ಬಾಲಿವುಡ್ ಚಿತ್ರದಿಂದ ಧೂದ್ ಪೇಡ ಔಟ್
ಕನ್ನಡ ಚಿತ್ರರಂಗದಲ್ಲಿ 'ಬರ್ಫಿ' ತಿನ್ನುತ್ತಿರುವ ಧೂದ್ ಪೇಡ ಅಲಿಯಾಸ್ ದಿಂಗತ್ ಗೆ ಅವರ ಬಾಲಿವುಡ್ ಎಂಟ್ರಿ ಯಾಕೋ ಕೈ ಕೊಟ್ಟಿದೆ. 'ದಿಗಂತ'ದಷ್ಟು ಆಸೆ ಇಟ್ಟು ಕೊಂಡು ಮುಂಬೈಗೆ ಹಾರಿದ್ದ ತೀರ್ಥಹಳ್ಳಿ ಹುಡುಗ ಈಗ ಕನ್ನಡ ನೆಲಕ್ಕೆ ಮರಳಿದ್ದಾನೆ.
ಕಳೆದ ಏಪ್ರಿಲ್ ನಲ್ಲೇ ಆರಂಭವಾಗಬೇಕಿದ್ದ ಬಾಲಿವುಡ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಬರ್ಫಿ ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ದಿಗಂತ್ ಹೇಳಿಕೊಂಡಿದ್ದು ಕೇಳಿದ ಮೇಲೆ ಅಯ್ಯೋ ಪಾಪ ಎನ್ನಲಡ್ಡಿಯಿಲ್ಲ.
1920 ಹೆಸರಿನ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಿತ್ತು. ಆಗಸ್ಟ್ ನಲ್ಲಿ ಶೂಟಿಂಗ್ ಶುರು ಎನ್ನಲಾಗಿತ್ತು. ವಿಕ್ರಮ್ ಭಟ್ ಅವರ ನಿರ್ಮಾಣದ ಈ ಚಿತ್ರ ಈ ಹಿಂದೆ ಹಿಟ್ ಆದ 1920 ಹೆಸರಿನ ಚಿತ್ರದ ಎರಡನೇ ಭಾಗವಾಗಿತ್ತು. ಆದರೆ, ಶೂಟಿಂಗ್ ನಿಂತಿದೆ. ಯಾವಾಗ ಮತ್ತೆ ಆರಂಭವೋ ಗೊತ್ತಿಲ್ಲ. ದಿಗಂತ್ ಅಂತೂ ಚಿತ್ರದಿಂದ ಹೊರ ಬಂದಿದ್ದಾರೆ.

ಈ ಮಧ್ಯೆ ದಿಗಂತ್ ಅವರು ದಿನಕರ್ ತೂಗುದೀಪ ಅವರ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರಲಿದೆಯಂತೆ. 1920 ಯಾಕೆ ವಿಳಂಬವಾಯಿತೋ ನನಗೆ ಗೊತ್ತಿಲ್ಲ. ನಾನು ತುಂಬಾ ತಿಂಗಳು ಕಾದೆ. ಆದರೆ, ದಿನಕರ್ ತೂಗುದೀಪ ಅವರ ಚಿತ್ರಕ್ಕೆ ಈಗಾಗಲೇ ಸಹಿ ಹಾಕಿದ್ದೇನೆ.ಹಾಗಾಗಿ ನಾನು ಮತ್ತೆ 1920 ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ದಿಗಂತ್ ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ ನಟಿ ಪ್ರಾಚಿ ದೇಸಾಯಿ ಕೂಡಾ 1920 ಚಿತ್ರದಿಂದ ಹೊರಬಿದ್ದಿದ್ದಾರೆ. ದಿಗಂತ್ ಹಾಗೂ ಪ್ರಾಚಿ ಜೋಡಿಯಾಗಿ ನಟಿಸಬೇಕಿದ್ದ 1920 ಚಿತ್ರಕ್ಕೆ ಈಗ ಹೊಸ ಮುಖಗಳನ್ನು ಹಾಕಿಕೊಳ್ಳಲಾಗಿದೆ ಎಂಬ ಸುದ್ದಿ ಬಂದಿದೆ. ಒಟ್ಟಾರೆ, ದಿಗಂತ್ ಬಾಲಿವುಡ್ ಎಂಟ್ರಿ ವಿಳಂಬವಾಗಿದೆ ಬಾಲಿವುಡ್ ಬಾಗಿಲು ಬಂದ್ ಆಗಿಲ್ಲ.


Click it and Unblock the Notifications











