ಕನ್ನಡಿಗನಾಗಿ ಹುಟ್ಟಿ ಬಂಗಾಳಿಯಾಗಿ ಬೆಳೆದ ಗುರುದತ್
ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ.
ಗುರುದತ್ನ ಮೊದಲ ಹೆಸರು ವಸಂತ ಕುಮಾರ್ ಪಡುಕೋಣೆ. ಮುಂದೆ ಹೊಟ್ಟೆಪಾಡಿಗಾಗಿ ಮುಂಬೈ ಚಿತ್ರೋದ್ಯಮಕ್ಕೆ ಬಂದಾಗ, ತನ್ನ ಹೆಸರಿನೊಂದಿಗೆ ಇದ್ದ ತಂದೆಯ ಹೆಸರು ಹಾಗೂ ಪಡುಕೋಣೆ ಎಂಬ ಅಡ್ಡಹೆಸರನ್ನು ತೆಗೆದುಹಾಕಿ, ಗುರುದತ್ ಎಂದು ಗುರುತಿಸಿಕೊಂಡರು. ಕನ್ನಡ ಹಾಗೂ ಕನ್ನಡಿಗರೊಂದಿಗೆ ಆತನ ಸಂಬಂಧ ಶಾಶ್ವತವಾಗಿ ಕಡಿದುಹೋಯಿತು.

ಕೋಲ್ಕತಾದಲ್ಲಿ ದೂರವಾಣಿ ನಿರ್ವಾಹಕನಾಗಿ, ಪುಣೆಯ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ ನಂತರ, ಮುಂಬೈಗೆ ತೆರಳಿದ ಗುರುದತ್ ಕೊನೆಯವರೆಗೂ ಉಳಿದಿದ್ದು, ಬೆಳೆದಿದ್ದು ಅಲ್ಲಿಯೇ. 1945ರಲ್ಲಿ ನಟನಾಗಿ, ಸಹ ನಿರ್ದೇಶಕನಾಗಿ 'ಲಖ್ರಾನಿ' ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಗುರುದತ್, 'ಹಮ್ ಏಕ್ ಹೈ' ಚಿತ್ರದ ಮೂಲಕ ನೃತ್ಯ ನಿರ್ದೇಶನವನ್ನೂ ಮಾಡಿದರು. ಆದರೆ, ಅದೃಷ್ಟ ಒಲಿಯಲಿಲ್ಲ.
ಮುಂದಿನ ಕೆಲ ವರ್ಷಗಳನ್ನು ಅನಾಮಧೇಯನಂತೆ ಕಳೆದ ಗುರುದತ್ ಮತ್ತೆ ಖ್ಯಾತಿಗೆ ಬಂದಿದ್ದು 'ಬಾಝಿ' ಸಿನಿಮಾ ನಿರ್ದೇಶನದ ಮೂಲಕ. ಆ ಚಿತ್ರದಲ್ಲಿ ಬಳಸಿದ ಸಮೀಪ ದೃಶ್ಯಗಳ ಚಿತ್ರಣ ಕಲೆ 'ಗುರುದತ್ ಶಾಟ್' ಎಂದೇ ಜನಪ್ರಿಯವಾಯಿತು.
ನಂತರದ ಎರಡು ಚಿತ್ರಗಳು ವಿಫಲವಾದರೂ 'ಆರ್ ಪಾರ್' ಚಿತ್ರ ಯಶಸ್ವಿಯಾಯಿತು. ಮುಂದೆ ಬಂದಿದ್ದೆಲ್ಲ ಹಿಟ್ ಚಿತ್ರಗಳೇ. 1947ರಲ್ಲಿ ತೆರೆ ಕಂಡ 'ಪ್ಯಾಸಾ' ಹಿಂದಿ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಗುರುತಿಸಲ್ಪಟ್ಟಿತು. ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ, ಮನ್ನಣೆಯಿಲ್ಲದೇ ಸಾಯುವ ಕವಿಯೊಬ್ಬ, ಮರಣಾನಂತರ ಖ್ಯಾತನಾಗುವ ಕಥೆ ಹೊಂದಿದ್ದ 'ಪ್ಯಾಸಾ' ಒಂದರ್ಥದಲ್ಲಿ ಗುರುದತ್ನ ಆತ್ಮಚರಿತ್ರೆಯಂತೆ.


Click it and Unblock the Notifications











