ಇಡಿ ವಿರುದ್ಧ ಜಾಕ್ವೆಲಿನ್ ಪಕ್ಷಪಾತದ ಆರೋಪ: ನಾನು ಆರೋಪಿ, ನೋರಾ ಸಾಕ್ಷಿ ಏಕೆಂದು ಪ್ರಶ್ನೆ?
'ವಿಕ್ರಾಂತ್ ರೋಣ' ಸಿನಿಮಾದ ರಕ್ಕಮ್ಮನಾಗಿ ಹಾಡಿ ಕುಣಿದಿರುವ ಜಾಕ್ವೆಲಿನ್ ಫರ್ನಾಂಡೀಸ್ ಈಗ ಇಡಿ (ಜಾರಿ ನಿರ್ದೇಶನಾಲಯ) ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಾಲಾಕಿ ವಂಚಕ, ಹಣ ವಸೂಲಿಕೋರ ಸುಕೇಶ್ ಚಂದ್ರಶೇಖರ್ ಸಖ್ಯ ಬೆಳೆಸಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಸುಕೇಶ್ನ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಸಂಸ್ಥೆಯು ಕಳೆದ ಕೆಲವು ತಿಂಗಳಿನಿಂದ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ ಈ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು ಜಾಕ್ವೆಲಿನ್ ಅನ್ನು ಆರೋಪಿಯನ್ನಾಗಿಸಿದೆ.
ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಕೇಶ್ ಚಂದ್ರಶೇಖರನ್ ಅತ್ಯಾಪ್ತವಾಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಜಾಕ್ವೆಲಿನ್ ಮಾತ್ರವೇ ಅಲ್ಲದೆ ಈ ಪ್ರಕರಣದಲ್ಲಿ ನೋರಾ ಫತೇಹಿಯನ್ನು ವಿಚಾರಣೆ ನಡೆಸಲಾಗಿತ್ತು. ಆದರೆ ನೋರಾ ಅನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಇಡಿ ಪರಿಗಣಿಸಿದೆ. ಇದು ಜಾಕ್ವೆಲಿನ್ಗೆ ಬೇಸರ ಮೂಡಿಸಿದೆ.

ಆರೋಪಿ ಮಾಡಿರುವುದಕ್ಕೆ ಜಾಕ್ವೆಲಿನ್ ತಕರಾರು
ತಮ್ಮನ್ನು ಆರೋಪಿ ಮಾಡಿರುವ ಬಗ್ಗೆ ತಕರಾರು ಸಲ್ಲಿಸಿ ಅರ್ಜಿ ಹಾಕಿರುವ ಜಾಕ್ವೆಲಿನ್ ಫರ್ನಾಂಡೀಸ್, ''ತನಿಖಾ ಸಂಸ್ಥೆ ಇಡಿಯು ನನ್ನ ವಿರುದ್ಧ ಪಕ್ಷಪಾತ ಎಸಗಿದೆ. ನಾನೂ ಹಾಗೂ ಮತ್ತೊಬ್ಬ ನಟಿ (ನೋರಾ ಫತೇಹಿ) ಪ್ರಕರಣದಲ್ಲಿ ಸಮಾನವಾಗಿ ಸಮಸ್ಯೆ ಎದುರಿಸಿದ್ದೇವೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಿರುವ ಇಡಿ, ನೋರಾ ಫತೇಹಿಯನ್ನು ಸಾಕ್ಷಿಯನ್ನಾಗಿಸಿದೆ'' ಎಂದಿದ್ದಾರೆ.

ಬಲವಂತದಿಂದ ನೀಡಿದ ಉಡುಗೊರೆಗಳು: ಜಾಕ್ವೆಲಿನ್
''ವಿಐಪಿಗಳ ಸಂಪರ್ಕ ಸಾಧಿಸಲೆಂದು ಆತ (ಸುಕೇಶ್) ಬಲವಂತದಿಂದ ನೀಡಿರುವ ಉಡುಗೊರೆಯನ್ನು ಇಟ್ಟುಕೊಂಡು ನಟಿಯನ್ನು (ಜಾಕ್ವೆಲಿನ್) ಆರೋಪಿ ಅನ್ನಾಗಿಸಿರುವುದು ಸೂಕ್ತವಲ್ಲ. ಈ ಪ್ರಕರಣದಿಂದಾಗಿ ಜಾಕ್ವೆಲಿನ್ ಫರ್ನಾಂಡೀಸ್ ಹಣಕ್ಕಿಂತಲೂ ಮೌಲ್ಯವಾದುದನ್ನು ಕಳೆದುಕೊಂಡಿದ್ದಾರೆ. ಸುಕೇಶ್ ಉಡುಗೊರೆಗಳನ್ನು ನೀಡಿ ಜಾಕ್ವೆಲಿನ್ ಅನ್ನೂ ವಂಚಿಸಿದ್ದಾನೆ. ಅಲ್ಲದೆ ನೋರಾ ಫತೇಹಿ ಸೇರಿದಂತೆ ಇತರೆ ಸೆಲೆಬ್ರಿಟಿಗಳನ್ನು ವಂಚಿಸಿದ್ದಾನೆ. ಆದರೆ ಅವರನ್ನೆಲ್ಲ ಸಾಕ್ಷಿಗಳನ್ನಾಗಿಸಿ, ಜಾಕ್ವೆಲಿನ್ ಅನ್ನು ಮಾತ್ರ ಆರೋಪಿ ಮಾಡಲಾಗಿರುವುದು ಸೂಕ್ತವಲ್ಲ'' ಎಂದು ಜಾಕ್ವೆಲಿನ್ ಪರ ವಕೀಲರು ಹೇಳಿದ್ದಾರೆ.

ಏಳು ಕೋಟಿ ಮೌಲ್ಯದ ಆಸ್ತಿ ವಶ
200 ಕೋಟಿ ಹಣ ವಸೂಲಿ ಮತ್ತು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಆರೋಪಿನ್ನಾಗಿಸಿದೆ ಇಡಿ. ಇದೇ ಪ್ರಕರಣದಲ್ಲಿ ನೋರಾ ಫತೇಹಿ ಸಾಕ್ಷಿಯಾಗಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಹಲವು ಖ್ಯಾತ ನಟಿಯರಿಗೆ ಸುಕೇಶ್ ಚಂದ್ರಶೇಖರ್ ದುಬಾರಿ ಉಡುಗೊರೆಗಳನ್ನು ನೀಡಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಜಾಕ್ವೆಲಿನ್ಗೆ ಸೇರಿದ ಏಳು ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಅದೆಲ್ಲವೂ ತಾನು ದುಡಿದ ಹಣ ಎಂದು ಜಾಕ್ವೆಲಿನ್ ಹೇಳಿದ್ದಾರೆ.

ಐಶಾರಾಮಿ ಬಂಗಲೆ, ದುಬಾರಿ ಕಾರುಗಳ ಒಡೆಯ
ಸುಕೇಶ್ ಚಂದ್ರಶೇಖರ್ ಅಪ್ರತಿಮ ವಂಚಕನಾಗಿದ್ದು, ರಾಷ್ಟ್ರಮಟ್ಟದ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ವಿಐಪಿ ಉದ್ಯಮಿಗಳು ಹಲವರನ್ನು ವಂಚಿಸಿದ್ದಾನೆ. ತಮಿಳುನಾಡಿನ ಖ್ಯಾತ ರಾಜಕಾರಣಿ ಟಿಟಿವಿ ದಿನಕರನ್ಗೆ ನೂರಾರು ಕೋಟಿ ಹಣ ವಂಚಿಸಿದ್ದ ಸುಕೇಶ್ 2017 ರಲ್ಲಿ ಬಂಧನಕ್ಕೆ ಒಳಗಾಗಿದ್ದ. ಹಾಗಿದ್ದರೂ ಜೈಲಿನಲ್ಲಿದ್ದುಕೊಂಡೆ ಉದ್ಯಮಿಗಳನ್ನು, ರಾಜಕಾರಣಿಗಳನ್ನೂ ವಂಚಿಸುವ ಕಾರ್ಯ ಮುಂದುವರೆಸಿದ್ದ. ಜೈಲಿನಲ್ಲಿದ್ದುಕೊಂಡೆ ರ್ಯಾನ್ಬ್ಯಾಕ್ಸಿ ಸಂಸ್ಥೆಯ ಮಾಜಿ ಮಾಲೀಕ ಶಿವೀಂದರ್ ಸಿಂಗ್ರ ಪತ್ನಿಯಿಂದ ಇನ್ನೂರು ಕೋಟಿ ವಸೂಲಿ ಮಾಡಿದ್ದದ. ಸುಕೇಶ್ ಚಂದ್ರಶೇಖರ್ನ ಅಕ್ರಮ ಹಣ ವಸೂಲಿ ಹಾಗೂ ವರ್ಗಾವಣೆ ತನಿಖೆ ನಡೆಸುತ್ತಿರುವ ಇಡಿ ಈಗಾಗಲೇ ಚೆನ್ನೈನಲ್ಲಿರುವ ಸುಕೇಶ್ನ ಭಾರಿ ಬಂಗಲೆಯನ್ನು ವಶಪಡಿಸಿಕೊಂಡಿದ್ದಾರೆ. ಹಲವು ಐಶಾರಾಮಿ ಕಾರುಗಳು, ಕೆಜಿಗಟ್ಟಲೆ ಚಿನ್ನವನ್ನು ಸುಕೇಶ್ ಹೊಂದಿದ್ದ ಎನ್ನಲಾಗಿದೆ.


Click it and Unblock the Notifications











