ರಾಜು ಶ್ರೀವಾಸ್ತವ್ ಅನ್ನು ಉಳಿಸಿಕೊಳ್ಳಲು ತಾವು ಮಾಡಿದ ಪ್ರಯತ್ನದ ಬಗ್ಗೆ ಹೇಳಿದ ಅಮಿತಾಬ್ ಬಚ್ಚನ್
ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್ ಅಗಲಿ ಎರಡು ದಿನಗಳಾಗಿವೆ. 58 ವರ್ಷ ವಯಸ್ಸಿನ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 21 ರಂದು ಕೊನೆ ಉಸಿರೆಳೆದರು. ರಾಜು ಶ್ರೀವಾಸ್ತವ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು.
ರಾಜು ಶ್ರೀವಾಸ್ತವ್ಗೆ ಆಗಸ್ಟ್ 10 ರಂದು ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಸೆಪ್ಟೆಂಬರ್ 21 ರವರೆಗೆ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಉಳಿಸಿಕೊಳ್ಳಲು ಏಮ್ಸ್ ವೈದ್ಯರು ನಾನಾ ಪ್ರಯತ್ನಗಳನ್ನು ಮಾಡಿದ್ದರು. ವೈದ್ಯರ ಸಲಹೆ ಮೇರೆಗೆ ಅಮಿತಾಬ್ ಬಚ್ಚನ್ ಅವರೂ ಸಹ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
''ಮತ್ತೊಬ್ಬ ಸಹೋದ್ಯೋಗಿ, ಗೆಳೆಯ, ಪ್ರತಿಭಾವಂತ ಕಲಾವಿದನ ನಿರ್ಗಮನವಾಗಿದೆ. ಹಠಾತ್ ಆಗಿ ಬಂದೆರಗಿದ ಕಾಯಿಲೆಯಿಂದಾಗಿ ಅವರು ಸಮಯಕ್ಕೆ ಮುಂಚೆಯೇ ಹೋದರರು. ಅವರ ಸೃಜನಶೀಲತೆಯ ಸಮಯ ಮುಗಿಯುವ ಮೊದಲು ಅವರು ಹೊರಟುಬಿಟ್ಟರು. ಪ್ರತಿದಿನ ಬೆಳಿಗ್ಗೆ ಅವರೊಂದಿಗೆ ಇದ್ದ ಹತ್ತಿರದವರು, ಶ್ರೀವತ್ಸ ಅನ್ನು ಆ ನಿತ್ರಾಣ ಸ್ಥಿತಿಯಿಂದ ಏಳಿಸಲು ನಿಮ್ಮ ಧ್ವನಿಯ ಆಡಿಯೋ ನೋಟ್ ಅನ್ನು ಕಳಿಸಿ ಎಂದರು. ಅಂತೆಯೇ ನಾನೂ ನನ್ನ ಧ್ವನಿಯ ನೋಟ್ ಅನ್ನು ಕಳಿಸಿದೆ. ಅದನ್ನು ಅವರು ರಾಜು ಶ್ರೀವಾಸ್ತವ್ ಅವರ ಕಿವಿಯಲ್ಲಿ ಕೇಳಿಸಿದರು. ಅದನ್ನು ಕೇಳಿ ಆತ ತುಸು ಕಣ್ಣು ಬಿಟ್ಟನಂತೆ ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ನಮಗೆ ಸಿಗದೆ ಹೊರಟುಹೋದರು ಎಂದು ಬರೆದುಕೊಂಡಿದ್ದಾರೆ ಬಚ್ಚನ್.

ರಾಜು ಶ್ರೀವಾಸ್ತವ್, ಅಮಿತಾಬ್ ಬಚ್ಚನ್ರ ದೊಡ್ಡ ಅಭಿಮಾನಿಯಾಗಿದ್ದರು. ಅವರು ಸಿನಿಮಾ ರಂಗಕ್ಕೆ ಬಂದಾಗ ಅವರನ್ನು ಜ್ಯೂನಿಯರ್ ಬಚ್ಚನ್ ಎಂದೇ ಕರೆಯಲಾಗುತ್ತಿತ್ತು. ಸ್ಟಾಂಡಪ್ ಕಮಿಡಿಯನ್ ಆಗಿದ್ದಾಗಲೂ ಸಹ ಅಮಿತಾಬ್ ಬಚ್ಚನ್ ಧ್ವನಿ ನಕಲು ಮಾಡುತ್ತಿದ್ದ ರಾಜು ಶ್ರೀವಾಸ್ತವ್, ಬಚ್ಚನ್ ಸಿನಿಮಾಗಳ ಬಗ್ಗೆ ಹೇಳುತ್ತಿದ್ದ ಜೋಕ್ಗಳು ಬಹಳ ಜನಪ್ರಿಯವಾಗಿದ್ದವು. ಸ್ವತಃ ಅಮಿತಾಬ್ ಬಚ್ಚನ್ ಅನ್ನು ರಾಜು ಶ್ರೀವಾಸ್ತವ್, ತಮ್ಮ ಬಗ್ಗೆ, ತಮ್ಮ ಸಿನಿಮಾಗಳ ಬಗ್ಗೆ ಮಾಡುವ ಜೋಕ್ಗಳನ್ನು ಮನಸಾರೆ ಮೆಚ್ಚಿದ್ದರು. ಕೆಲವು ಅವಾರ್ಡ್ ಫಂಕ್ಷನ್ಗಳಲ್ಲಿ ಬಚ್ಚನ್ ಎದುರೇ ರಾಜು ಶ್ರೀವಾಸ್ತವ್ ಅವರ ಬಗ್ಗೆಯೇ ಜೋಕ್ ಹೇಳಿ ನಗಿಸಿದ್ದರು.
ರಾಜು ಶ್ರೀವಾಸ್ತವ್ ಜೋಕ್ ಕೇಳಿ, ಅವರನ್ನು ವೇದಿಕೆ ಮೇಲೆ ತಬ್ಬಿ ಅಭಿನಂದಿಸಿದ್ದರು ಬಚ್ಚನ್, ರಾಜು ಶ್ರೀವಾಸ್ತವ್ ಸಹ ಬಚ್ಚನ್ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು. ಹೀಗಾಗಿ ರಾಜು ಶ್ರೀವಾಸ್ತವ್ ಅಗಲಿಕೆ ಬಚ್ಚನ್ಗೆ ಅತೀವ ದುಃಖ ತಂದಿದೆ.
ತಮ್ಮ ಬ್ಲಾಗ್ನಲ್ಲಿ ರಾಜು ಶ್ರೀವಾಸ್ತವ್ ಪ್ರತಿಭೆ ಬಗ್ಗೆ ಬರೆದುಕೊಂಡಿರುವ ಬಚ್ಚನ್, ''ಅವರ ಸಮಯಪ್ರಜ್ಞೆ ಮತ್ತು ಅವರ ಆಡುಮಾತಿನ ಹಾಸ್ಯ ನಮ್ಮೊಂದಿಗೆ ಸದಾ ಉಳಿಯಲಿದೆ. ಅವರ ಹಾಸ್ಯ ಅನನ್ಯ, ಮುಕ್ತವಾಗಿತ್ತು ಮತ್ತು ನಗುವಿನಿಂದ ತುಂಬಿತ್ತು. ಈಗ ಆತ ಸ್ವರ್ಗದಿಂದ ನಗುತ್ತಿರುತ್ತಾನೆ, ಮತ್ತು ದೇವರಿಗೂ ಜೋಕ್ಗಳನ್ನು ಹೇಳಿ ನಗಿಸುತ್ತಿರುತ್ತಾನೆ'' ಎಂದಿದ್ದಾರೆ.


Click it and Unblock the Notifications











