'ಲಾಲ್ ಸಿಂಗ್ ಚಡ್ಡ' ಸೋಲು: ವಿನಾಶವನ್ನು ಸಂಭ್ರಮಿಸುವ ಕಾಲ ಎಂದ 'ಆ ದಿನಗಳು' ನಟ
'ಆ ದಿನಗಳು' ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಆಪ್ತವಾದ ನಟ ಅತುಲ್ ಕುಲಕರ್ಣಿ, ನಟನಾಗಿರುವ ಜೊತೆಗೆ ಬರಹಗಾರರೂ ಹೌದು.
ಕತೆ, ಚಿತ್ರಕತೆ ಬರಹದಲ್ಲಿ ಅತುಲ್ ಕುಲಕರ್ಣಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾಕ್ಕೆ ಇದೇ ಅತುಲ್ ಕುಲಕರ್ಣಿ ಅವರೇ ಚಿತ್ರಕತೆ ಬರೆದಿದ್ದಾರೆ.
ಆದರೆ ಈಗ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಸೋತಿದೆ. ಅದೂ ಸಿನಿಮಾ ಸೋಲಿಗೆ ಆಮಿರ್ ಖಾನ್ ವಿರುದ್ಧ ಸ್ಥಾಪಿಸಲಾದ ಉದ್ದೇಶಪೂರ್ವಕ ದ್ವೇಷದ ಅಭಿಯಾನವೇ ಕಾರಣ ಎನ್ನಲಾಗುತ್ತಿದೆ. ಹೀಗಿರುವಾಗ ಅತುಲ್ ಕುಲಕರ್ಣಿ ಟ್ವೀಟ್ ಒಂದನ್ನು ಮಾಡಿದ್ದು, ಟ್ವೀಟ್ ಗಮನ ಸೆಳೆಯುತ್ತಿದೆ.
''ವಿನಾಶವನ್ನು ಅದ್ಭುತ ಚಮತ್ಕಾರ ಎಂಬಂತೆ ಆಚರಿಸಲು ಶುರುಮಾಡಿದಾಗ ಸತ್ಯಗಳು ಭಗ್ನಾವಶೇಷದಂತೆ ಕಂಡು ಬರುತ್ತವೆ'' ಎಂದಿದ್ದಾರೆ. ಆ ಮೂಲಕ ವಿನಾಶವನ್ನು, ದ್ವೇಷವನ್ನು, ಮುರಿಯುವಿಕೆಯನ್ನು ಸಂಭ್ರಮಿಸುವ ಕಾಲದಲ್ಲಿ ನಾವಿದ್ದೇವೆ ಎಂದಿದ್ದಾರೆ ಅತುಲ್ ಕುಲಕರ್ಣಿ.
ಅತುಲ್ ಕುಲಕರ್ಣಿ ಬಹಳ ವರ್ಷಗಳ ಹಿಂದೆ 'ಫಾರೆಸ್ಟ್ ಗಂಪ್' ಸಿನಿಮಾದ ಚಿತ್ರಕತೆ ಬರೆದಿದ್ದರು. ಆಮಿರ್ ಖಾನ್ ಅವರೇ ಹೇಳಿಕೊಂಡಿರುವಂತೆ, ಪಾರ್ಟಿಯೊಂದು ಮುಗಿದ ಬಳಿಕ ಅತುಲ್ ಕುಲಕರ್ಣಿ ಹಾಗೂ ಇನ್ನೂ ಕೆಲವು ಗೆಳೆಯರು ಮಾತ್ರವೇ ಕುಳಿತು ಮಾತನಾಡುವಾಗ 'ಫಾರೆಸ್ಟ್ ಗಂಪ್' ಸಿನಿಮಾದ ಚರ್ಚೆ ಬಂತು, ಆ ಸಿನಿಮಾವನ್ನು ಹಿಂದಿಯಲ್ಲಿ ಮಾಡಬೇಕು ಎಂದು ಆಮಿರ್ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಂಡ ಅತುಲ್ ಕುಲಕರ್ಣಿ ಕೇವಲ ಒಂದೇ ವಾರದಲ್ಲಿ ಸಿನಿಮಾದ ಚಿತ್ರಕತೆಯನ್ನು ಬರೆದಿದ್ದಾರೆ. ಬಳಿಕ ಅದನ್ನು ಆಮಿರ್ಗೆ ಓದಿಸಿದ್ದಾರೆ. ಆಮಿರ್ಗೆ ಆಗಲೇ ಚಿತ್ರಕತೆ ಇಷ್ಟವಾಗಿತ್ತಾದರೂ ಅನಿವಾರ್ಯ ಕಾರಣಗಳಿಂದ ಆ ಸಿನಿಮಾವನ್ನು ಆಗ ಮಾಡಲು ಸಾಧ್ಯವಾಗಿರಲಿಲ್ಲ.

ಅತುಲ್ ಕುಲಕರ್ಣಿ ಆಗ ಬರೆದಿದ್ದ ಚಿತ್ರಕತೆಗೆ ಕೆಲವು ಬದಲಾವಣೆಗಳನ್ನು ಮಾಡಿ ಈಗ ಅದ್ವೈತ ಚಂದನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿದೆ. 180 ಕೋಟಿ ವೆಚ್ಚದಲ್ಲಿ ಮಾಡಿದ ಸಿನಿಮಾ ಬಜೆಟ್ನ ಅರ್ಧದಷ್ಟನ್ನೂ ಬಾಕ್ಸ್ ಆಫೀಸ್ನಿಂದ ಗಳಿಸಿಲ್ಲ.
ಕನ್ನಡದ 'ಭೂಮಿ ಗೀತ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅತುಲ್ ಕುಲಕರ್ಣಿ, ತಮಿಳು, ತೆಲುಗು, ಮರಾಠಿ, ಹಿಂದಿಯ ಹಲವಾರು ಸಿನಿಮಾಗಳಲ್ಲಿ ನೆನಪುಳಿವ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ 'ರನ್', ಕಮಲ್ ಹಾಸನ್ರ 'ಹೇ ರಾಮ್' (ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ). 'ಚಾಂದಿನಿ ಬಾರ್', 'ರಂಗ್ ದೇ ಬಸಂತಿ', ಮರಾಠಿಯ 'ನಟರಂಗ', ಕನ್ನಡದ 'ಆ ದಿನಗಳು', 'ಎದೆಗಾರಿಕೆ', 'ಮೈತ್ರಿ', 'ಉಗ್ರಂ' ಸೇರಿದಂತೆ ವಿವಿಧ ಭಾಷೆಯ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











