Don't Miss!
- News ಯುದ್ಧ ನಿಲ್ಲಿಸಲು ಯಾರೂ ರೆಡಿ ಇಲ್ಲ: ಹಾಗಾದರೆ ಜನರ ಪರಿಸ್ಥಿತಿ?
- Sports CSK vs GT: ಚೆಪಾಕ್ನಲ್ಲಿ ನಡೆಯದ 'ಶುಭ' ಆಟ; ಸಿಎಸ್ಕೆ ವಿರುದ್ಧ ಮಕಾಡೆ ಮಲಗಿದ ಗುಜರಾತ್ ಟೈಟನ್ಸ್
- Lifestyle ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ವ್ಯಾಯಾಮ ಮಾಡಬಹುದೇ? ಇದರಿಂದ ಗರ್ಭಧಾರಣೆಗೆ ತೊಂದರೆಯಾಗುವುದೇ?
- Automobiles ಆಕರ್ಷಕ ಬೆಲೆ: ಭಾರೀ ಬೇಡಿಕೆಯ ಕಿಯಾ ಸೆಲ್ಟೋಸ್ ಎಸ್ಯುವಿಯ ಹೊಸ ರೂಪಾಂತರಗಳು ಬಿಡುಗಡೆ
- Technology Lenovo: ಭಾರತದಲ್ಲಿ ಲೆನೊವೊ ಟ್ಯಾಬ್ M11 ಲಾಂಚ್! 8GB RAM ... ಬೆಲೆ ಎಷ್ಟು?
- Finance ಇಪಿಎಫ್ಒ ವಿಚಾರದಲ್ಲಿ ಎಲ್ಲ ನೌಕರರಿಗೆ ಶುಭ ಸುದ್ದಿ, ಇಲ್ಲಿದೆ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಸಿನಿಮಾ ನೀತಿ ಘೋಷಿಸಿದ ಜಮ್ಮು ಕಾಶ್ಮೀರ
ಭೂಲೋಕದ ಸ್ವರ್ಗ ಎಂದೇ ಕರೆಯಲಾಗುವ ಜಮ್ಮು ಕಾಶ್ಮೀರ ಸಿನಿಕರ್ಮಿಗಳ ಮೆಚ್ಚಿನ ತಾಣ ಆದರೆ ಬೇರೆ-ಬೇರೆ ಕಾರಣಗಳಿಂದ ಅಲ್ಲಿ ಚಿತ್ರೀಕರಣ ನಡೆಯುತ್ತಿರಲಿಲ್ಲ. ಆದರೆ ಇದೀಗ ಜಮ್ಮು ಕಾಶ್ಮೀರವು ಹೊಸ ಸಿನಿಮಾ ನೀತಿ ಜಾರಿಗೆ ತಂದಿದ್ದು ಸುಂದರ ಕಣಿವೆ ರಾಜ್ಯದಲ್ಲಿ ಇನ್ನು ಮುಂಚೆ ಚಿತ್ರೀಕರಣಗಳು ಅವ್ಯಾಹತವಾಗಿ ನಡೆಯುವ ನಿರೀಕ್ಷೆ ಇದೆ.
ಇಂದು ಜಮ್ಮು ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಜಮ್ಮು ಕಾಶ್ಮೀರದ ಸಿನಿಮಾ ನೀತಿಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಸಹ ಇದ್ದರು.
ಜಮ್ಮು ಕಾಶ್ಮೀರದ ಹೊಸ ಸಿನಿಮಾ ನೀತಿ ಘೋಷಿಸುವ ಹಿಂದೆ ಅಮೀರ್ ಖಾನ್ ಪಾತ್ರವೂ ಇದೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಅಮೀರ್ ಖಾನ್ ಈ ಬಗ್ಗೆ ಕೆಲವು ಅಧಿಕಾರಿಗಳನ್ನು ಮತ್ತು ಸ್ವತಃ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು.
ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಕನಿಷ್ಟ 1500 ಮಂದಿ ತರಬೇತಿ ಪಡೆದ ನಟ-ನಟಿಯರು ಜಮ್ಮು ಕಾಶ್ಮೀರದಲ್ಲಿದ್ದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗುವ ಭರವಸೆ ಇದೆ. ಜೊತೆಗೆ ಸ್ಥಳೀಯರಿಗೆ ಸಿನಿಮಾ ರಂಗದಲ್ಲಿ ವಿಫುಲ ಅವಕಾಶ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ಸಿನಿಮಾ ನೀತಿ ನೆರವಾಗಲಿದೆ ಎಂದು ರಾಜ್ಯಪಾಲ ಮನೋಜ್ ಸಿನ್ಹಾ ಹೇಳಿದ್ದಾರೆ.
ಚಿತ್ರೀಕರಣದ ಅನುಮತಿ ಇನ್ನು ಮುಂದೆ ಸರಳ
ಹೊಸ ಸಿನಿಮಾ ನೀತಿಯಿಂದಾಗಿ ಇನ್ನು ಮುಂದೆ ಜಮ್ಮು ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ಇನ್ನಷ್ಟು ಸರಳವಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಪಡೆಯುವ ವ್ಯವಸ್ಥೆಯನ್ನು ಅತ್ಯಂತ ಸರಳಗೊಳಿಸಲಾಗಿದೆ. ಚಿತ್ರೀಕರಣಕ್ಕೆ ಅನುಮತಿ ನೀಡುವ ಜೊತೆಗೆ ಕೆಲವು ಸೌಕರ್ಯಗಳನ್ನು ಸಹ ಸರ್ಕಾರ ಒದಗಿಸಲಿದೆ.
ಚಿತ್ರೀಕರಣಕ್ಕೆ ಅಗತ್ಯ ಮೂಲಭೂತ ಸೌಕರ್ಯದ ಭರವಸೆ
ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ರಾಜ್ಯಪಾಲ ಮನೋಜ್ ಸಿನ್ಹಾ ಹೇಳಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರಕ್ಕೆ ಬರುವ ಸಿನಿಮಾ ಕರ್ಮಿಗಳಿಗೆ ವಿಶೇಷ ಭತ್ಯೆಯನ್ನು ಸಹ ಘೋಷಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಸ್ಥಳೀಯವಾಗಿ ಸಿನಿಮಾ ನಿರ್ಮಾಣವನ್ನು ಸಹ ಹೊಸ ನೀತಿಯು ಬೆಂಬಲಿಸಿದೆ.
ಚಿತ್ರಮಂದಿರಗಳ ಅಭಿವೃದ್ಧಿ, ಮಲ್ಟಿಫ್ಲೆಕ್ಸ್ ಕಟ್ಟಲು ಸಹಾಯ
ಸದ್ಯಕ್ಕೆ ಮುಚ್ಚಿರುವ ಚಿತ್ರಮಂದಿರಗಳನ್ನು ತೆರೆಯಲು, ಹಾಳಾಗಿರುವ ಚಿತ್ರಮಂದಿರಗಳನ್ನು ಅಭಿವೃದ್ಧಿಪಡಿಸುವ, ಮಲ್ಟಿಫ್ಲೆಕ್ಸ್ಗಳು ಕಣಿವೆ ರಾಜ್ಯದಲ್ಲಿ ಕಾರ್ಯಾರಂಭ ಮಾಡಲು ಸೂಕ್ತ ಅವಕಾಶವನ್ನು ಮಾಡಿಕೊಡುವುದಾಗಿ ಹೊಸ ಸಿನಿಮಾ ನೀತಿಯನ್ನು ಹೇಳಲಾಗಿದೆ. ಇಡೀ ಜಮ್ಮು ಕಾಶ್ಮೀರದಲ್ಲಿ ಕೇವಲ ಒಂದು ಪಿವಿಆರ್ ಅಷ್ಟೆ ಇದೆ. ಶ್ರೀನಗರದಲ್ಲಿ 10 ಚಿತ್ರಮಂದಿರಗಳು ಇವೆಯಾದರೂ ಎಲ್ಲವೂ ಬಂದ್ ಆಗಿವೆ ಕೆಲವನ್ನು ಆಸ್ಪತ್ರೆಗಳಾಗಿ ಬದಲಾಯಿಸಲಾಗಿದೆ.
ಸಿನಿಮಾ ಬೋರ್ಡ್ ಸ್ಥಾಪನೆ
ಜಮ್ಮು ಕಾಶ್ಮೀರದಲ್ಲಿ ಸಿನಿಮೋತ್ಸವಗಳನ್ನು ಆಚರಣೆ ಮಾಡಲು, ಸಿನಿಮಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರು ನಿರ್ಮಾಣ ಮಾಡಿದ ಸಿನಿಮಾಗಳನ್ನು ಸಂಗ್ರಹಿಸುವ ಹಾಗೂ ಜಮ್ಮು ಕಾಶ್ಮೀರಕ್ಕಾಗಿ ಸಿನಿಮಾ ಬೋರ್ಡ್ ಒಂದನ್ನು ಸ್ಥಾಪಿಸುವ ಗುರಿಯನ್ನು ಸಹ ಹೊಸ ಸಿನಿಮಾ ನೀತಿ ಹೊಂದಿದೆ.
ಸಾಕಷ್ಟು ಸಿನಿಮಾಗಳ ಚಿತ್ರೀಕರಣ ನಡೆಯಲಿದೆ
ಜಮ್ಮು ಕಾಶ್ಮೀರದ ಹೊಸ ಸಿನಿಮಾ ನೀತಿಯಿಂದಾಗಿ ಇನ್ನು ಮುಂದೆ ಸಾಕಷ್ಟು ಸಿನಿಮಾಗಳು ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಅಮೀರ್ ಖಾನ್ ಶ್ರೀನಗರದ ಸಮೀಪ ತಮ್ಮ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ನಿರ್ದೇಶಕ ರಾಜ್ಕುಮಾರ್ ಹಿರಾನಿ ಪುತ್ರ ವೀರೆನ್ ಹಿರಾನಿ ನಿರ್ದೇಶಿಸುತ್ತಿರುವ ವೆಬ್ ಸರಣಿಯನ್ನು ಸಹ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಇದರಿಂದ ಜಮ್ಮು ಕಾಶ್ಮೀರದ ಪ್ರವಾಸೊದ್ಯಮ ಅಭಿವೃದ್ಧಿ ಹೊಂದಲಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ
ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರ್ಕಾರವು ವಿಭಜಿಸಿತು. ವಿಶೇಷ ಸ್ಥಾನಮಾನ (ಆರ್ಟಿಕಲ್ 370)ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ಒಂದು ಕೇಂದ್ರಾಡಳಿತ ಪ್ರದೇಶವನ್ನಾಗಿ ಹಾಗೂ ಲಡಾಕ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಆಗಸ್ಟ್ 05, 2019ರಂದು ಮಾಡಲಾಯಿತು. ಆಗಿನಿಂದಲೂ ಜಮ್ಮು ಕಾಶ್ಮೀರದ ಆಡಳಿತವು ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಕೈಯಲ್ಲಿದೆ.