ಡ್ರಗ್ಸ್ ಪ್ರಕರಣ: 'ರಕ್ತ ಚರಿತ್ರೆ' ನಿರ್ಮಾಪಕನಿಗೆ ಎನ್ಸಿಬಿ ಸಮನ್ಸ್
ಡ್ರಗ್ಸ್ ಪ್ರಕರಣ ಬಾಲಿವುಡ್ನ ಹಲವು ನಟ-ನಟಿಯರು ಹಾಗೂ ನಿರ್ದೇಶಕ, ನಿರ್ಮಾಪಕರಿಗೆ ಉರುಳಾಗುವ ಸಾಧ್ಯತೆ ಹೆಚ್ಚಿದೆ. ರಿಯಾ ಚಕ್ರವರ್ತಿ ಬಂಧನದ ಬಳಿಕ ಕೆಲವು ಸ್ಟಾರ್ ನಟಿಯರಿಗೆ ಎನ್ಸಿಬಿ ಅಧಿಕಾರಿಗಳು ಸಮನ್ಸ್ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಖ್ಯಾತ ನಿರ್ಮಾಪಕರಿಗೆ ಎನ್ಸಿಬಿಯಿಂದ ಬುಲಾವ್ ಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹಿಂದಿ ಹಾಗೂ ತೆಲುಗಿನಲ್ಲಿ ಗುರುತಿಸಿಕೊಂಡಿರುವ ಮಧು ಮಂತೇನಾ ಅವರಿಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಟ್ಯಾಲೆಂಟ್ ಮ್ಯಾನೇಜರ್ ಜಯ ಶಾ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಮಧು ಮಂತೇನಾ ಅವರ ಹೆಸರು ಚರ್ಚೆಯಾಗಿದೆ. ಹೀಗಾಗಿ, ಈ ಕುರಿತು ಸ್ಪಷ್ಟನೆ ಕೇಳಲು ನಾರ್ಕೋಟಿಕ್ಸ್ ಇಲಾಖೆ ಸೂಚಿಸಿದೆ.

ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ಗೆ ಸಮನ್ಸ್ ಜಾರಿ ಮಾಡಲಾಗಿದೆ. ಏಕಂದ್ರೆ, ಜಯ ಶಾ ಅವರ ಜೊತೆ ಕರೀಶ್ಮಾ ಪ್ರಕಾಶ್ ಸಂಪರ್ಕದಲ್ಲಿದ್ದರು ಹಾಗೂ ವಾಟ್ಸಾಪ್ ಚಾಟ್ನಲ್ಲಿ ಡ್ರಗ್ಸ್ ಕುರಿತು ಚರ್ಚೆಯಾಗಿದೆ ಎಂಬ ಎಂದು ಹೇಳಲಾಗಿದೆ. ಈ ಹಿನ್ನೆಲೆ ದೀಪಿಕಾಗೂ ಸಹ ಸಮನ್ಸ್ ಬಂದರೂ ಬರಬಹುದು.
ಇನ್ನು ಡ್ರಗ್ಸ್ ಜಾಲದಲ್ಲಿ ಖ್ಯಾತ ನಟಿಯರಾದ ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ತೆಲುಗಿನ ಖ್ಯಾತ ನಟಿಗೂ ಸಮನ್ಸ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಅಂದ್ಹಾಗೆ, ಮಧು ಮಂತೇನಾ ಅವರು ತೆಲುಗಿನಲ್ಲಿ 'ಕಾರ್ತಿಕ್' ಎಂಬ ಚಿತ್ರವನ್ನು ಚೊಚ್ಚಲ ಬಾರಿಗೆ ನಿರ್ಮಿಸಿದ್ದರು. ಅದಾದ ಬಳಿಕ ಹಿಂದಿಯಲ್ಲಿ ಗಜಿನಿ, ರಣ್, ಬೆಂಗಾಳಿಯಲ್ಲಿ ಆಟೋಗ್ರಾಫ್, ಹಾಗೂ ರಕ್ತಚರಿತ್ರೆ ಚಿತ್ರವನ್ನು ಸಹ ನಿರ್ಮಿಸಿದ್ದಾರೆ.


Click it and Unblock the Notifications











