗಲೇ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೆ ಕಾರ್ಪೊರೇಟ್ ಸಂಸ್ಥೆಗಳನ್ನು, ಉದ್ಯಮಿಗಳಿಗೆ ಬೆದರಿಕೆ ಹಾಕಿ ಅವರಿಂದ ನೂರಾರು ಕೋಟಿ ಹಣ ವಸೂಲಿ ಮಾಡಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ಬಂಧಿಸಲಾಗಿದೆ.
ನೂರಾರು ಕೋಟಿ ಹಣ ಸುಲಿಗೆ ಪ್ರಕರಣವನ್ನು ಸಿಬಿಐ ಮತ್ತು ಇಡಿ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಸುಕೇಶ್ ಚಂದ್ರನಿಗೆ ಸೇರಿದ ಚೆನ್ನೈನ ಮನೆ ಮೇಲೆ ದಾಳಿ ಎರಡು ದಿನಗಳ ಹಿಂದೆ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಐಶಾರಾಮಿ ಮನೆಯಲ್ಲಿದ್ದ 16 ದುಬಾರಿ ಕಾರುಗಳು, ಕೇಜಿಗಟ್ಟಲೆ ಚಿನ್ನ ಇನ್ನಿತರ ಐಶಾರಾಮಿ ವಸ್ತುಗಳನ್ನು ಇಡಿ ವಶಪಡಿಸಿಕೊಂಡಿದೆ.
ಸುಕೇಶ್ ಚಂದ್ರಶೇಖರ್ ಈಗಾಗಲೇ ತಿಹಾರ್ ಜೈಲಿನಲ್ಲಿದ್ದು ಅಲ್ಲಿಂದಲೇ ಕಾರ್ಪೊರೇಟ್ ಸಂಸ್ಥೆಗಳಿಗೆ, ಉದ್ಯಮಿಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಕೋಟ್ಯಂತರ ರುಪಾಯಿ ವಸೂಲಿ ಮಾಡುತ್ತಿದ್ದ. ಈತ ಹಣ ವಸೂಲಿ ಮಾಡುತ್ತಿರುವ ವಿಷಯ ತಿಳಿದ ದೆಹಲಿ ಪೊಲೀಸರು ಮೊದಲಿಗೆ ಸುಮಾರು 50 ಕೋಟಿ ಹಣ ವಂಚಿಸಿರಬಹುದು ಎಂದುಕೊಂಡಿದ್ದರು. ನಂತರ ಅದು 200 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಾನೆಂಬುದು ಗೊತ್ತಾದಾಗ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಿದರು.
ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸುಕೇಶ್ನ ಭಾರಿ ಐಶಾರಾಮಿ ಬಂಗ್ಲೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಮನೆಯಲ್ಲಿದ್ದ ಕೋಟ್ಯಂತರ ಬೆಲೆ ಬಾಳುವ ಚಿನ್ನ, 16 ಐಶಾರಾಮಿ ಕಾರುಗಳು, ಇನ್ನಿತರೆ ಐಶಾರಾಮಿ ವಸ್ತುಗಳು ಸೇರಿ ಇಡೀಯ ಬಂಗ್ಲೆಯನ್ನು ಸೀಜ್ ಮಾಡಿದ್ದಾರೆ.

ಸುಕೇಶ್ ಚಂದ್ರಶೇಖರ್ ಅನ್ನು ದೆಹಲಿ ಪೊಲೀಸರು ನಾಲ್ಕು ವರ್ಷಗಳ ಹಿಂದೆಯೇ ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ್ದರು. ತಮಿಳುನಾಡಿನ ಟಿಟಿವಿ ದಿನಕರನ್ಗೆ ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಯಾದ ಎರಡೆಲೆ ಚಿಹ್ನೆಯನ್ನು ನಿಮ್ಮ ಬಣಕ್ಕೆ ಕೊಡಿಸುತ್ತೇನೆ. ಕೇಂದ್ರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ಸಂಪರ್ಕವಿದೆ. ಅವರ ಮೂಲಕ ನಿಮ್ಮ ರಾಜಕೀಯ ಪಕ್ಷದ ಬಣಕ್ಕೆ ಎರಡೆಲೆ ಚಿಹ್ನೆ ಸಿಗುವಂತೆ ಮಾಡುತ್ತೇನೆ. ಇದಕ್ಕಾಗಿ ನನಗೆ ₹50 ಕೋಟಿ ನೀಡಬೇಕೆಂದು ಟಿಟಿವಿ ದಿನಕರನ್ಗೆ ಬೇಡಿಕೆ ಇಟ್ಟಿದ್ದ. ಈತನ ಮಾತು ನಂಬಿ ದಿನಕರನ್ ಸ್ಪಲ್ಪ ಹಣ ಕೂಡ ಕೊಟ್ಟಿದ್ದರು. ಬಳಿಕ ಚುನಾವಣಾ ಚಿಹ್ನೆ ಸಿಗದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೆಹಲಿಯ ಹಯಾತ್ ಹೊಟೆಲ್ನ ಕೊಠಡಿಯ ಮೇಲೆ ದಾಳಿ ನಡೆಸಿದ್ದರು. ಸುಕೇಶ್ ಚಂದ್ರಶೇಖರ್ ತಂಗಿದ್ದ ರೂಮಿನಲ್ಲಿ ಬರೋಬ್ಬರಿ ₹1.3 ಕೋಟಿ ಪತ್ತೆಯಾಗಿತ್ತು. ಇಷ್ಟು ಹಣವನ್ನು ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಜಪ್ತಿ ಮಾಡಿದ್ದರು. ಬಳಿಕ ಸುಕೇಶ್ ಚಂದ್ರಶೇಖರ್ನನ್ನು ಬಂಧಿಸಿದ್ದರು.
ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದ ಸಂಸದರಾಗಿದ್ದ ರಾಯಪಟ್ಟಿ ಸಾಂಬಶಿವರಾವ್ ಎಂಬುವರಿಗೂ ಈತ ಬೆದರಿಕೆ ಹಾಕಿದ್ದ. ಸಿಬಿಐ, ಕೇಂದ್ರದ ಗೃಹ ಇಲಾಖೆಯ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ ಸುಕೇಶ್ ನಿಮ್ಮ ವಿರುದ್ಧ ಕೇಸ್ ಬಂದಿದೆ. ಈ ಕೇಸ್ನಿಂದ ಬಚಾವಾಗಲು 100 ಕೋಟಿ ರೂಪಾಯಿ ಹಣ ನೀಡಬೇಕೆಂದು ಬ್ಲ್ಯಾಕ್ಮೇಲ್ ಮಾಡಿದ್ದ.
ಸುಕೇಶ್ ಚಂದ್ರಶೇಖರ್ ಕಳೆದ ನಾಲ್ಕು ವರ್ಷಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಮೊಬೈಲ್ ಪೋನ್ ಮೂಲಕ ದೆಹಲಿಯ ಗಣ್ಯ ವ್ಯಕ್ತಿಗಳು, ಉದ್ಯಮಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಬರೋಬ್ಬರಿ ₹190ರಿಂದ 200 ಕೋಟಿ ವರೆಗೂ ಹಣವನ್ನು ಜನರಿಂದ ಬೆದರಿಸಿ ವಸೂಲಿ ಮಾಡಿದ್ದಾನೆ.
ಸುಕೇಶ್ ಚಂದ್ರಶೇಖರನ್ನ ಸಹಚರರಾದ ದೀಪಕ್ ರಾಮದಾನಿ, ಪ್ರದೀಪ್ ರಾಮದಾನಿಯನ್ನು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿ, ಮಾಡೆಲ್ ಟೌನ್ನಲ್ಲಿ ಬಂಧಿಸಲಾಗಿದೆ. ಇವರಿಂದ ಹಣ ಎಣಿಸುವ ಮೆಷಿನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದೀಪಕ್ ರಾಮದಾನಿ, ಪ್ರದೀಪ್ ರಾಮದಾನಿ ಇಬ್ಬರೂ ಸುಕೇಶ್ ಹೇಳಿದ ವ್ಯಕ್ತಿಗಳ ಬಳಿ ಹೋಗಿ ಕೋಟಿಗಟ್ಟಲೆ ಹಣ ಪಡೆದುಕೊಂಡು ಬರುತ್ತಿದ್ದರು. ಸುಕೇಶ್ ಜೈಲಿನಲ್ಲಿ ಬಳಸುತ್ತಿದ್ದ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸುಕೇಶ್ ವಿರುದ್ಧ ದೇಶದಾದ್ಯಂತ 24 ಪ್ರಕರಣಗಳು ದಾಖಲಾಗಿವೆ.


Click it and Unblock the Notifications











