ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?
ಇಪ್ಪತ್ತು ವರ್ಷಗಳ ಹಿಂದೆ ಅಂದ್ರೆ 1998 ರಲ್ಲಿ ಚಿಂಕಾರ ಹಾಗೂ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್ 'ಟೈಗರ್' ಸಲ್ಮಾನ್ ಖಾನ್ ದೋಷಿ ಎಂದು ಜೋಧ್ ಪುರ ನ್ಯಾಯಾಲಯ ತೀರ್ಪು ನೀಡಿದೆ.
1998 ರಲ್ಲಿ ಹಿಂದಿ ಸಿನಿಮಾ 'ಹಮ್ ಸಾಥ್ ಸಾಥ್ ಹೇ' ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದರು ಎಂದು ಬಿಷ್ಣೋಯಿ ಸಮುದಾಯ ಆರೋಪಿಸಿತು.
ಕೃಷ್ಣಮೃಗಗಳನ್ನು ಪೂಜ್ಯನೀಯ ಭಾವದಲ್ಲಿ ಕಾಣುವ ಬಿಷ್ಟೋಯಿ ಸಮುದಾಯಕ್ಕೆ ಈ ಪ್ರಕರಣ ಅತೀವ ಬೇಸರ ಮೂಡಿಸಿತ್ತು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಸಲ್ಮಾನ್ ವಿರುದ್ಧ ಕಾನೂನು ಹೋರಾಟಕ್ಕಿಳಿದ ಬಿಷ್ಣೋಯಿ ಸಮುದಾಯಕ್ಕೆ ಇಪ್ಪತ್ತು ವರ್ಷಗಳ ಬಳಿಕ ಜಯ ಸಿಕ್ಕಿದೆ. ಸಲ್ಮಾನ್ ಖಾನ್ ಅಪರಾಧಿ ಎಂದು ಸಾಬೀತಾಗಿರುವುದರಿಂದ ಬಿಷ್ಟೋಯಿ ಸಮುದಾಯ ಹರ್ಷ ವ್ಯಕ್ತಪಡಿಸಿದೆ.
ಅಷ್ಟಕ್ಕೂ, ಈ ಬಿಷ್ಣೋಯಿ ಸಮುದಾಯದ ಹಿನ್ನಲೆ ಏನು ಎಂದು ಯೋಚಿಸುತ್ತಿರುವವರು ಫೋಟೋ ಸ್ಲೈಡ್ ಗಳತ್ತ ಗಮನ ಹರಿಸಿ....

ಬಿಷ್ಣೋಯಿ ಸಮುದಾಯದ ಹಿನ್ನೆಲೆ
ರಾಜಸ್ಥಾನದಲ್ಲಿ ನೆಲೆಸಿರುವ ಬಿಷ್ಣೋಯಿ ಸಮುದಾಯದವರು ವಿಷ್ಣುವಿನ ಆರಾಧಕರು. ಪ್ರಕೃತಿ ಹಾಗೂ ವನ್ಯಜೀವಿಗಳನ್ನ ಪೂಜನೀಯ ಭಾವದಿಂದ ಕಾಣುವ ಬಿಷ್ಣೋಯಿ ಸಮುದಾಯಕ್ಕೆ ಆರು ಶತಮಾನಗಳ ಇತಿಹಾಸವಿದೆ. 15ನೇ ಶತಮಾನದಲ್ಲಿದ್ದ ಗುರು ಜಂಬೇಶ್ವರ ಈ ಸಮುದಾಯದ ಸಂಸ್ಥಾಪಕರು. ಬಿಷ್ಣೋಯಿ ಎಂದರೆ ರಾಜಸ್ಥಾನಿ ಭಾಷೆಯಲ್ಲಿ 29 ಎಂದರ್ಥ. ಗುರು ಜಂಬೇಶ್ವರನ 29 ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವವರೇ ಬಿಷ್ಣೋಯಿಗಳು.

ಬಿಷ್ಣೋಯಿಗಳ ತತ್ವಗಳೇನು?
ಪ್ರಕೃತಿಯನ್ನು ಉಳಿಸಿ ಬೆಳೆಸುವುದು, ವನ್ಯಜೀವಿಯನ್ನು ಪ್ರೀತಿಸುವುದು, ಸಸ್ಯಾಹಾರಿಯಾಗಿರುವುದು ಬಿಷ್ಣೋಯಿ ಸಮುದಾಯದ ತತ್ವ-ಸಿದ್ಧಾಂತಗಳು.

ಗುರುವಿನ ಪ್ರತಿರೂಪವೇ ಕೃಷ್ಣಮೃಗ
ಕೃಷ್ಣಮೃಗಗಳು ಗುರು ಜಂಬೇಶ್ವರನ ಪುನರ್ಜನ್ಮದ ರೂಪ ಅಂತ ಬಿಷ್ಣೋಯಿಗಳು ನಂಬಿದ್ದಾರೆ. ಗುರುಗಳನ್ನು ಆರಾಧಿಸುವ ಹೆಸರಿನಲ್ಲಿ ಅವಿಳಿನಂಚಿನಲ್ಲಿರುವ ಕೃಷ್ಣಮೃಗಗಳು ಮತ್ತು ಚಿಂಕಾರಗಳನ್ನ ಈ ಸಮುದಾಯ ರಕ್ಷಿಸುತ್ತಾ ಬಂದಿದೆ. ಇವುಗಳಿಗಾಗಿ ತಮ್ಮ ಕೃಷಿ ಭೂಮಿಯಲ್ಲಿ ಹೊಂಡ ತೋಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಷ್ಟು ಹೃದಯವಂತರು ಈ ಬಿಷ್ಣೋಯಿಗಳು.

ಬೇಟೆಯಾಡಿದ 'ಟೈಗರ್'
ಪ್ರಕೃತಿ ಹಾಗೂ ವನ್ಯಜೀವಿ ಸ್ನೇಹಿ ಆಗಿರುವ ಬಿಷ್ಣೋಯಿ ಸಮುದಾಯಕ್ಕೆ 1998 ರಲ್ಲಿ ದೊಡ್ಡ ಶಾಕ್ ಕಾದಿತ್ತು. ಆಗ ರಾಜಸ್ಥಾನದಲ್ಲಿ ಹಿಂದಿ ಚಿತ್ರ 'ಹಮ್ ಸಾಥ್ ಸಾಥ್ ಹೇ' ಶೂಟಿಂಗ್ ನಡೆಯುತ್ತಿತ್ತು. ಸಲ್ಮಾನ್ ಖಾನ್ ಹಾಗೂ ತಂಡ ಹಗಲು ಹೊತ್ತಿನಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದರೆ, ರಾತ್ರಿ ಹೊತ್ತಿನಲ್ಲಿ ಮೋಜು ಮಸ್ತಿ ಹೆಸರಿನಲ್ಲಿ ಹಂಟಿಂಗ್ ಸೆಷನ್ ನಡೆಸುತ್ತಿದ್ದರು. 1998 ರಲ್ಲಿ ಅಕ್ಟೋಬರ್ 1 ಹಾಗೂ 2 ರಂದು ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ ಬಗ್ಗೆ ಬಿಷ್ಣೋಯಿ ಸಮುದಾಯ ಆರೋಪಿಸಿ ದೂರು ನೀಡಿತ್ತು.

ಸಲ್ಮಾನ್ ಖಾನ್ ವಿರುದ್ಧ ದೂರು ನೀಡಿದ ಬಿಷ್ಣೋಯಿಗಳು
ರಾತ್ರಿ ಬಂದೂಕು ಸದ್ದು ಕೇಳಿಬಂದ ಕೂಡಲೆ ನಿದ್ರೆಯಿಂದ ಎಚ್ಚೆತ್ತ ಗ್ರಾಮಸ್ಥರು, ಓಡಿಬಂದು ನೋಡಿದಾಗ ಕೃಷ್ಣಮೃಗಗಳು ಸತ್ತು ಬಿದ್ದಿದ್ದವು. ಸಲ್ಮಾನ್ ಖಾನ್ ಕೈಯಲ್ಲಿ ಬಂದೂಕು ಇದ್ದದ್ದನ್ನ ಕೆಲವರು ಗಮನಿಸಿದರು. ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಲು ಸಲ್ಮಾನ್ ಹಾಗೂ ಸ್ನೇಹಿತರು ಪ್ರಯತ್ನ ಪಟ್ಟಾಗ ಜಿಪ್ಸಿಯನ್ನ ಗ್ರಾಮಸ್ಥರು ಅಟ್ಟಿಸಿಕೊಂಡು ಹೋದರು. ಬಳಿಕ ಬಿಷ್ಣೋಯಿ ಸಮುದಾಯ ಹಾಗೂ ಅರಣ್ಯ ಕಾವಲುಗಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಸಲ್ಲು ಜೊತೆಗೆ ಇದ್ದರು ತಾರೆಯರು
ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಜೊತೆಗೆ ಜಿಪ್ಸಿಯಲ್ಲಿ ಸೋನಾಲಿ ಬೇಂದ್ರೆ, ಸೈಫ್ ಅಲಿ ಖಾನ್, ಟಬು ಹಾಗೂ ನೀಲಂ ಕೂಡ ಇದ್ದರು. ಹೀಗಾಗಿ ಇವರೆಲ್ಲರ ವಿರುದ್ಧವೂ ಪ್ರಕರಣ ದಾಖಲಾಯಿತು.

ಇಪ್ಪತ್ತು ವರ್ಷಗಳ ಹೋರಾಟಕ್ಕೆ ಇಂದು ಜಯ
ಕೃಷ್ಣಮೃಗಗಳನ್ನು ಕೊಂದ ಸಲ್ಮಾನ್ ಖಾನ್ ವಿರುದ್ಧ ಬಿಷ್ಣೋಯಿ ಸಮುದಾಯ ಕಾನೂನು ಹೋರಾಟ ಆರಂಭಿಸಿತು. ಇಪ್ಪತ್ತು ವರ್ಷಗಳ ಬಿಷ್ಣೋಯಿ ಜನತೆಯ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಜೋಧ್ ಪುರ ನ್ಯಾಯಾಲಯ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ. ತೀರ್ಪಿನ ಪ್ರತಿ ಬಂದ ಕೂಡಲೆ ಜೋಧ್ ಪುರ ಸೆಂಟ್ರಲ್ ಜೈಲ್ ಗೆ ಸಲ್ಮಾನ್ ಖಾನ್ ರನ್ನ ಪೊಲೀಸರು ಕರೆದೊಯ್ದರು. ನ್ಯಾಯಾಲಯದ ತೀರ್ಪಿಗೆ ಬಿಷ್ಣೋಯಿ ಸಮುದಾಯ ಸಂತಸ ವ್ಯಕ್ತಪಡಿಸಿದೆ.


Click it and Unblock the Notifications











