ಚಿತ್ರರಂಗಕ್ಕೆ ಮತ್ತೊಂದು ಆಘಾತ: 'ದೃಶ್ಯಂ' ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನ
ಭಾರತೀಯ ಸಿನಿಮಾರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದೃಶ್ಯಂ ಸಿನಿಮಾ ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ಇಂದು(ಆಗಸ್ಟ್ 17) ನಿಧನ ಹೊಂದಿದ್ದಾರೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ನಿಶಿತಾಂತ್ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜುಲೈ 31ರಂದು ನಿಶಿಕಾಂತ್ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Recommended Video
'ರಾಕಿ ಹ್ಯಾಂಡ್ಸಮ್' ಮತ್ತು 'ಮದಾರಿ' ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ನಿಶಿಕಾಂತ್ ಕಾಮತ್ ಇನ್ನೂ ನೆನಪು ಮಾತ್ರ. ಇಂದು ಬೆಳಗ್ಗೆಯಿಂದ ನಿಶಿಕಾಂತ್ ನಿಧನದ ಸುದ್ದಿ ವೈರಲ್ ಆಗಿತ್ತು. ಆದರೆ ನಟ ರಿತೇಶ್ ದೇಶಮುಖ್ ನಿಶಿಕಾಂತ್ ಟ್ವೀಟ್ ಮಾಡಿ "ಇನ್ನೂ ಜೀವಂತವಾಗಿದ್ದಾರೆ, ವೆಂಟಿಲೇಟರ್ ನಲ್ಲಿದ್ದಾರೆ, ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.
ಇದೀಗ ರಿತೇಶ್ ದೇಶಮುಖ್ ಅವರೇ ನಿಶಿಕಾಂತ್ ಇನ್ನಿಲ್ಲ ಎನ್ನುವ ಆಘಾತಕಾರಿ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಿತೇಶ್ ದೇಶಮುಖ್ "ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಗೆಳೆಯ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಹೇಳಿದ್ದಾರೆ.

ನಿಶಿಕಾಂತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದು ಟ್ವೀಟ್ ಮಾಡುತ್ತಿದ್ದಾರೆ. ನಿಶಿಕಾಂತ್ ಮರಾಠಿ ಸಿನಿಮಾ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. 2005ರಲ್ಲಿ ರಿಲೀಸ್ ಆದ 'ಡೊಂಬಿವಾಲಿ ಫಾಸ್ಟ್' ನಿಶಿಕಾಂತ್ ನಿರ್ದೇಶದ ಚೊಚ್ಚಲ ಸಿನಿಮಾ. ಈ ಸಿನಿಮಾ ಮರಾಠಿಯಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ.

2006ರಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ. ಇನ್ನೂ 2015ರಲ್ಲಿ ರಿಲೀಸ್ ಆದ ಅಜಯ್ ದೇವಗನ್ ಟಬು ಅಭಿನಯದ ಮಲಯಾಳಂನ ಸೂಪರ್ ಹಿಟ್ 'ದೃಶ್ಯಂ' ಸಿನಿಮಾದ ಹಿಂದಿ ರಿಮೇಕ್ ಮಾಡಿ ರಾಷ್ಟ್ರೀಯ ಗಮನ ಸೆಳೆದಿದ್ದರು.


Click it and Unblock the Notifications











