ಟೈಮ್ ಪತ್ರಿಕೆ ಮುಖಪುಟ ಅಲಂಕರಿಸಿದ ಅಮೀರ್
Can one actor change a nation? ಎಂಬ ಶೀರ್ಷಿಕೆಯಲ್ಲಿ ಟೈಮ್ ನಿಯತಕಾಲಿಕೆ ಅಮೀರ್ ಖಾನ್ ಅವರ ಸಂದರ್ಶನ ಪ್ರಕಟಿಸುತ್ತಿದೆ. ಈ ಸಂದರ್ಶನದಲ್ಲಿ ಅಮೀರ್ ಖಾನ್ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.
ತಮ್ಮ ಟಾಕ್ ಶೋ ಸತ್ಯಮೇವ ಜಯತೇ ಮೂಲಕ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ಈ ಶೋ 100ಕ್ಕೂ ಅಧಿಕ ದೇಶಗಳಲ್ಲಿ ಪ್ರಸಾರವಾಗಿದೆ. ಈ ಕಾರ್ಯಕ್ರಮ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಡಬ್ ಆಗಿತ್ತು. ಕನ್ನಡ ಡಬ್ಬಿಂಗ್ ಕೋರಿ ಅಮೀರ್ ಖಾನ್ ಫಿಲಂ ಚೇಂಬರ್ ಗೂ ಪತ್ರ ಬರೆದದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟು 13 ಕಂತುಗಳಲ್ಲಿ ವಾರವಾರ ಪ್ರಸಾರವಾದ ಈ ಕಾರ್ಯಕ್ರಮ ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಭ್ರಷ್ಟಾಚಾರ, ಅನೈತಿಕತೆ, ದೌರ್ಜನ್ಯ, ಮರ್ಯಾದಾ ಹತ್ಯೆ, ಮದ್ಯಪಾನ, ಅಸ್ಪೃಶ್ಯತೆ...ಮುಂತಾದ ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತ್ತು.
ಈ ಕಾರ್ಯಕ್ರಮದ ಮೂಲಕ ಅಮೀರ್ ಖಾನ್ ಕಿರುತೆರೆಗೆ ಅಡಿಯಿಟ್ಟು ಹೊಸ ಚರ್ಚೆಗೆ ನಾಂದಿ ಹಾಡಿದ್ದರು. ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವೂ ಆಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಟೈಮ್ ಪತ್ರಿಕೆ ಅಮೀರ್ ಅವರನ್ನು ಸಂದರ್ಶಿಸಿದೆ. ಈ ಹಿಂದೆ ತಾರೆ ಐಶ್ವರ್ಯಾ ರೈ ಅವರ ಬಗ್ಗೆ ಟೈಮ್ ನಿಯತಕಾಲಿಕೆ ಮುಖಪುಟ ಸುದ್ದಿ ಮಾಡಿತ್ತು.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ರಾಜಕೀಯ ಧುರೀಣರಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ನರೇಂದ್ರ ಮೋದಿ ಇದುವರೆಗೂ ಟೈಮ್ ಮುಖಪುಟ ಅಲಂಕರಿಸಿದ ಇತರೆ ವ್ಯಕ್ತಿಗಳು. (ಏಜೆನ್ಸೀಸ್)


Click it and Unblock the Notifications












