ಹಾದಿ ತಪ್ಪಿದ ಮಾಧ್ಯಮಗಳಿಗೆ ನಟ-ನಟಿಯರ ಬಹಿರಂಗ ಪತ್ರ
ಭಾರತೀಯ ಮಾಧ್ಯಮಗಳು ಹಾದಿ ತಪ್ಪಿವೆ ಎಂಬುದು ಈಗಿನ ದೂರಲ್ಲ. 24/7 ನ್ಯೂಸ್ ಚಾನೆಲ್ಗಳು ಆರಂಭವಾದಾಗಿನಿಂದಲೂ ಈ ದೂರು ಇದ್ದೇ ಇದೆ. ಆದರೆ ಮಾಧ್ಯಮಗಳ ವರ್ತನೆ ದಿನಗಳೆದಂತೆ ಜವಾಬ್ದಾರಿಹೀನವಾಗುತ್ತಾ ಸಾಗುತ್ತಿದೆ ಎಂಬುದು ಜನರ ಅಭಿಪ್ರಾಯ.
ಇದೀಗ ಬಾಲಿವುಡ್ ನಟ-ನಟಿಯರು ಸೇರಿ, ಹಲವಾರು ಉದ್ಯಮಗಳು, ಖ್ಯಾತ ಸಂಸ್ಥೆಗಳು ಹೀಗೆ ಸಾವಿರಾರು ಮಂದಿ ಒಟ್ಟಾಗಿ ಭಾರತೀಯ ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ವಿಶೇಷವಾಗಿ ರಿಯಾ ಚಕ್ರವರ್ತಿ ಪ್ರಕರಣದಲ್ಲಿ ಮಾಧ್ಯಮಗಳು ನಡೆದುಕೊಂಡ ರೀತಿಯನ್ನು ಖಂಡಿಸಿ ಈ ಪತ್ರ ಬರೆಯಲಾಗಿದೆ. ರಿಯಾ ಚಕ್ರವರ್ತಿ ವಿರುದ್ಧ ದುರುದ್ದೇಶಪೂರ್ವಕ ದಾಳಿಯನ್ನು ಮಾಧ್ಯಮಗಳು ನಡೆಸುತ್ತಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ರಿಯಾ ಮೇಲೆ ಮಾಧ್ಯಮಗಳ ದಾಳಿಗೆ ಖಂಡನೆ
ನಟಿ ಸೋನಂ ಕಪೂರ್, ಜೋಯಾ ಅಖ್ತರ್, ಅನುರಾಗ್ ಕಶ್ಯಪ್, ಅದಿತಿ ಮಿತ್ತಲ್ ಸೇರಿ ಇನ್ನು ಹಲವು ಬಾಲಿವುಡ್ ಪ್ರಮುಖರು ಈ ಬಹಿರಂಗ ಪತ್ರವನ್ನು ಶೇರ್ ಮಾಡಿದ್ದಾರೆ. ಪತ್ರವು ರಿಯಾ ವಿರುದ್ಧ ನಡೆಸಲಾಗುತ್ತಿದ 'ಮಾಧ್ಯಮ ದಾಳಿ' ಕುರಿತಾಗಿದೆ.

'ಭಾರತೀಯ ಮಾಧ್ಯಮಗಳ ಬಗ್ಗೆ ಆತಂಕವಾಗುತ್ತಿದೆ'
ಭಾರತೀಯ ಮಾಧ್ಯಮಗಳೇ ನೀವು ಚೆನ್ನಾಗಿದ್ದೀರಾ? ನಿಮ್ಮ 'ಆರೋಗ್ಯ'ದ ಬಗ್ಗೆ ನಮಗೆ ಆತಂಕವಾಗುತ್ತಿದೆ. ಇತ್ತೀಚೆಗೆ ನಿಮ್ಮಲ್ಲಿ ಏನೋ ಸಮಸ್ಯೆ ಆಗಿದೆ. ಈ ಹಿಂದೆ ನೀವು ಚೆನ್ನಾಗಿದ್ದಿದ್ದನ್ನು, ಕೆಲವರೊಟ್ಟಿಗೆ ಚೆನ್ನಾಗಿ ನಡೆದುಕೊಂಡಿದ್ದನ್ನು ನೋಡಿದ್ದೇವೆ, ಹಾಗಾಗಿ ನಮಗೆ ಆತಂಕವಾಗುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸಲ್ಮಾನ್ ಖಾನ್, ಸಂಜಯ್ ದತ್ ಪ್ರಕರಣದಲ್ಲಿ ಹೀಗೆ ವರ್ತಿಸಲಿಲ್ಲ
'ಸಲ್ಮಾನ್ ಖಾನ್, ಸಂಜಯ್ ದತ್ ಬಗೆಗೆಲ್ಲಾ ನೀವು ಗೌರವದಿಂದ ನಡೆದುಕೊಂಡಿದ್ದೀರಿ. ಅವರ ವೃತ್ತಿ, ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ವರದಿಗಳನ್ನು ಮಾಡಿದ್ದಿರಿ, ಆದರೆ ಅಪರಾಧಿ ಎಂದು ಸಾಬೀತೇ ಆಗದ ಒಬ್ಬ ಯುವತಿಯ ವಿರುದ್ಧ ನೀವು ದಾಳಿ ಮಾಡುತ್ತಿದ್ದೀರಿ. ಆಕೆಯ ಮಾನ ಹರಣ ಮಾಡುತ್ತಿದ್ದೀರಿ. ಆಕೆಯ ಬಂಧನವನ್ನು ನಿಮ್ಮ ಗೆಲುವು ಎಂದು ಕುಣಿದಾಡಿದ್ದೀರಿ'.
Recommended Video

ಖಾಸಗಿತನದ ಹಕ್ಕು ಪದೇ-ಪದೇ ಉಲ್ಲಂಘನೆ
ಆಕೆಯ ಖಾಸಗಿತನದ ಹಕ್ಕನ್ನು ಪದೇ-ಪದೇ ಉಲ್ಲಂಘನೆ ಮಾಡಿದ್ದೀರಿ. ಆಕೆಯನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲೆಂದು ಪುಂಖಾನುಪುಂಖವಾಗಿ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ್ದೀರಿ. ಸತತವಾಗಿ ನಿಯಮಗಳನ್ನು ಮುರಿದಿರಿ ಆ ಯುವತಿಯನ್ನು ಏಕೆ ಗುರಿ ಮಾಡಿಕೊಂಡಿದ್ದೀರಿ? ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.


Click it and Unblock the Notifications











