Gujarat Files: 'ದಿ ಕಾಶ್ಮೀರ್ ಫೈಲ್ಸ್' ಬೆನ್ನಲ್ಲೇ 'ಗುಜರಾತ್ ಫೈಲ್ಸ್' ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕ
'ದಿ ಕಾಶ್ಮೀರ್ ಫುಲ್ಸ್' ಸಿನಿಮಾ ರಿಲೀಸ್ ಆದಾಗಿನಿಂದಲೂ ಚಿತ್ರದ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆ ಆಗುತ್ತಲೇ ಇದೆ. ಒಂದು ಕೋಮಿನ ಜನರನ್ನು ಪ್ರಮುಖರನ್ನಾಗಿಸಿ ಈ ಚಿತ್ರ ತೆರೆಗೆ ತರಲಾಗಿದೆ ಎಂಬ ವಾದ ಕೂಡ ಎದ್ದಿದೆ.
ಮತ್ತೊಂದು ಕಡೆ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಹಲವು ಕಡೆಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು, ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ರಾಜಕೀಯ ಮುಖಂಡರು ಹೇಳುತ್ತಿದ್ದಾರೆ.
ಇದರ ನಡುವೆ ಹಲವು ರಾಜಕೀಯ ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಇಂತಹ ಸಿನಿಮಾಗಳನ್ನು ಜನ ನೋಡಿ ಹಿಂದಿನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ. ಸ್ವತಃ ಪಿ.ಎಂ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಈ ಸಿನಿಮಾಗೆ ಸಿಕ್ತಿರೋ ರೆಸ್ಪಾನ್ಸ್ ಬೆನ್ನಲ್ಲೇ ಇದೀಗ ಮತ್ತೊಂದು ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ಮುಂದೆ ಬಂದಿದ್ದಾರೆ.

'ಗುಜಾರಾತ್ ಫೈಲ್ಸ್' ಸಿನಿಮಾವನ್ನು ಹೊರತರೋದಾಗಿ ಅನೌನ್ಸ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಬಂದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ರಾಜಕೀಯ ಗಣ್ಯರು ಈ ಸಿನಿಮಾವನ್ನು ಎಲ್ಲರೂ ನೋಡಲೇ ಬೇಕು ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ 'ಗುಜಾರಾತ್ ಫೈಲ್ಸ್' ಸಿನಿಮಾವನ್ನು ಹೊರತರೋದಾಗಿ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾ ತೆರೆಗೆ ತರುವ ಎಲ್ಲಾ ಸಿದ್ಧತೆಗಳನ್ನು ವಿನೋದ್ ಕಾಪ್ರಿ ಈಗಾಗಲೇ ಮಾಡಿಕೊಂಡಿದ್ದು, ಪ್ರಧಾನಿ ಮೋದಿಗೆ ವಿನೋದ್ ಕಾಪ್ರಿ ಸವಾಲು ಕೂಡ ಹಾಕಿದ್ದಾರೆ .
ಪ್ರಧಾನಿ ಮೋದಿಗೆ ನಿರ್ದೇಶಕನ ಪ್ರಶ್ನೆ
'ಗುಜರಾತ್ ಫೈಲ್ಸ್' ಸಿನಿಮಾ ಮಾಡುವುದಷ್ಟೇ ಅಲ್ಲ. ಪ್ರಧಾನಿ ಮೋದಿಯವರಿಗೆ ಕೆಲವು ಪ್ರಶ್ನೆಗಳನ್ನೂ ನಿರ್ದೇಶಕರು ಕೇಳಿದ್ದಾರೆ . 'ಗುಜರಾತ್ ಫೈಲ್ಸ್' ಸಂಬಂಧಿಸಿದಂತೆ ಎರಡು ಟ್ವೀಟ್ ಅನ್ನು ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ವಿನೋದ್ ಕಾಪ್ರಿ ತಮ್ಮ ಮೊದಲ ಟ್ವೀಟ್ನಲ್ಲಿ ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ್ದು, 'ಗುಜರಾತ್ ಫೈಲ್ಸ್ ಹೆಸರಿನಲ್ಲಿ, ಕಲೆ ಹಾಗೂ ಸತ್ಯಗಳ ಆಧಾರದ ಮೇಲೆ ಚಲನಚಿತ್ರ ಮಾಡಲು ನಾನು ಸಿದ್ಧನಿದ್ದೇನೆ. ಅದರಲ್ಲಿ ನಿಮ್ಮ ಪಾತ್ರವನ್ನು ಸಹ ವಿವರವಾಗಿ ತೋರಿಸಲಾಗುತ್ತಿದೆ.' ಎಂದಿದ್ದಾರೆ.
ವೈರಲ್ ಆಗುತ್ತಿದೆ ವಿನೋದ್ ಟ್ವೀಟ್ಗಳು
ಮತ್ತೊಂದು ಟ್ವೀಟ್ನಲ್ಲಿ ನರೇಂದ್ರ ಮೋದಿ ಜಿ ಚಿತ್ರದ ಬಿಡುಗಡೆಯನ್ನು ನಿಲ್ಲಿಸುವುದಿಲ್ಲ ಎಂದು ನೀವು ಇಂದು ದೇಶದ ಮುಂದೆ ನನಗೆ ಭರವಸೆ ನೀಡುತ್ತೀರಾ?' ಎಂದು ಕೇಳಿ ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ್ದಾರೆ. ಇಷ್ಟೇ ಅಲ್ಲ, "ನನ್ನ ಈ ಟ್ವೀಟ್ ನಂತರ, ನಾನು ಕೆಲವು ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಗುಜರಾತ್ ಫೈಲ್ಸ್ ನಿರ್ಮಿಸಲು ಸಿದ್ಧರಾಗಿದ್ದಾರೆ. ಈಗ ಪ್ರಧಾನಿಯವರು ಹೇಳುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭರವಸೆಯನ್ನು ಈ ಚಿತ್ರಕ್ಕೂ ನೀಡಬೇಕು ಎಂಬ ಭರವಸೆ ಮಾತ್ರ ಅವರಿಗೆ ಬೇಕಾಗಿದೆ." ಎಂದಿದ್ದಾರೆ. ವಿನೋದ್ ಕಾಪ್ರಿಯ ಈ ಎರಡೂ ಟ್ವೀಟ್ಗಳು ಹೆಚ್ಚು ವೈರಲ್ ಆಗುತ್ತಿವೆ.

ದಲಿತ್ ಫೈಲ್ಸ್, ಗುಜರಾತ್ ಫೈಲ್ಸ್ ಸಿನಿಮಾ ಮಾಡಬೇಕು
ಇಂತಹದ್ದೊಂದು ಚರ್ಚೆ ಬಹಳ ಹಿಂದಿನಿಂದಲೇ ನಡೆಯುತ್ತಿದೆ. ಅದರಲ್ಲೂ ' ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂದ ನಂತರ 'ದಲಿತ್ ಫೈಲ್ಸ್', 'ಗುಜರಾತ್ ಫೈಲ್ಸ್' ಸಿನಿಮಾಗಳನ್ನು ಮಾಡಬೇಕು. ಜನರಿಗೆ ಸತ್ಯ ದರ್ಶನ ಮಾಡಬೇಕು ಎಂಬ ಕೂಗುಗಳು ಅಲ್ಲಲ್ಲಿ ಕೇಳಿಬರುತ್ತಲೇ ಇತ್ತು. ಒಂದು ರೀತಿಯಲ್ಲಿ ಇಂತಹ ಸಿನಿಮಾಗಳು ಜನರಿಗೆ ಸತ್ಯ ದರ್ಶನದ ಜೊತೆಗೆ ರಾಜಕೀಯ ಪೀಕಲಾಟಕ್ಕೂ ಕಾರಣವಾಗುತ್ತಿರೋದು ಸತ್ಯ. ಅದು ಏನೇ ಇರಲಿ, ವಿನೋದ್ ಕಾಪ್ರಿ ಇದೀಗ 'ಗುಜರಾತ್ ಫೈಲ್ಸ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











