ಚೆನ್ನೈ ಎಕ್ಸ್ ಪ್ರೆಸ್ ಸವಾರಿ ಮುನ್ನೋಟ
ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಬಿಡುಗಡೆಗೆ ಮುನ್ನವೇ ಸಿನಿರಸಿಕರ ಹೃದಯದಲ್ಲಿ ನಾಗಲೋಟ ಆರಂಭಿಸಿದೆ. ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಓಟಕ್ಕೆ ಬ್ರೇಕ್ ಹಾಕುವವರೇ ಇಲ್ಲದ್ದಂತಾಗಿದೆ. ರಂಜಾನ್ ದಿನ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆ ಕಾಣಲು ಸಿದ್ಧವಾಗಿರುವ ರೋಹಿತ್ ಶೆಟ್ಟಿ ಅವರ ಎಕ್ಸ್ ಪ್ರೆಸ್ ಪ್ರೇಕ್ಷಕರ ನಿರೀಕ್ಷೆಯ ಹಳಿಮೇಲೆ ಸಾಗುವುದೋ ಇಲ್ಲವೋ ಕಾದು ನೋಡಬೇಕಿದೆ. ಚಿತ್ರದ ಮುನ್ನೋಟ ಇಲ್ಲಿದೆ.
ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಪ್ರದರ್ಶನಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನ(ಎಂಎನ್ಎಸ್) ಬೆದರಿಕೆ ಹಾಕಿದ್ದು ಬಿಟ್ಟರೆ ಉಳಿದಂತೆ ಚಿತ್ರದ ಪ್ರಚಾರಕ್ಕೆ ಭಾರತದೆಲ್ಲೆಡೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಹುಲ್(ಶಾರುಖ್) ಹಾಗೂ ಮೀನಮ್ಮ( ದೀಪಿಕಾ) ಜೋಡಿ ಏನು ಮೋಡಿ ಮಾಡಲಿದ್ದಾರೆ ಎಂಬುದು ನಾಳೆ ಈ ವೇಳೆಗಾಗಲೇ ತಿಳಿದು ಬಿಡುತ್ತದೆ. ಆದರೆ, ಚಿತ್ರ ಬಿಡುಗಡೆಗೆ ಮುನ್ನ ಮಾಡಿರುವ ಪ್ರಚಾರ, ಮಾರುಕಟ್ಟೆ ಬಳಕೆ, ಸ್ಥಳೀಯ ಹವಾಗುಣಕ್ಕೆ ತಕ್ಕಂತೆ ಬದಲಾಗುತ್ತಾ ಎಲ್ಲರ ಮೆಚ್ಚುಗೆ ಗಳಿಸುವ ಸ್ಟಾರ್ ಗಳ ತಂತ್ರ ವರ್ಕ್ ಔಟ್ ಆದ್ದಂತಿದೆ.
ಉತ್ತರ ಭಾರತ ಹುಡುಗ ಆಕಸ್ಮಿಕವಾಗಿ ಚೆನ್ನೈ ಎಕ್ಸ್ ಪ್ರೆಸ್ ಏರುತ್ತಾನೆ ಅಲ್ಲಿ ದಕ್ಷಿಣ ಭಾರತದ ಹುಡುಗಿ ಮೀನಾ ಪರಿಚಯವಾಗುತ್ತದೆ. ಇಬ್ಬರ ಪಯಣ ಮುಂದೆ ಲವ್ ಸ್ಟೇಷನ್ ನಲ್ಲಿ ಬಂದು ನಿಲ್ಲುತ್ತದೆ. ರಾಹುಲ್ ಗೆ ಅಜ್ಜ ಅಜ್ಜಿ ಎಂದರೆ ಪ್ರಾಣ. ಮೀನಾಗೆ ಅಪ್ಪನೆಂದರೆ ಭಯಮಿಶ್ರಿತ ಗೌರವ. ಕೊಂಬನ್ ಗ್ರಾಮದ ಡಾನ್ ಮಗಳನ್ನು ನಾರ್ಥಿ ಹುಡ್ಗ ರಾಹುಲ್ ಗೆ ಹೇಗೆ ಮರಳು ಮಾಡಿ ಹೊತ್ತೊಯ್ಯುತ್ತಾನೆ ಎಂಬುದೇ ಕಥಾಸಾರ. ದೇಶದ ಅನೇಕ ಕಡೆ ಚಿತ್ರಮಂದಿರಗಳಲ್ಲಿ ಈಗಾಗಲೇ ಟಿಕೆಟ್ ಮುಂಗಡ ಬುಕ್ಕಿಂಗ್ ಸೋಲ್ಡ್ ಆಗಿದೆಯಂತೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಕುರಿತ ಕುತೂಹಲಕಾರಿ ವಿಷಯಗಳು ಒಂದಷ್ಟು ಇಲ್ಲಿವೆ ನೋಡಿ...

ಭರ್ಜರಿ ರಿಲೀಸ್
2013ರಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಚಿತ್ರ ಇದಾಗಿದೆ. ಭಾರತದಲ್ಲಿ 3500 ಸ್ಕ್ರೀನ್ ವಿದೇಶಗಳಲ್ಲಿ 700 ಸ್ಕ್ರೀನ್ ನಲ್ಲಿ ಪ್ರದರ್ಶನವಾಗಲಿದೆ.
ಪೆರು, ಮೊರಕ್ಕೋ, ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರೀಯ, ಫ್ರಾನ್ ಹಾಗೂ ಇಸ್ರೇಲ್ ನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಉತ್ತರ ಅಮೆರಿಕದಲ್ಲಿ 195 ಸ್ಕ್ರೀನ್, ಬ್ರಿಟನ್ನಿನಲ್ಲಿ 175 ಸ್ಕ್ರೀನ್, ಮಧ್ಯಪ್ರಾಚ್ಯದಲ್ಲಿ 55 ಸ್ಕ್ರೀನ್ ಹಾಗೂ ಆಸ್ಟ್ರೇಲಿಯಾದಲ್ಲಿ 30 ಸ್ಕ್ರೀನ್ ನಲ್ಲಿ ಎಕ್ಸ್ ಪ್ರೆಸ್ ಓಡಲಿದೆ.

ಮೂವಿ ಗೇಮ್
ಶಾರುಖ್ ಖಾನ್ ಮಾರುಕಟ್ಟೆ ವಿಸ್ತರಣೆ ತಂತ್ರಗಳನ್ನು ಈ ಹಿಂದೆ ರಾ ಒನ್ ವೇಳೆ ನೋಡಲಾಗಿತ್ತು. ಈಗ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಅಧಾರದ ಮೇಲೆ ವಿಡಿಯೋ ಗೇಮ್ ಮಾಡುವ ಐಡಿಯಾ ಮಾಡಿದರು. ರೋಹಿತ್ ಶೆಟ್ಟಿ ಅವರು ತಕ್ಷಣವೇ ಚೆನ್ನೈ ಎಕ್ಸ್ ಪ್ರೆಸ್ ಎಸ್ಕೇಪ್ ಫ್ರಂ ರಾಮೇಶ್ವರಂ ಎಂಬ ಹೆಸರಿನ ಮೂವಿ ಗೇಮ್ ತಯಾರಿಕೆಗೆ ಚಾಲನೆ ನೀಡಿಬಿಟ್ಟರು.

ಚಿತ್ರದ ಬಗ್ಗೆ ಕ್ರೇಜ್
ದಕ್ಷಿಣ ಭಾರತದ ಹಿಟ್ ಚಿತ್ರಗಳನ್ನು, ಸಕ್ಸಸ್ ಫಾರ್ಮುಲಾಗಳನ್ನು ಹೆಕ್ಕಿ ತೆಗೆದು ಬಾಲಿವುಡ್ ಮಂದಿಗೆ ಅರ್ಥವಾಗುವಂತೆ ನೀಡುವಲ್ಲಿ ಪಳಗಿರುವ ರೋಹಿತ್ ಅವರು 'ಚೆನ್ನೈ ಎಕ್ಸ್ ಪ್ರೆಸ್' ಓಡಿಸುವ ಮೂಲಕ ಎರಡು ಭಾಗಕ್ಕೂ ಒಳ್ಳೆ ಬೆಸುಗೆ ಹಾಕುವ ಯತ್ನದಲ್ಲಿದ್ದಾರೆ.
ಇಂಟರ್ನೆಟ್ ನಲ್ಲಿ ಶಾರುಖ್, ದೀಪಿಕಾ, ರೋಹಿತ್ ಶೆಟ್ಟಿ ಬಗ್ಗೆ ಸರ್ಚ್ ಮಾಡುವವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಸುಮಾರು 9 ತಿಂಗಳ ನಂತರ ಶಾರುಖ್ ಅವರ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ.
ನಿರೀಕ್ಷೆ
ಯಶಸ್ವಿ ಚಿತ್ರಗಳನ್ನು ನೀಡಿರುವ ರೋಹಿತ್ ಶೆಟ್ಟಿ ಹಾಗೂ ಕಿಂಗ್ ಖಾನ್ ಶಾರುಖ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವುದು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಅಭಿಮಾನಿಗಳ ನಿರೀಕ್ಷೆ ಜತೆಗೆ ವಿತಕರರು, ಪ್ರದರ್ಶಕರಲ್ಲೂ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹುಟ್ಟಿದೆ. ಬಾಲಿವುಡ್ ಮಾರುಕಟ್ಟೆ ವಿಸ್ತಾರ ಹಾಗೂ ಲಾಭ ಗಳಿಕೆ ಈ ಚಿತ್ರ ಮುನ್ನುಡಿ ಬರೆಯಲಿದೆ ಎಂದು ನಂಬಲಾಗಿದೆ. ಅದರೆ, ಅತಿಯಾದ ನಿರೀಕ್ಷೆ ಎಂದಿಗೂ ಅಪಾಯಕಾರಿ ಎಂಬ ಮಾತು ಮರೆಯುವಂತಿಲ್ಲ.
ರಂಜಾನ್ ರಿಲೀಸ್
ಶುಕ್ರವಾರ ಆಗಸ್ಟ್ 9 ರ ಈದ್ ಹಬ್ಬದ ಸಮಯಕ್ಕೆ ಶಾರುಖ್ ಹಾಗೂ ದೀಪಿಕಾ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ರಂಜಾನ್ ಸಮಯದಲ್ಲಿ ಬಿಡುಗಡೆಗೊಂಡ ಚಿತ್ರ ಹಿಟ್ ಆದ ಉದಾಹರಣೆಗಳಿದೆ.
ಸಲ್ಮಾನ್ ಅವರ ವಾಂಟೆಡ್ ಕೂಡಾ ರಂಜಾನ್ ವೇಳೆ ತೆರೆ ಕಂಡಿತ್ತು. ವಾರಾಂತ್ಯ ಸೇರಿ ಮೊದಲ ಮೂರು ದಿನಗಳಲ್ಲೇ ಚಿತ್ರ ಭರ್ಜರಿ ಲಾಭ ಗಳಿಕೆ ನಿರೀಕ್ಷೆ ಹೊಂದಿದೆ.
ತಾರೆಗಳ ದಂಡು
ಶಾರುಖ್- ಜೂಹಿ ಚಾವ್ಲಾ ಅವರ ರೆಡ್ ಚಿಲ್ಲಿಸ್ ಎಂಟರ್ ಟೈಮೆಂಟ್ಸ್ ಹಾಗೂ ಯುಟಿವಿ ಮೋಷನ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಓಂ ಶಾಂತಿ ಓಂ ಚಿತ್ರದ ಯಶಸ್ವಿ ಜೋಡಿ ದೀಪಿಕಾ-ಶಾರುಖ್ ರನ್ನು ಹೊಂದಿರುವುದು ಪ್ಲಸ್ ಪಾಯಿಂಟ್. ತಮಿಳು ಚಿತ್ರರಂಗದ ಹಿರಿಯ ನಟ ಸತ್ಯರಾಜ್ ಸೇರಿದಂತೆ ಹಲವಾರು ತಾರೆಗಳ ದಂಡೆ ಈ ಚಿತ್ರದಲ್ಲಿದೆ.

ಪ್ರಿಯಮಣಿ ಐಟಂ ನಂಬರ್
ದಕ್ಷಿಣ ಭಾರತದ ಹೆಸರಾಂತ ನಾಯಕಿ ಪ್ರಿಯಾಮಣಿ ಅವರು ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ 'ಒನ್, ಟೂ, ಥ್ರೀ, ಫೋರ್..' ಎಂದು ಕುಣಿದಿರುವ ಐಟಂ ನಂಬರ್ ಈಗಾಗಲೇ ಹಿಟ್ ಆಗಿದೆ. ಪ್ರೇಕ್ಷಕರನ್ನು ಸೆಳೆಯಲು ಇದು ಕೂಡಾ ಪೂರಕವಾಗಬಹುದು.

ದೀಪಿಕಾ ಭಾಷೆ ಉಚ್ಚಾರಣೆ
ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಅವರು ಸಾಂಪ್ರದಾಯಿಕ ತಮಿಳು ಹುಡುಗಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ತಮಿಳು ಭಾಷೆ ಉಚ್ಚಾರಣೆಯಂತೆ ಹಿಂದಿ ಭಾಷೆಯನ್ನು ಮಾತನಾಡಿರುವುದು ಪ್ರೇಕ್ಷಕರಲ್ಲಿ ನಗೆ ಉಕ್ಕಿಸುತ್ತದೆ.

ವಿವಾದ
ತಮಿಳು ಸಂಸ್ಕೃತಿ, ಭಾಷೆಗೆ ಈ ಚಿತ್ರ ಅಪಮಾನ ಮಾಡುತ್ತಿದೆ ಎಂದು ಕೆಲವರು ಗರಂ ಆಗಿದ್ದರು. ಕೆಲವು ಕಡೆ ದಕ್ಷಿಣ ಭಾರತೀಯರನ್ನು ಸಂಬೋಧಿಸುವಾಗ ಶಾರುಖ್ ಅವರು 'ಮದ್ರಾಸಿಗಳು' ಎಂದಿದ್ದು, ತಮಿಳು ನಾಡು ಬಿಟ್ಟು ಉಳಿದ ರಾಜ್ಯ ನಿವಾಸಿಗಳಿಗೆ ಕೆರಳಿತ್ತು.
ಮರಾಠಿಗರ ಭಾವನೆಗೆ ಧಕ್ಕೆ ಬಂದರೆ, ಮರಾಠಿ ಚಿತ್ರಗಳನ್ನು ನಿರ್ಲಕ್ಷಿಸಿದರೆ ಮುಂಬೈನಲ್ಲಿ ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ವೇದಿಕೆ ಗುಡುಗಿತ್ತು. ಶಾರುಖ್ ಚಿತ್ರ ಎಂದ ಮೇಲೆ ವಿವಾದ ಇದ್ದದ್ದೇ.

ಇದು ಮಂಗಳೂರು ಎಕ್ಸ್ ಪ್ರೆಸ್
ಶಾರುಖ್ ಖಾನ್ ಅವರು ಮಂಗಳೂರಿನಲ್ಲಿ ಹುಟ್ಟಿದವರು ಎಂಬ ಸುದ್ದಿ ಬೆನ್ನಲ್ಲೇ ಈ ಚಿತ್ರಕ್ಕೆ ಈ ಮೊದಲು ಮುಂಬೈ ಟು ರಾಮೇಶ್ವರಂ ಎಂದು ಹೆಸರಿಡಲಾಗಿದ್ದಂತೆ. ನಂತರ ಕೆ ಸುಭಾಷ್ ಅವರು ಹೆಸರು ಬದಲಾಯಿಸಿದರಂತೆ.
ರೋಹಿತ್ ಶೆಟ್ಟಿ (ತುಳು- ಮಂಗಳೂರಿನವರು). ದೀಪಿಕಾ ಪಡುಕೋಣೆ(ಕೊಂಕಣಿ-ಮಂಗಳೂರು/ಬೆಂಗಳೂರು) ಜತೆ ಶಾರುಖ್ ಕೂಡಾ ಕುಡ್ಲದ ಹುಡುಗ ಎಂದು ತಿಳಿದು ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಇದು ಚಿತ್ರಕ್ಕೆ ಯಾವ ರೀತಿ ಲಾಭ ತರುವುದೋ ಕಾದು ನೋಡಬೇಕಿದೆ.

Click it and Unblock the Notifications











