'ಹಾಕಿ ದಂತಕಥೆ' ಧ್ಯಾನ್ ಚಂದ್ ಬಯೋಪಿಕ್ ಘೋಷಣೆ: ನಾಯಕ ಯಾರು?
ಬಾಲಿವುಡ್ನಲ್ಲಿ ಮತ್ತೊಂದು ಬಯೋಪಿಕ್ ಘೋಷಣೆಯಾಗಿದೆ. ಹಾಕಿ ದಂತಕಥೆ ಧ್ಯಾನ್ ಚಂದ್ ಅವರ ಜೀವನ ಕಥೆಯನ್ನು ತೆರೆಮೇಲೆ ತರಲು ಹಿಂದಿ ಚಿತ್ರರಂಗ ನಿರ್ಧರಿಸಿದೆ. ಈ ಚಿತ್ರವನ್ನು ರೋನಿ ಸ್ಕ್ರೂವಾಲಾ ನಿರ್ಮಾಣ ಮಾಡಲಿದ್ದು, ಅಭಿಷೇಕ್ ಚೌಬೆ ನಿರ್ದೇಶಿಸುತ್ತಿದ್ದಾರೆ.
ಸುಪ್ರತಿಕ್ ಸೇನ್ ಮತ್ತು ಅಭಿಷೇಕ್ ಈ ಬಯೋಪಿಕ್ಗೆ ಚಿತ್ರಕಥೆ ರಚಿಸಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಪ್ರೇಮ್ನಾಥ್ ರಾಜಗೋಪಾಲನ್ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ.
2021ರಲ್ಲಿ ಚಿತ್ರೀಕರಣ ಆರಂಭಿಸಲಿರುವ ಈ ಚಿತ್ರ 2022ರಲ್ಲಿ ತೆರೆಗೆ ಬರಲಿದೆ ಎಂದು ಅಧಿಕೃತ ಘೋಷಣೆಯಾಗಿದೆ. ಲೆಜೆಂಡ್ ಹಾಕಿ ಆಟಗಾರನ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನಿರ್ದೇಶಕ ಅಭಿಷೇಕ್ ''ಧ್ಯಾನ್ ಚಂದ್ ನಮ್ಮ ರಾಷ್ಟ್ರೀಯ ಕ್ರೀಡೆ ಇತಿಹಾಸದಲ್ಲಿ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರು. ಅವರ ಜೀವನಚರಿತ್ರೆ ನಿರ್ದೇಶಿಸುವುದು ಹೆಮ್ಮೆಯ ವಿಷಯ. ನಾವು ಬಹಳ ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಮಾಡಿದ್ದೇವೆ. ಅವರ ಜೀವನದ ಪ್ರತಿಯೊಂದು ಸಾಧನೆಯೂ ಒಂದು ಕಥೆ ಮಾಡಲು ಅರ್ಹವಾಗಿದೆ. ರೋನಿ ಸ್ಕ್ರೂವಾಲಾ ಅಂತಹ ಅದ್ಭುತ ಸೃಜನಶೀಲ ವ್ಯಕ್ತಿ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಚಿತ್ರವನ್ನು ಆರಂಭಿಸಲು ಕಾತುರದಿಂದ ಕಾಯುತ್ತಿದ್ದೇವೆ. ಶೀಘ್ರದಲ್ಲಿ ನಾಯಕನಟ ಯಾರೆಂದು ಘೋಷಿಸುವ ಭರವಸೆ ಇದೆ'' ಎಂದು ತಿಳಿಸಿದ್ದಾರೆ.
ರೋನಿ ಸ್ಕ್ರೂವಾಲಾ ಅವರು ರಂಗ್ ದೇ ಬಸಂತಿ, ಸ್ವೇಡ್ಸ್, ಎ ವೆಡ್ನೆಸ್ ಡೇ, ಉರಿ, ಸೋಂಚಿರಿಯಾ ಮತ್ತು ಬರ್ಫಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಧ್ಯಾನ್ ಚಂದ್ ಅವರ ಬಯೋಪಿಕ್ ತನ್ನ ವೃತ್ತಿ ಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಧ್ಯಾನ್ ಚಂದ್ ಕುರಿತು
1925 ರಿಂದ 1949ರ ಅವಧಿಯಲ್ಲಿ ಧ್ಯಾನ್ ಚಂದ್ ಭಾರತದ ರಾಷ್ಟ್ರೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 150 ಪಂದ್ಯಗಳಿಂದ 1500 ಗೋಲುಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 1928, 1932 ಮತ್ತು 1936 ರಲ್ಲಿ ಮೂರು ಒಲಿಂಪಿಕ್ ಚಿನ್ನದ ಪದಕ ಗೆಲುವುಗಳು ಸೇರಿವೆ.
ಧ್ಯಾನ್ ಚಂದ್ ಅವರಿಗೆ 1956 ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಆಗಸ್ಟ್ 29 ರಂದು ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತದೆ.


Click it and Unblock the Notifications











