'ಕಾಂತಾರ' ನೋಡಿ ಕಣ್ಣಲ್ಲಿ ನೀರು ಬಂತು ಏಕೆಂದರೆ ನಾನು ಅಲ್ಲಿಯವನು: ಸುನೀಲ್ ಶೆಟ್ಟಿ
ಕಾಂತಾರ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿವೆ. ಚಿತ್ರ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗಿದೆ ಎಂದರೆ ಐವತ್ತು ದಿನಗಳನ್ನು ಪೂರೈಸಿದರೂ ಸಹ ಇಂದಿಗೂ ಹಲವು ನಗರಗಲ್ಲಿ ಚಿತ್ರ ಹೌಸ್ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಈಗಾಗಲೇ ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿ 400 ಕೋಟಿ ಕ್ಲಬ್ ಸನಿಹದಲ್ಲಿರುವ ಕಾಂತಾರ ಚಿತ್ರ ಎಲ್ಲರ ಅಚ್ಚುಮೆಚ್ಚಿನ ಚಿತ್ರ.
ಇನ್ನು ಸಿನಿ ರಸಿಕರು ಮಾತ್ರವಲ್ಲದೇ ಸ್ಟಾರ್ಗಳೂ ಸಹ ಕಾಂತಾರ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಅದರಲ್ಲಿಯೂ ಚಿತ್ರವನ್ನು ತೆಲುಗು ನಟ ಪ್ರಭಾಸ್ ಕನ್ನಡದಲ್ಲಿ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ನೋಡಿದ್ದು ಹೈಲೈಟ್ ಆಗಿತ್ತು, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಸ್ವತಃ ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಚಿತ್ರದ ಬಗ್ಗೆ ಹೊಗಳಿ ರಿಷಬ್ ಕೊರಳಿಗೆ ಚಿನ್ನದ ಸರವನ್ನೂ ಸಹ ಹಾಕಿದ್ದರು. ಅತ್ತ ಚಿತ್ರಗಳನ್ನು ಸುಲಭವಾಗಿ ಮೆಚ್ಚಿಕೊಳ್ಳದ ಹಿಂದಿಯ ನಟಿ ಕಂಗನಾ ರನೌತ್ ಸಹ ಕಾಂತಾರ ಚಿತ್ರವನ್ನು ಮೆಚ್ಚಿದ್ದರು ಹಾಗೂ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಕಾಂತಾರ ವೀಕ್ಷಿಸಿ ವಿಡಿಯೊ ಮೂಲಕ ಕೊಂಡಾಡಿದ್ದರು.
ಇದೀಗ ಈ ಸಾಲಿಗೆ ಬಾಲಿವುಡ್ನ ಮತ್ತೋರ್ವ ಸೆಲೆಬ್ರಿಟಿ ಸುನೀಲ್ ಶೆಟ್ಟಿ ಕೂಡ ಸೇರಿಕೊಂಡಿದ್ದು ಕಾಂತಾರ ಚಿತ್ರದ ಬಗ್ಗೆ ತಮ್ಮ ಮುಂದಿನ ವೆಬ್ ಸರಣಿ 'ಧಾರಾವಿ ಬ್ಯಾಂಕ್' ಕುರಿತಾಗಿ ಡಿಎನ್ಎ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈಗಲೂ ಜನರಿಂದ ತುಂಬಿದೆ ಕಾಂತಾರ ಪ್ರದರ್ಶನ
ಧಾರಾವಿ ಬ್ಯಾಂಕ್ ವೆಬ್ ಸರಣಿ ಕುರಿತ ಸಂದರ್ಶನದಲ್ಲಿ ವಿವೇಕ್ ಒಬಿರಾಯ್ ಹಾಗೂ ಸುನೀಲ್ ಶೆಟ್ಟಿ ಭಾಗವಹಿಸಿದ್ದರು. ಇದೇ ವೇಳೆ ಕಾಂತಾರ ಚಿತ್ರದ ಬಗ್ಗೆ ಕೂಡ ವಿಷಯ ಬಂತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸುನೀಲ್ ಶೆಟ್ಟಿ "ಕಳೆದ ರಾತ್ರಿಯಷ್ಟೇ ನಾನು ಕುಟುಂಬ ಸಮೇತ ಕಾಂತಾರ ಚಿತ್ರ ನೋಡಿದೆ. ಅ ಪ್ರದರ್ಶನ ಶೇಕಡಾ 60ಕ್ಕೂ ಹೆಚ್ಚು ಪ್ರೇಕ್ಷಕರಿಂದ ತುಂಬಿತ್ತು. ಅದೂ ಸಹ ಪಿವಿಆರ್ ಚಿತ್ರಮಂದಿರದಲ್ಲಿ" ಎಂದು ಹೇಳಿದರು. ಈ ಸಾಲುಗಳನ್ನು ಗಂಭೀರವಾಗಿ ಹೇಳಿದ ಸುನೀಲ್ ಶೆಟ್ಟಿ ಪಿವಿಆರ್ ರೀತಿಯ ಮಲ್ಟಿಪ್ಲೆಕ್ಸ್ನಲ್ಲಿ ಇನ್ನೂ ಸಹ ಕಾಂತಾರ ವೀಕ್ಷಿಸಲು ಜನ ಹರಿದು ಬರುತ್ತಿದ್ದಾರೆ ಎಂಬುದನ್ನು ಬಿಚ್ಚಿಟ್ಟರು.

ಕಣ್ಣೀರು ಬಂತು, ಏಕೆಂದರೆ ನಾನು ಅಲ್ಲಿಯವನು
ಇನ್ನೂ ಮುಂದುವರಿದು ಮಾತನಾಡಿದ ಸುನೀಲ್ ಶೆಟ್ಟಿ "ಕೊನೆಯ 20ರಿಂದ 25 ನಿಮಿಷ ರೋಮಾಂಚನವಾಯಿತು ಹಾಗೂ ಕಣ್ಣಲ್ಲಿ ನೀರು ಬಂತು ಏಕೆಂದರೆ ನಾನು ಆ ಜಾಗದಿಂದ ಬಂದವನು. ನಾನು ಪ್ರತೀ ವರ್ಷ ಇದೇ ರೀತಿಯ ಕೋಲ ಹಾಗೂ ದೈವದ ಪೂಜೆಗೆ ತಪ್ಪದೇ ಹೋಗುತ್ತೇನೆ" ಎಂದರು. ಅಷ್ಟೇ ಅಲ್ಲದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ರಿಷಬ್ ಶೆಟ್ಟಿಯನ್ನು ಕೊಂಡಾಡಿದರು.

ಕಂಟೆಂಟ್ ಈಸ್ ದಿ ಕಿಂಗ್
ಇನ್ನು ಕಾಂತಾರ ಸಕ್ಸಸ್ಗೆ ಕಾರಣವಾದದ್ದು ಜನರ ಮಾತುಗಳ ಮೂಲಕ ಬಂದ ಪ್ರಚಾರದಿಂದ, ಚಿತ್ರದ ಬಗ್ಗೆ ಒಬ್ಬರಿಂದ ಒಬ್ಬರಿಗೆ ಹೆಚ್ಚಾಗಿ ಚರ್ಚೆ ನಡೆಯಿತು ಹಾಗೂ ಈ ಕಾರಣದಿಂದ ಚಿತ್ರ ದೊಡ್ಡ ಮಟ್ಟಕ್ಕೆ ತಲುಪಿತು, ಕಂಟೆಂಟ್ ಇದ್ದರೆ ಮಾತ್ರ ಈ ರೀತಿ ಆಗಲು ಸಾಧ್ಯ, ಕಂಟೆಂಟ್ ಈಸ್ ದಿ ಕಿಂಗ್ ಎಂದು ಸುನೀಲ್ ಶೆಟ್ಟಿ ತಿಳಿಸಿದರು. ಇನ್ನು ಜತೆಯಲ್ಲಿದ್ದ ವಿವೇಕ್ ಒಬಿರಾಯ್ ಸಹ ಗೂಸ್ಬಂಪ್ಸ್, ಸಖತ್ ವಿಷುಯಲ್ಸ್ ಎಂದು ಕಾಂತಾರ ಚಿತ್ರವನ್ನು ಹೊಗಳಿದರು.


Click it and Unblock the Notifications











