'ಇನ್ಸ್ಟಾಗ್ರಾಂ ವೇಸ್ಟ್' ಅಂತ ಇನ್ಸ್ಟಾಗ್ರಾಂನಲ್ಲೇ ಬರೆದ ಕಂಗನಾ ರನೌತ್!
ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನೌತ್ ಸದಾ ಯಾರನ್ನಾದರೂ ಟಾರ್ಗೆಟ್ ಮಾಡ್ತಾನೇ ಇರ್ತಾರೆ. ಈಗ ಬಾಲಿವುಡ್ ಕ್ವೀನ್ ಕಣ್ಣು ಬಿದ್ದಿರೋದು ಇನ್ಸ್ಟಾಗ್ರಾಂ ಮೇಲೆ. ಹೌದು ಇನ್ಸ್ಟಾಗ್ರಾಂ ವೇಸ್ಟ್, ಅದರಿಂದ ಏನ್ ಉಪಯೋಗ ಇಲ್ಲ ಎಂದು ಕೆಂಡಕಾರಿದ್ದಾರೆ. ಹಾಗಂತ ಇನ್ಸ್ಟಾ ಸ್ಟೋರಿಯಲ್ಲೇ ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಟ್ವಿಟ್ಟರ್ನಲ್ಲಿ ಪದೇ ಪದೇ ದ್ವೇಷದ ಮಾತುಗಳು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಟ್ವೀಟ್ಗಳನ್ನು ಮಾಡಿ, ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕಂಗನಾ ರಣಾವತ್ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಲಾಗಿತ್ತು. ಟ್ವಿಟ್ಟರ್ ನಂತರ ಇನ್ಸ್ಟಾಗ್ರಾಂನಲ್ಲಿ ಕಂಗನಾ ಮತ್ತದೇ ಚಾಳಿ ಶುರು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲೂ ಆಕೆಯ ಪೋಸ್ಟ್ ಡಿಲೀಟ್ ಮಾಡಲಾಗಿತ್ತು. ಇದ್ದಕ್ಕಿದಂತೆ ಈಗ ಅತಿದೊಡ್ಡ ಸಾಮಾಜಿಕ ಜಾಲತಾಣವನ್ನು ಕಂಗನಾ ಟೀಕಿಸಿದ್ದಾರೆ.
ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಮೇಲೆ ಕಂಪನಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಟ್ವಿಟ್ಟರ್ನ ಹೊಸ ನಿಮಯಗಳನ್ನು ಸ್ವಾಗತಿಸಿ ಎಲಾನ್ ಮಸ್ಕ್ ಅವರಿಗೆ ಕಂಗನಾ ಬೆಂಬಲ ಸೂಚಿಸಿದ್ದರು. ಅದರ ಬೆನ್ನಲ್ಲೇ ಇನ್ಸ್ಟಾಗ್ರಾಂ ವಿರುದ್ಧ ಕಿಡಿಕಾರಿದ್ದಾರೆ.

"ಇನ್ಸ್ಟಾಗ್ರಾಂ ವೇಸ್ಟ್"
"ಮೂಕ ಇನ್ಸ್ಟಾಗ್ರಾಂ ಬರೀ ಫೋಟೊಗಳನ್ನು ಶೇರ್ ಮಾಡಲು ಅಷ್ಟೆ ಲಾಯಕ್ಕು. ಮಹತ್ತರವಾದ ಸಮಾಚಾರವನ್ನು ಇದರಲ್ಲಿ ಉಳಿಸಲು ಸಾಧ್ಯವಿಲ್ಲ. ಯಾರಾದರೂ ತಮ್ಮ ಅಭಿಪ್ರಾಯ ಹಂಚಿಕೊಂಡರೆ ಮರುದಿನ ಅದು ಕಾಣುವುದಿಲ್ಲ. ಇದರಿಂದ ನಮ್ಮ ಆಲೋಚನೆಯನ್ನು ಡಾಕ್ಯುಮೆಂಟ್ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ನಾವು ಏನು ಹೇಳಿದ್ವಿ, ಏನು ಬರೆದಿದ್ದೇವೆ ಎನ್ನುವ ಪರಿಜ್ಞಾನ ಇಲ್ಲದವರಿಗೆ ಇದು ಉತ್ತಮವಾದ ವೇದಿಕೆ. ಆದರೆ ನಮ್ಮಂತಹವರ ಪರಿಸ್ಥಿತಿ ಏನು? ಶೇರ್ ಮಾಡಿದ ಖಚಿತವಾದ ವಿಷಯಗಳನ್ನು ಸೇವ್ ಮಾಡಬೇಕಿದ್ದರೆ? ನಮ್ಮ ಆಲೋಚನೆಗಳನ್ನು ಆಳವಾಗಿ ಇತರರ ಜೊತೆ ಹಂಚಿಕೊಳ್ಳಬೇಕಾದರೆ ಹೇಗೆ?" ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ಬರೆದುಕೊಂಡಿದ್ದಾರೆ.

ಟ್ವಿಟ್ಟರ್ ಬ್ಲೂ ಟಿಕ್ ನಿಯಮ ಒಳ್ಳೆಯದು
ಇತ್ತೀಚೆಗೆ ಕಂಗನಾ ಟ್ವಿಟ್ಟರ್ ಹೊಸ ನಿಯಮಗಳನ್ನು ಕೊಂಡಾಡಿದ್ದರು. "ಈಗ ಇರುವ ಸಾಮಾಜಿ ಜಾಲತಾಣಗಳಲ್ಲಿ ಟ್ವಿಟ್ಟರ್ ಉತ್ತಮವಾದದ್ದು. ಬ್ಲೂ ಟಿಕ್ ಎನ್ನುವುದು ಉತ್ತಮ ನಿರ್ಧಾರ. ಕೆಲವರಿಗೆ ಮಾತ್ರ ಬ್ಲೂ ಟಿಕ್ ನೀಡುವ ಹಿಂದಿನ ಅರ್ಥ ನನಗೆ ಈಗಲೂ ಅರ್ಥವಾಗುತ್ತಿಲ್ಲ. ಉದಾಹರಣೆಗೆ ನನ್ನ ಅಕೌಂಟ್ಗೆ ಬ್ಲೂ ಟಿಕ್ ಕೊಡುತ್ತಾರೆ. ಅದೇ ನನ್ನ ತಂದೆಗೆ ಬ್ಲೂ ಟಿಕ್ ಬೇಕು ಅಂದರೆ ಬಹಳ ಸಲ ಆಲೋಚಿಸುತ್ತಾರೆ. ಅವರಿಗೆ ಯಾವುದಾದರೂ ಅಪರಾಧ ಹಿನ್ನಲೆ ಇದೆಯಾ? ಎಂತಹ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ? ಎಂತಹ ಅಂಶಗಳನ್ನು ನೋಡುತ್ತಾರೆ? ಎನ್ನುವುದನ್ನೆಲ್ಲಾ ನೋಡುತ್ತಾರೆ. ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಬ್ಲೂ ಟಿಕ್ ಇರಬೇಕು" ಎಂದಿದ್ದರು.

ಟ್ವಿಟ್ಟರ್ ಸೇವೆಗೆ ಹಣ ಕೊಡುವುದು ಉತ್ತಮ
"ಪ್ರಪಂಚದಲ್ಲಿ ಹೊಸದಾಗಿ ಆರಂಭವಾದ ಯಾವುದೇ ಸಂಸ್ಥೆ ತನ್ನ ಸೇವೆಯನ್ನು ಉಚಿತವಾಗಿ ನೀಡುತ್ತಿಲ್ಲ. ಹಾಗಿರುವಾಗ ಸಾಮಾಜಿಕ ಮಾಧ್ಯಮಗಳ ಬಗ್ಗೆ ಕೂಡ ಆಲೋಚಿಸಬೇಕು ಅಲ್ಲವೇ. ಉಚಿತವಾಗಿ ಸೇವೆ ಒದಗಿಸಿದರೆ ಅವರು ಹೇಗೆ ಉಳಿಯಲು ಸಾಧ್ಯ? ಸಾಮಾಜಿಕ ಮಾಧ್ಯಮಗಳು ಬರೀ ಸಮಾಚಾರವನ್ನು ವಿನಿಮಯ ಮಾಡುತ್ತಿಲ್ಲ. ನಿಮ್ಮನ್ನು ಅವರೊಟ್ಟಿಗೆ ಸೇರಿಸಿಕೊಂಡು ನಿಮ್ಮ ಮಾತುಗಳನ್ನು 10 ಜನಕ್ಕೆ ತಲುಪಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಅಂತಹ ಫ್ಲಾಟ್ಫಾರ್ಮ್ನ ಉಚಿತವಾಗಿ ನಿರ್ವಹಿಸದೇ ಇರುವುದೇ ಒಳ್ಳೆಯದು. ಹಾಗಾಗಿ ಟ್ವಿಟ್ಟರ್ ಅಕೌಂಟ್ಗಾಗಿ ಹಣ ಪಾವತಿಸುವುದರಲ್ಲಿ ತಪ್ಪಿಲ್ಲ" ಎಂದು ಕಂಗನಾ ಬರೆದುಕೊಂಡಿದ್ದರು.

'ಎರ್ಮಜೆನ್ಸಿ' ಚಿತ್ರದಲ್ಲಿ ನಟನೆ
ಇನ್ನು ಕಂಗನಾ ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗೆ ಆಕೆ ನಟಿಸಿದ 'ಧಾಕಡ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಸದ್ಯ 'ತೇಜಸ್' ಹಾಗೂ 'ಟಿಕು ವೆಡ್ಸ್ ಶೆರು' ಸಿನಿಮಾಗಳ ಚಿತ್ರೀಕರಣ ಮುಗಿದಿದೆ. 'ಎರ್ಮಜೆನ್ಸಿ' ಎನ್ನುವ ಸಿನಿಮಾವನ್ನು ನಿರ್ದೇಶಿಸಿ ನಟಿಸ್ತಿದ್ದಾರೆ. ಚಿತ್ರದಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











