ಜಾಹ್ನವಿ ಕಪೂರ್ ಸಿನಿಮಾ ಚಿತ್ರೀಕರಣಕ್ಕೆ ರೈತರ ಗುಂಪಿನಿಂದ ತಡೆ
ಕೇಂದ್ರದ ಹೊಸ ರೈತ ನೀತಿಯನ್ನು ವಿರೋಧಿಸಿ ರೈತರು ಮಾಡುತ್ತಿರುವ ಪ್ರತಿಭಟನೆ ಸಾಗುತ್ತಲೇ ಇದೆ. ದಿನೇ-ದಿನೇ ರೈತರ ಹೋರಾಟ ಬಲಗೊಳ್ಳುತ್ತಲೇ ಇದೆ.
ರೈತ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವುದು ಪಂಜಾಬ್ ನ ರೈತರು. ಪಂಜಾಬ್ ರೈತರು v/s ಕೇಂದ್ರ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಗೆ ರೈತ ಪ್ರತಿಭಟನೆಯ ಬಿಸಿ ಜೋರಾಗಿಯೇ ತಾಕಿದೆ.
ಇದೀಗ ಬಾಲಿವುಡ್ ಸಿನಿಮಾ ಒಂದಕ್ಕೆ ಸಹ ರೈತ ಪ್ರತಿಭಟನೆಯ ಕಾವು ತಾಕಿದೆ. ಪಂಜಾಬ್ ನಲ್ಲಿ ಚಿತ್ರೀಕರಣ ಆಗುತ್ತಿದ್ದ 'ಗುಡ್ ಲಕ್ ಜೆರ್ರಿ' ಸಿನಿಮಾದ ಸೆಟ್ಗೆ ರೈತರ ಗುಂಪೊಂದು ಮುತ್ತಿಗೆ ಹಾಕಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ.

ಶ್ರೀದೇವಿ-ಬೋನಿ ಕಪೂರ್ ಮಗಳು ಜಾಹ್ನವಿ ಕಪೂರ್ ನಾಯಕಿಯಾಗಿರುವ ಈ ಸಿನಿಮಾದ ಚಿತ್ರೀಕರಣವು ಪಂಜಾಬ್ನ ಫತೇರ್ಘಡ್ ಸಾಹೇಬ್ ನಲ್ಲಿ ನಡೆಯುತ್ತಿತ್ತು. ಇಲ್ಲಿಗೆ ಭೇಟಿ ನೀಡಿದ್ದ ರೈತರ ಗುಂಪು ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ.
ರೈತರ ಪ್ರತಿಭಟನೆ ಬಗ್ಗೆ ಜಾಹ್ನವಿ ಕಪೂರ್ ಅಭಿಪ್ರಾಯ ಹೇಳಬೇಕು ಎಂದು ರೈತರ ಗುಂಪು ಒತ್ತಾಯಿಸಿದ್ದು, ಜಾಹ್ನವಿ ಕಪೂರ್ ಹೇಳಿಕೆ ನೀಡಿದ ನಂತರವೇ ಚಿತ್ರೀಕರಣ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಸಹ ನಡೆಸಿದೆ.
ಆದರೆ ಜಾಹ್ನವಿ ಕಪೂರ್ ಆ ಸಮಯದಲ್ಲಿ ಹೇಳಿಕೆ ನೀಡಿಲ್ಲ. ಆದರೆ ಜಾಹ್ನವಿ ತಮ್ಮ ರೈತ ಪರ ನಿಲುವನ್ನು ಪ್ರಕಟಿಸುವುದಾಗಿ ಚಿತ್ರತಂಡವೇ ರೈತರಿಗೆ ಭರವಸೆ ನೀಡಿದ ಬಳಿಕ ರೈತರು ವಾಪಸ್ ತೆರಳಿದ್ದಾರೆ.
ಆ ನಂತರ ಇನ್ಸ್ಟಾಗ್ರಾಂ ನಲ್ಲಿ ಜಾಹ್ನವಿ ಕಪೂರ್ ರೈತ ಪರವಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. 'ದೇಶದ ಹೃದಯ ಭಾಗದಲ್ಲಿ ರೈತರಿದ್ದಾರೆ. ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಬಗ್ಗೆ ನನಗೆ ಅಪಾರ ಗೌರವವಿದೆ. ರೈತರಿಗೆ ಅನುಕೂಲಕರವಾದ ನಿರ್ಣಯವನ್ನು ಶೀಘ್ರವೇ ತೆಗೆದುಕೊಳ್ಳಲಾಗುವುದು ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ ಜಾಹ್ನವಿ ಕಪೂರ್.


Click it and Unblock the Notifications











