ಖಲಿಸ್ಥಾನಿ ಉಗ್ರರೊಂದಿಗೆ ರೈತರ ಹೋಲಿಕೆ, ನಟಿ ಕಂಗನಾ ವಿರುದ್ಧ ಎಫ್ಐಆರ್
ನಟಿ ಕಂಗನಾ ರನೌತ್ರ ರೈತ ದ್ವೇಷ ಮುಂದುವರೆದಿದೆ. ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ಆರಂಭ ಮಾಡಿದಾಗಿನಿಂದಲೂ ಕಂಗನಾ ರೈತರ ವಿರುದ್ಧ ಕಿಡಿ ಕಾರುತ್ತಲೇ ಬರುತ್ತಿದ್ದಾರೆ.
ಇದೀಗ ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂತೆಗೆದಿದೆ. ಆದರೆ ಕಂಗನಾಗೆ ಇದು ತೀವ್ರ ನಿರಾಸೆ ಮೂಡಿಸಿದಂತೆ ತೋರುತ್ತಿದೆ.
ಈ ಹಿಂದೆ ರೈತ ಮಹಿಳೆಯನ್ನು ಹಣಕ್ಕಾಗಿ ಬಂದವಳು ಎಂದಿದ್ದ ಕಂಗನಾ, ರೈತರನ್ನು ಭಯೋತ್ಪಾದಕರು ಎಂದಿದ್ದ ಕಂಗನಾ ರನೌತ್ ಈಗ ರೈತರನ್ನು ಖಲಿಸ್ಥಾನಿ ಉಗ್ರರಿಗೆ ಹೋಲಿಸಿದ್ದಾಳೆ. ರೈತರನ್ನು ಮಾತ್ರವೇ ಅಲ್ಲದೆ ಸಿಖ್ ಸಮುದಾಯವನ್ನು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅಪಮಾನಿಸಿದ್ದಾರೆ ಈ ನಟಿ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ನಟಿ ಕಂಗನಾ, ''ಇಂದು ಖಲಿಸ್ಥಾನಿ ಉಗ್ರರು ಸರ್ಕಾರದ ಕೈ ತಿರುವಿದ್ದಾರೆ (ಬಲವಂತವಾಗಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ ಎಂಬರ್ಥದಲ್ಲಿ). ಆದರೆ ಒಂದನ್ನು ಮರೆಯದಿರೋಣ ಒಬ್ಬ ಮಹಿಳೆ, ಭಾರತದ ಏಕೈಕ ಮಹಿಳಾ ಪ್ರಧಾನಿ ಇದೇ ಖಲಿಸ್ಥಾನಿ ಉಗ್ರರನ್ನು ತನ್ನ ಶೂ ಕಾಲಿನಿಂದ ಹೊಸಕಿ ಹಾಕಿದ್ದಳು'' ಎಂದಿದ್ದಾರೆ ಕಂಗನಾ.
''ಆಕೆ ದೇಶಕ್ಕೆ ಸಾಕಷ್ಟು ತೊಂದರೆ ಕೊಟ್ಟಿರಬಹುದು ಆದರೆ ದೇಶವನ್ನು ಇಬ್ಭಾಗವಾಗಲು ಬಿಡಲಿಲ್ಲ. ಆಕೆಯ ಪ್ರಾಣವನ್ನೇ ಒತ್ತೆಯಿಟ್ಟು ಖಲಿಸ್ಥಾನಿ ಉಗ್ರರನ್ನು ಸೊಳ್ಳೆಗಳಂತೆ ಹೊಸಕಿಹಾಕಿದಳು'' ಎಂದಿದ್ದಾರೆ ಕಂಗನಾ.
ಕಂಗನಾರ ಈ ಪೋಸ್ಟ್ ವಿರುದ್ಧವಾಗಿ ದೂರುಗಳು ದಾಖಲಾಗಿವೆ. ಮುಂಬೈನಲ್ಲಿ ಅಮರ್ಜೀತ್ ಸಿಂಗ್ ಸಾಂಧು ಎಂಬುವರು ಕಂಗನಾ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಂಗನಾ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. ಇದರ ಹೊರತಾಗಿ ದೆಹಲಿಯ ಸಿಖ್ ಗುರುದ್ವಾರ ವ್ಯವಸ್ಥಾಪನಾ ಮಂಡಳಿ ಸಹ ಕಂಗನಾ ವಿರುದ್ಧ ದೂರು ನೀಡಿದೆ ಹಾಗೂ ಶಿರೋಮಣಿ ಅಖಾಲಿ ದಳ ಸಹ ಕಂಗನಾರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಇದರೊಟ್ಟಿಗೆ ಸಿರ್ಸಾ ಅವರ ನೇತೃತ್ವದಲ್ಲಿ ಸಮಿತಿಯೊಂದು ಮಹಾರಾಷ್ಟ್ರ ಗೃಹ ಸಚಿವರನ್ನು ಭೇಟಿ ಮಾಡಿ ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದೆ.
ಕಂಗನಾ ವಿರುದ್ಧ ಉದ್ದೇಶಪೂರ್ವಕವಾಗಿ ದ್ವೇಷ ಹರಡುವ ಯತ್ನ. ಸಮುದಾಯದ ನಿಂದನೆ, ಸಮುದಾಯದ ಹೀಗಳಿಕೆ, ಧರ್ಮ ನಿಂದನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ರೈತರ ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮಹಿಳೆಯೊಬ್ಬರ ಚಿತ್ರವನ್ನು ಕೆಲ ತಿಂಗಳ ಹಿಂದೆ ಟ್ವೀಟ್ ಮಾಡಿದ್ದ ಕಂಗನಾ ''ಈಕೆ 100 ರುಪಾಯಿಗೆ ಲಭ್ಯವಿದ್ದಾಳೆ'' ಎಂದಿದ್ದರು. ಕಂಗನಾರ ಈ ಟ್ವೀಟ್ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಅದು ಮಾತ್ರವೇ ಅಲ್ಲದೆ ರೈತರನ್ನು ಭಯೋತ್ಪಾದಕರು ಎಂದು ಸಹ ಕರೆದಿದ್ದರು, ಕಂಗನಾರ ಈ ಹೇಳಿಕೆಯ ವಿರುದ್ಧ ಕರ್ನಾಟಕದ ತುಮಕೂರು, ಬೆಳಗಾವಿ ಸೇರಿದಂತೆ ದೇಶದ ಹಲವೆಡೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಕಂಗನಾರ ದ್ವೇಷಭರಿತ ಟ್ವೀಟ್ಗಳ ಮೇಲೆ ಈಗಾಗಲೇ ಹಲವು ದೂರುಗಳು ದಾಖಲಾಗಿವೆ. ಕೊನೆಗೆ ಟ್ವಿಟ್ಟರ್ ಇಂಡಿಯಾವು ಕಂಗನಾರ ಟ್ವಿಟ್ಟರ್ ಖಾತೆಯನ್ನೇ ರದ್ದು ಮಾಡಿತು. ಇದೀಗ ಇನ್ಸ್ಟಾಗ್ರಾಂಗೆ ಬಂದಿರುವ ಕಂಗನಾ ಅಲ್ಲಿ ದ್ವೇಷ ಹರಡುವ ಕೆಲಸ ಚಾಲ್ತಿಯಲ್ಲಿಟ್ಟಿದ್ದಾರೆ.


Click it and Unblock the Notifications











