ಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಬಾಂಬೆ ಹೈಕೋರ್ಟ್ ತಡೆ
ನಟಿ ಕಂಗನಾ ರಣಾವತ್ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಬಾಂದ್ರಾದಲ್ಲಿರುವ ನಟಿಯ ಕಚೇರಿಯನ್ನು ನೆಲಸಮ ಮಾಡುವ ಕಾರ್ಯಕ್ಕೆ ಮುಂಬೈ ಮಹಾನಗರ ಪಾಲಿಕೆ ಚಾಲನೆ ನೀಡಿತ್ತು.
ಜೆಸಿಬಿ ಯಂತ್ರ ಬಳಸಿ ಪಾಲಿಕೆ ಸಿಬ್ಬಂದಿ ಕಂಗನಾ ರಣಾವತ್ ಅವರ ಕಚೇರಿಯನ್ನು ಉರುಳಿಸುವ ಕಾರ್ಯವನ್ನು ಸಹ ಆರಂಭಿಸಿದ್ದರು. ಕಚೇರಿಯ ಪೀಠೋಪಕರಣ ಹಾಗೂ ಆಸ್ತಿಪಾಸ್ತಿಯನ್ನು ನಾಶ ಮಾಡಲಾಗಿತ್ತು.
ಇದೀಗ, ಮುಂಬೈ ಹೈ ಕೋರ್ಟ್ ಕಂಗನಾ ಅವರ ಕಚೇರಿ ನೆಲಸಮ ಮಾಡದಿರಲು ಸೂಚಿಸಿದೆ. ಮುಂಬೈ ಪಾಲಿಕೆಯ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಕಂಗನಾಗೆ ನ್ಯಾಯಾಲಯ ರಿಲೀಫ್ ನೀಡಿದೆ.

ಕಂಗನಾ ರಣಾವತ್ ಅವರ ಆಸ್ತಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಮತ್ತು ವಿವರಗಳನ್ನು ಮುಂಬೈ ಪಾಲಿಕೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶ ಜೆಸಿ ಕಥಾವಲ್ಲಾ ಅವರ ಮುಂದೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಕುರಿತು ಕಂಗನಾ ರಣಾವತ್ ಅವರ ವಕೀಲ ರಿಜ್ವಾನ್ ಸಿದ್ದಿಕಿ ಪ್ರತಿಕ್ರಿಯೆ ನೀಡಿದ್ದು, ''ಬಿಎಂಸಿ ನೀಡಿರುವ ನೋಟಿಸ್ ಕಾನೂನುಬಾಹಿರ ಮತ್ತು ಅವರು ಅಕ್ರಮವಾಗಿ ಕಂಗನಾ ಕಚೇರಿಯ ಆವರಣಕ್ಕೆ ಪ್ರವೇಶಿಸಿದರು. ಸದ್ಯಕ್ಕೆ ಆವರಣದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ'' ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಹಿಮಾಚಲ ಪ್ರದೇಶದಿಂದ ಇಂದು ಮುಂಬೈಗೆ ಆಗಮಿಸುತ್ತಿರುವ ಕಂಗನಾ ಅವರಿಗೂ ಶಿವಸೇನಾ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಿಂತೆ ಹಿಮಾಚಲ ಸರ್ಕಾರ ಕಂಗನಾ ಅವರಿಗೆ 'ವೈ' ಶ್ರೇಣಿಯ ಭದ್ರತೆ ನೀಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಅನ್ವಯ ಕಂಗನಾ ಮುಂಬೈಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.


Click it and Unblock the Notifications











