2018 ರಿವೈಂಡ್: ಪರಭಾಷಾ ಅಂಗಳದ ಗದ್ದಲದ ಗಲ್ಲಿಯಲ್ಲಿ ಒಂದು ಸುತ್ತು.!
ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಪರಭಾಷೆಯ ಚಿತ್ರರಂಗಗಳಲ್ಲೂ ಈ ವರ್ಷ ಬೇಜಾನ್ ವಿವಾದಗಳು ಸದ್ದು ಮಾಡಿತು.
ಬಾಲಿವುಡ್ ನಲ್ಲಂತೂ ಈ ವರ್ಷ ಹೆಚ್ಚು ಸದ್ದು ಮಾಡಿದ್ದು #ಮೀಟೂ. ಈ ಅಭಿಯಾನ ಶುರು ಆಗುವ ಮುನ್ನವೇ ತೆಲುಗಿನ ನಟಿ ಶ್ರೀರೆಡ್ಡಿ 'ಕಾಸ್ಟಿಂಗ್ ಕೌಚ್' ವಿರುದ್ಧ ಅರೆನಗ್ನ ಪ್ರತಿಭಟನೆ ನಡೆಸಿದ್ದರು. ಇನ್ನೂ #ಮೀಟೂ ಅಭಿಯಾನದ ಅಡಿ ಬಾಲಿವುಡ್ ನ ಪ್ರಖ್ಯಾತ ನಿರ್ದೇಶಕರ ಮುಖವಾಡ ಕಳಚಿ ಬಿತ್ತು.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ದೋಷಿ ಎಂಬ ಮಹತ್ವದ ತೀರ್ಪು ಪ್ರಕಟ ಆಗಿದ್ದು ಇದೇ ವರ್ಷ.
ಇದರೊಂದಿಗೆ ಇನ್ನೂ ಹತ್ತು-ಹಲವು ವಿವಾದಗಳು ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ನ ಈ ವರ್ಷ ಕಾಡಿತು. ಪರಭಾಷಾ ಅಂಗಳದ ಗದ್ದಲದ ಗಲ್ಲಿಯಲ್ಲಿ ಒಂದು ಸುತ್ತು ಹಾಕೊಂಡು ಬರೋಣ ಬನ್ನಿ....

'ಪದ್ಮಾವತ್' ವಿವಾದ
'ಪದ್ಮಾವತ್' ಚಿತ್ರದ ಬಿಡುಗಡೆಗೆ ಮಧ್ಯ ಪ್ರದೇಶ, ಹರಿಯಾಣ, ಗುಜರಾತ್, ರಾಜಸ್ಥಾನದಲ್ಲಿ ನಿಷೇಧ ಹೇರಲಾಗಿತ್ತು. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ಬಳಿಕ ಭಾರಿ ವಿವಾದದಿಂದ ಸದ್ದು ಮಾಡಿದ ಈ ಸಿನಿಮಾ ಜನವರಿ 25 ರಂದು ದೇಶದಾದ್ಯಂತ ಬಿಡುಗಡೆ ಆಯ್ತು.

ಪ್ರಿಯಾಂಕಾ ವಿರುದ್ಧ ಕೋಪಗೊಂಡ ಕಾಂಗ್ರೆಸ್ ಶಾಸಕರು
ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬಿಡುಗಡೆ ಆದ ಕ್ಯಾಲೆಂಡರ್ ನಲ್ಲಿ ಪ್ರಿಯಾಂಕಾ ಛೋಪ್ರಾ ಎದೆ ಸೀಳು ಕಾಣುತ್ತಿದ್ದರಿಂದ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ''ಇದು ಅಸ್ಸಾಂ ಸಂಸ್ಕೃತಿಗೆ ಧಕ್ಕೆ ತಂದಿದೆ'' ಎಂದು ಶಾಸಕರು ಆಕ್ರೋಶಗೊಂಡರು.

ಸಲ್ಮಾನ್ ಖಾನ್ ಅಪರಾಧಿ
1998 ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣದ ಮಹತ್ವದ ತೀರ್ಪು ಈ ವರ್ಷ ಹೊರಬಿತ್ತು. ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ರಾಜಸ್ಥಾನದ ಜೋಧ್ ಪುರದ ಸಿ.ಜೆ.ಎಂ ನ್ಯಾಯಾಲಯ ತೀರ್ಪು ನೀಡಿತು. ತೀರ್ಪಿನ ಅನ್ವಯ ಸಲ್ಮಾನ್ ರನ್ನ ಬಂಧಿಸಲಾಯಿತು. ಜೈಲಿನಲ್ಲಿ ಎರಡು ರಾತ್ರಿ ಕಳೆದ ಬಳಿಕ ಜಾಮೀನು ಪಡೆದುಕೊಂಡು ಮನೆಗೆ ಮರಳಿದರು ಸಲ್ಮಾನ್ ಖಾನ್.

ಅರೆನಗ್ನ ಪ್ರತಿಭಟನೆ ಮಾಡಿದ ಶ್ರೀರೆಡ್ಡಿ
ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ಮಾಡಿ 'ಕಾಸ್ಟಿಂಗ್ ಕೌಚ್' ಬಗ್ಗೆ ಬಾಂಬ್ ಸಿಡಿಸಲು ಶುರು ಮಾಡಿದವರು ಶ್ರೀರೆಡ್ಡಿ. ಟಾಲಿವುಡ್ ನ ಹಲವು ನಟರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ತೆಲುಗು ಸಿನಿ ಅಂಗಳದಲ್ಲಿ ಶ್ರೀರೆಡ್ಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು.

ಸರೋಜ್ ಖಾನ್ ಶಾಕಿಂಗ್ ಹೇಳಿಕೆ
''ಕಾಸ್ಟಿಂಗ್ ಕೌಚ್ ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ಸರೋಜ್ ಖಾನ್ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಯ್ತು. ಹಲವು ನಟಿಯರು ಸರೋಜ್ ಖಾನ್ ಹೇಳಿಕೆಯನ್ನ ಖಂಡಿಸಿದರು.

ಕರಾಳ ಸತ್ಯ ಬಾಯ್ಬಿಟ್ಟ ಮಾಹಿ ಗಿಲ್
'ದೇವ್ ಡಿ', 'ಗುಲಾಲ್', 'ದಬ್ಬಂಗ್', 'ವೆಡ್ಡಿಂಗ್ ಆನಿವರ್ಸರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಮಾಹಿ ಗಿಲ್, ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗ ಎದುರಿಸಿದ ಸಂಕಷ್ಟಗಳ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದು ಇದೇ ವರ್ಷ.

ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ
ಬಹುಭಾಷಾ ನಟಿಯ ಅಪಹರಣ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ವಾಸ ಅನುಭವಿಸಿದ್ದ ದಿಲೀಪ್ ಅವರನ್ನು ಮಲಯಾಳಂ ಕಲಾವಿದರ ಸಂಘ 'ಅಮ್ಮ' ಮತ್ತೆ ಸೇರಿಸಿಕೊಂಡಿತು. ಇದರಿಂದ ಅಸಮಾಧಾನಗೊಂಡ ಕೆಲ ನಟಿಯರು 'ಅಮ್ಮ' ಸಂಘದಿಂದ ಹೊರನಡೆದರು. ಕೊನೆಗೆ ದಿಲೀಪ್ ರವರೇ ಸಂಘದಿಂದ ಹಿಂದೆ ಸರಿದರು.

ಮಣಿಕರ್ಣಿಕಾ ಸುತ್ತ ವಿವಾದದ ಗೂಡು
ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಜೀವನಚರಿತ್ರೆ ಆಧಾರಿತ ಚಿತ್ರ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ವಿವಾದದ ಕೇಂದ್ರಬಿಂದು ಆಯ್ತು. ಚಿತ್ರದಿಂದ ನಿರ್ದೇಶಕ ಕ್ರಿಶ್ ಹೊರಗೆ ಬರ್ತಿದ್ದಂತೆ, ನಟಿ ಕಂಗನಾ ಡೈರೆಕ್ಟರ್ ಕ್ಯಾಪ್ ತೊಟ್ಟರು. ಕಂಗನಾ ನಿರ್ದೇಶಕಿ ಆದ್ಮೇಲೆ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಆದ ಕಾರಣ, ಸೋನು ಸೂದ್ ಸೇರಿದಂತೆ ಹಲವು ನಟ-ನಟಿಯರು ಚಿತ್ರತಂಡಕ್ಕೆ ಗುಡ್ ಬೈ ಹೇಳಿದರು.

ಸಲ್ಮಾನ್ ಗೆ ಸಂಕಷ್ಟ
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಶೀರ್ಷಿಕೆ ಬಳಸಲಾಗಿದೆ ಎಂದು ಆರೋಪಿಸಿ 'ಲವ್ ರಾತ್ರಿ' ಚಿತ್ರದ ವಿರುದ್ಧ ದೂರು ದಾಖಲಾಯಿತು. ನವರಾತ್ರಿಗೆ ಪ್ರಾಸವಾಗಿರುವಂತೆ ಲವ್ ರಾತ್ರಿಯನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಇದು ದೇವಿ ದುರ್ಗಾಮಾತೆಗೆ ಮಾಡಿರುವ ಅಪಮಾನ ಎಂದು ದೂರಿನಲ್ಲಿ ಹೇಳಲಾಗಿದ್ದು, ಸಲ್ಮಾನ್ ಖಾನ್ ಸೇರಿದಂತೆ 7 ಮಂದಿ ವಿರುದ್ಧ ದೂರು ನೀಡಲಾಯಿತು. 'ಲವ್ ರಾತ್ರಿ' ಸಿನಿಮಾ ಅಡೆತಡೆ ಇಲ್ಲದೆ ತೆರೆಗೆ ಬಂದರೂ, ಚೆನ್ನಾಗಿ ಕಲೆಕ್ಷನ್ ಮಾಡಲಿಲ್ಲ.

ಮೀಟೂ ಅಭಿಯಾನ
ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿದೆದ್ದ ಮೇಲೆ ಹಿಂದಿ ಚಿತ್ರರಂಗದಲ್ಲಿ #ಮೀಟೂ ಅಭಿಯಾನ ಆರಂಭ ಆಯ್ತು. ಇದರ ಮೂಲಕ ಸಾಜಿದ್ ಖಾನ್, ಸುಭಾಷ್ ಘಾಯ್, ವಿಕಾಸ್ ಬಾಹ್ಲ್ ಮುಖವಾಡ ಕಳಚಿ ಬಿತ್ತು.

'ಸರ್ಕಾರ್' ಚಿತ್ರಕ್ಕೆ ವಿರೋಧ
ವಿಜಯ್ ಅಭಿನಯದ 'ಸರ್ಕಾರ್' ಚಿತ್ರ ಕೂಡ ವಿವಾದಕ್ಕೀಡಾಯಿತು. 'ಸರ್ಕಾರ್' ಚಿತ್ರಕ್ಕೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಹಲವು ಚಿತ್ರಮಂದಿರಗಳಲ್ಲಿ ಗಲಾಟೆ ಮಾಡಿ, ಥಿಯೇಟರ್ ಧ್ವಂಸ ಮಾಡಿರುವ ಘಟನೆಗಳು ವರದಿಯಾಗಿತ್ತು.

ಕಮಲ್ ಹಾಸನ್ ಪುತ್ರಿ ಗರಂ
ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಕಿರಿಯ ಪುತ್ರಿ ಅಕ್ಷರ ಹಾಸನ್ ಒಳ ಉಡುಪಿನಲ್ಲಿದ್ದ ಫೋಟೋಗಳು ಲೀಕ್ ಆಯ್ತು. ಈ ಬಗ್ಗೆ ಮೌನ ಮುರಿದ ಅಕ್ಷರ ಹಾಸನ್, ''ಫೋಟೋಗಳನ್ನು ಲೀಕ್ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ'' ಅಂತ ಕಿಡಿಕಾರಿದ್ದರು.

ಝೀರೋ ವಿರುದ್ಧ ಕೇಸ್
ಕಿಂಗ್ ಖಾನ್ ಶಾರುಖ್ ಕುಬ್ಜನಾಗಿ ಕಾಣಿಸಿಕೊಂಡಿರುವ 'ಜೀರೋ' ಚಿತ್ರದ ಒಂದು ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿಯ ಶಾಸಕರೊಬ್ಬರು, ಚಿತ್ರತಂಡದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದಾರೆ.

ದೀಪಿಕಾ-ರಣ್ವೀರ್ ಮದುವೆ ವಿವಾದ
ಅಕಾಲ್ ತಖ್ತ್ ನಿಯಮಗಳನ್ನು ಉಲ್ಲಂಘಿಸಿ ದೀಪಿಕಾ ಮತ್ತು ರಣವೀರ್ ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿರುವುದು ಸಿಖ್ ಧಾರ್ಮಿಕ ನಾಯಕರ ಕೋಪಕ್ಕೆ ಕಾರಣವಾಯಿತು.


Click it and Unblock the Notifications











