ಪತ್ನಿಯನ್ನ ಕಳೆದುಕೊಂಡ ದುಃಖ ಪತ್ರ ಮುಖೇನ ಹೊರಹಾಕಿದ ಬೋನಿ ಕಪೂರ್
ಎಷ್ಟೇ ಆಗಲಿ, ನಟಿ ಶ್ರೀದೇವಿಯನ್ನ ನಿರ್ಮಾಪಕ ಬೋನಿ ಕಪೂರ್ ಪ್ರೀತಿಸಿ ಮದುವೆ ಆದವರು. ಅದಾಗಲೇ ಮದುವೆ ಆಗಿದ್ದರೂ, ಶ್ರೀದೇವಿಯನ್ನ ಕೈಹಿಡಿದ ಬೋನಿ ಕಪೂರ್ ಗೆ ಆಕೆಯೇ ಪ್ರಪಂಚ.
ಇಂದು ಶ್ರೀದೇವಿ ಜೀವಂತವಾಗಿಲ್ಲ. ಬೋನಿ ಕಪೂರ್ ಜೊತೆ ಪ್ರೀತಿಯ ಮಡದಿ ಇನ್ನಿಲ್ಲ. ಪತ್ನಿಯನ್ನ ಕಳೆದುಕೊಂದ ದುಃಖವನ್ನ ಬೋನಿ ಕಪೂರ್ ಪತ್ರ ಮುಖೇನ ಹೊರಹಾಕಿದ್ದಾರೆ.

''ಓರ್ವ ಸ್ನೇಹಿತೆ, ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳ ತಾಯಿಯನ್ನು ಕಳೆದುಕೊಂಡ ದುಃಖ ಅಕ್ಷರಗಳಲ್ಲಿ ವ್ಯಕ್ತಪಡಿಸಲು ಅಸಾಧ್ಯ.
ನನ್ನ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಹಾಗೂ ಶ್ರೀದೇವಿಯ ಅಸಂಖ್ಯಾತ ಅಭಿಮಾನಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಜಾಹ್ನವಿ, ಖುಷಿ ಹಾಗೂ ನನಗೆ ಮಾನಸಿಕ ಸ್ಥೈರ್ಯ ತುಂಬಿದ ಅರ್ಜುನ್ ಹಾಗೂ ಅನ್ಷುಲಾ ರನ್ನ ಪಡೆದ ನಾನೇ ಧನ್ಯ. ನಮ್ಮ ಇಡೀ ಕುಟುಂಬಕ್ಕೆ ಶ್ರೀದೇವಿ ನಿಧನ ತುಂಬಲಾರದ ನಷ್ಟ.
ಇಡೀ ಜಗತ್ತಿಗೆ ಶ್ರೀದೇವಿ ಜಾಂದಿನಿ. ಆದ್ರೆ, ಆಕೆ ನನ್ನ ಪ್ರೀತಿ, ನನ್ನ ಸ್ನೇಹಿತೆ, ನನ್ನ ಮಕ್ಕಳಿಗೆ ತಾಯಿ ಹಾಗೂ ನನ್ನ ಜೊತೆಗಾತಿ. ನನ್ನ ಮಕ್ಕಳಿಗೆ ಆಕೆಯೇ ಎಲ್ಲ.
ಜಾಹ್ನವಿ ಹಾಗೂ ಖುಷಿ ತಾಯಿ, ನನ್ನ ಪತ್ನಿಗೆ ವಿದಾಯ ಹೇಳುತ್ತ ಅಭಿಮಾನಿಗಳ ಬಳಿ ನನ್ನದೊಂದು ಮನವಿ. ನಮ್ಮ ನೋವನ್ನು ಖಾಸಗಿಯಾಗಿ ಇರಲು ಬಿಡಿ. ನೀವು ಶ್ರೀದೇವಿ ಬಗ್ಗೆ ಮಾತನಾಡಬೇಕು ಅಂದ್ರೆ, ಒಳ್ಳೆ ವಿಷಯ ಮಾತನಾಡಿ.
ಶ್ರೀದೇವಿ ಇಲ್ಲದ ನನ್ನ ಮಕ್ಕಳಿಗೆ ಒಂದು ದಾರಿ ಮಾಡುವುದೇ ನನ್ನ ಸದ್ಯದ ಕಾಳಜಿ. ಶ್ರೀದೇವಿ ನಮಗೆ ಜೀವ ಹಾಗೂ ಶಕ್ತಿ. ನಮ್ಮ ನಗುವಿಗೆ ಆಕೆಯೇ ಕಾರಣವಾಗಿದ್ದಳು. ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ತಮ್ಮ ಅಂತರಂಗವನ್ನ ಪತ್ರದ ಮುಖೇನ ಬೋನಿ ಕಪೂರ್ ಬಿಚ್ಚಿಟ್ಟಿದ್ದಾರೆ.


Click it and Unblock the Notifications











