ಮೋಸ ಮಾಡಲಾಗಿದೆ: ಡ್ರಗ್ಸ್ ಪ್ರಕರಣದ ಆರೋಪಿ ನಟ ಸಿದ್ಧಾಂತ್ ಕಪೂರ್ ಆರೋಪ
ಬಾಲಿವುಡ್ ಜನಪ್ರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.
ಎಂಜಿ ರಸ್ತೆಯ ಹೋಟೆಲ್ ಒಂದರಲ್ಲಿ ನಡೆದ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದ ಅಲಸೂರು ಪೊಲೀಸರು 35 ಮಂದಿಯನ್ನು ವಶಕ್ಕೆ ಪಡೆದು ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳಿಸಿದ್ದರು, ಅದರಲ್ಲಿ ಆರು ಮಂದಿ ಡ್ರಗ್ಸ್ ಸೇವಿಸಿದ್ದಾಗಿ ವರದಿ ಬಂದಿತ್ತು. ಅವರಲ್ಲಿ ನಟ ಸಿದ್ದಾಂತ್ ಕಪೂರ್ ಸಹ ಒಬ್ಬರಾಗಿದ್ದರು.
ಒಂದು ದಿನವೆಲ್ಲಾ ಸಿದ್ಧಾಂತ್ ಅನ್ನು ಅಲಸೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿದ ಬಳಿಕ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡಲಾಗಿದೆ.

''ನನ್ನ ಮದ್ಯ ಹಾಗೂ ಸಿಗರೇಟಿನಲ್ಲಿ ಡ್ರಗ್ಸ್ ಸೇವಿಸಲಾಗಿದೆ. ನಾನು ಸ್ವಯಂಪ್ರೇರಿತವಾಗಿ ಯಾವುದೇ ಡ್ರಗ್ಸ್ ಸೇವಿಸಿಲ್ಲ. ನಾನು ಬೆಂಗಳೂರಿಗೆ ಆಗಾಗ್ಗೆ ಬರುತ್ತಿರುತ್ತೇನೆ. ಈಗ ರೇಡ್ ಮಾಡಲಾದ ಹೋಟೆಲ್ಗೆ ಸುಮಾರು ನಾಲ್ಕು ಬಾರಿ ಡಿಜೆ ಆಗಿ ನಾನು ಬಂದಿದ್ದೇನೆ. ನಾನು ಪ್ರಜ್ಞಾಪೂರ್ವಕವಾಗಿ ಡ್ರಗ್ಸ್ ಸೇವಿಸಿಲ್ಲ. ನನ್ನ ಸಿಗರೇಟು ಹಾಗೂ ಮದ್ಯಕ್ಕೆ ಡ್ರಗ್ಸ್ ಬೆರೆಸಲಾಗಿದೆ'' ಎಂದಿದ್ದಾರೆ ಸಿದ್ಧಾಂತ್.
ಈ ಬಗ್ಗೆ ಮಾತನಾಡಿರುವ ಪೂರ್ವ ವಲಯದ ಡಿಸಿಪಿ ಭೀಮಾಶಂಕರ್ ಗುಳೇದ್, ''ಹೋಟೆಲ್ಗೆ ಬಂದು ಹೋಗಿರುವ ಎಲ್ಲ ಅತಿಥಿಗಳ ಪಟ್ಟಿ ನಮಗೆ ದೊರೆತಿದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಿದ್ದೇವೆ'' ಎಂದಿದ್ದಾರೆ.
ಜಾಮೀನು ಪಡೆದ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟ ಸಿದ್ಧಾಂತ್ ಕಪೂರ್, ''ನಾನು ಹೋಟೆಲ್ನಲ್ಲಿದ್ದೆ. ನನ್ನನ್ನು ವಿಚಾರಣೆ ಮಾಡಲಾಯ್ತು. ನಾನು ವಿಚಾರಣೆಗೆ ಸಹಕರಿಸುತ್ತಿದ್ದೇನೆ. ಬೆಂಗಳೂರು ಪೊಲೀಸರು ನಿಜಕ್ಕೂ ಬಹಳ ಒಳ್ಳೆಯವರು. ಸಭ್ಯ ರೀತಿಯಲ್ಲಿ ಅವರು ವರ್ತಿಸಿದರು. ಅವರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಆ ಕೆಲವನ್ನು ಅವರು ಮುಂದುವರೆಸಬೇಕು'' ಎಂದಿದ್ದಾರೆ.
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಿದ್ಧಾಂತ್ ಕಪೂರ್ ವಕೀಲ ಪ್ರವೀಣ್ ಮುಗಳಿ, ''ಸಿದ್ಧಾಂತ್ ಮೇಲೆ ಹೊರಿಸಲಾಗಿರುವ ಆರೋಪಗಳು ಜಾಮೀನು ನೀಡಬಹುದಾದ ಆರೋಪಗಳು. ಅಲ್ಲದೆ ಅವರು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ'' ಎಂದಿದ್ದಾರೆ. ಸಿದ್ಧಾಂತ್ ಮೇಲೆ ಮಾದಕ ವಸ್ತು ನಿಯಂತ್ರಣ ಕಾಯ್ದೆಯ ಐಪಿಸಿ ಸೆಕ್ಷನ್ 22ಎ, 22ಬಿ, 27ಬಿ ಗಳನ್ನು ಹೊರಿಸಲಾಗಿದೆ.


Click it and Unblock the Notifications











