ಜಿಯಾ ಖಾನ್ ಬರೆದ ಈ ಪತ್ರ ನಕಲಿಯೇ?
ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್ ಪಂಚೋಲಿಗೆ ನಾನು ಯಾವುದೇ ಬುದ್ಧಿವಾದ ಹೇಳಿಲ್ಲ. ಅವರಿಬ್ಬರ ಲವ್ ಗೆ ನಾನು 'ಲವ್ ಗುರು' ಆಗಿರಲಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ ಬೆನ್ನಲ್ಲೇ ಜಿಯಾಖಾನ್ ಅವರ ಆತ್ಮಹತ್ಯೆ ಪತ್ರಗಳು ನಿಜವಲ್ಲ ನಕಲಿ ಎಂಬ ಸುದ್ದಿಯೂ ಹಬ್ಬಿದೆ.
ಜಿಯಾಖಾನ್ ಆತ್ಮಹತ್ಯೆ ಪತ್ರ ಸೂರಜ್ ಹಾಗೂ ಜಿಯಾ ಖಾನ್ ನಡುವಿನ ಸಂಬಂಧವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಅದರೆ, ಈಗ ಹೊಸದಾಗಿ ಸಿಕ್ಕಿರುವ ಪತ್ರ ಸೂರಜ್ ಪರವಾಗಿದ್ದು, ಜಿಯಾ ಈ ಪತ್ರದಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಾನು ತುಂಬಾ ನೊಂದಿದ್ದೇನೆ ನಿಜ, ಆದರೆ, ನನ್ನ ನೋವಿಗೆ ನೀನು ಕಾರಣ ಎಂದು ದೂಷಿಸಲಾರೆ, ಸ್ಸಾರಿ, ನಾನು ನನ್ನ ಕುಟುಂಬ ಎಂದಿಗೂ ನಿನ್ನ ಮೇಲೆ ದೋಷಾರೋಪಣೆ ಹೊರೆಸುವುದಿಲ್ಲ. ನಿನ್ನ ಜೊತೆ ಕೂಡಿ ಕಳೆದ ಕ್ಷಣ ನನ್ನ ಜೀವನದ ಅತ್ಯಂತ ಸುಖಿ ಕ್ಷಣಗಳಾಗಿದೆ. ನನಗೆ ಪ್ರೀತಿಯ ಮೊದಲ ಪಾಠ ಕಲಿಸಿದೆ. ನಿನ್ನ ಪ್ರೀತಿಯಿಂದ ನಾನು ಸಂತೋಷವಾಗಿದ್ದೇನೆ, ಸುರಕ್ಷಿತವಾಗಿದ್ದೇನೆ ಎಂದು ಪತ್ರದಲ್ಲಿ ಹೇಳಲಾಗಿದೆ.
25 ವರ್ಷದ ಹರೆಯ. ಬ್ರಿಟಿಷ್ ಮೂಲದ ಬಾಲಿವುಡ್ ತಾರೆ ನಫೀಸಾ ಅಲಿಯಾಸ್ ಜಿಯಾ ಖಾನ್ ಆತ್ಮಹತ್ಯೆ ಕಾರಣ ಬಹುತೇಕ ಸ್ಪಷ್ಟವಾಗುತ್ತಿದೆ. ಜಿಯಾ ಖಾನ್ ಗೆಳೆಯ ಸೂರಜ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್ ನಟ ಆದಿತ್ಯ ಪಂಚೋಲಿ ಪುತ್ರ ಸೂರಜ್ ಹಾಗೂ ಜಿಯಾ ಖಾನ್ ನಡುವೆ ಬರೀ ಗೆಳೆತನ ಇತ್ತು ಎನ್ನಲಾಗಿತ್ತು. ಪತ್ರದ ಸತ್ಯಾಸತ್ಯತೆಯನ್ನು ಹಸ್ತ ಪ್ರತಿ ತಜ್ಞರು ಪರಿಶೀಲಿಸುತ್ತಿದ್ದಾರೆ. ಪತ್ರದ ಪ್ರತಿ ಹೇಗಿದೆ ನೋಡಿ...

ಜಿಯಾ ಪತ್ರ ನಕಲಿಯೇ?
ಜಿಯಾ ಖಾನ್ ಬರೆದಿರುವ ಪತ್ರ ನಕಲಿ ಜಿಯಾ ಕೈಬರಹ ಹೋಲುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಪೊಲೀಸರು ಅಲ್ಲಗೆಳೆದಿದ್ದಾರೆ. ನಮ್ಮ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸದ್ಯಕ್ಕೆ ಎಲ್ಲಾ ಪತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬರುವ ತನಕ ಏನೂ ಹೇಳಲು ಬರುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಶ್ವಾಸ್ ನಾಂಗ್ರೆ ಹೇಳಿದ್ದಾರೆ.
ಜಿಯಾ ಪತ್ರ ದ್ವಂದ್ವತೆ
ಜಿಯಾಖಾನ್ ಬರೆದಿರುವ ಸುದೀರ್ಘ ಪತ್ರದಲ್ಲಿ ಆಕೆ ಹಾಗೂ ಸೂರಜ್ ನಡುವಿನ ಸಂಬಂಧದ ಬಗ್ಗೆ ಸವಿಸ್ತಾರ ಮಾಹಿತಿ ಇದೆ. ಸೂಸೈಡ್ ನೋಟ್ ನಲ್ಲಿ ಹೇಳಿರುವಂತೆ ಜಿಯಾಖಾನ್ ಮೇಲೆ ಹಲ್ಲೆ, ಅತ್ಯಾಚಾರ ಎಸಗಿರುವ ಸೂರಜ್ ಅವರು ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕಾರಣರಾಗಿದ್ದಾರೆ ಎಂದು ಜಿಯಾ ತಾಯಿ ರಬಿಯಾ ಅವರು ಸ್ಪಷ್ಟಪಡಿಸಿದ್ದರು.
ಮೊದಲು ಸಿಕ್ಕ 6 ಪುಟಗಳ ಸೂಸೈಡ್ ನೋಟ್ ನಲ್ಲೂ ಇದು ದೃಢಪಟ್ಟಿದ್ದು, ಆದರೆ, ಹೊಸ ಪತ್ರದಲ್ಲಿ ಎಲ್ಲವೂ ಉಲ್ಟಾ, ಸೂರಜ್ ನನ್ನು ಹಾಡಿಹೊಗಳಲಾಗಿದೆ.
ಆ ಪತ್ರದಲ್ಲಿ ಬರೀ ನೋವು
ಜಿಯಾ ಖಾನ್ ಜೊತೆ ಲಿವ್ ಇನ್ ಸಂಬಂಧ ಹೊಂದಿದ್ದಾಗಿ ಸೂರಜ್ ಪೊಲೀಸರ ಬಳಿ ಒಪ್ಪಿಕೊಂಡಿದ್ದ. ಜಿಯಾ ಖಾನ್ ಆತನೊಡನೆ ದೈಹಿಕ ಸಂಬಂಧ ಬೆಳೆಸಿ ಗರ್ಭವತಿಯಾಗಿದ್ದಳು. ಆದರೆ, ನಂತರ ಇಬ್ಬರ ನಡುವೆ ವೈಮನಸ್ಯ ಬೆಳೆದು ಗರ್ಭಪಾತ ಮಾಡಿಸಿಕೊಂಡಿದ್ದಳು.
ಅಬಾರ್ಷನ್ ನಂತರವೂ ಸೂರಜ್ ನನಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದ. 'ನಿನ್ನಿಂದಾದ ನೋವು, ಅತ್ಯಾಚಾರ, ದೌರ್ಜನ್ಯ, ಹಿಂಸೆ ಯಾವುದಕ್ಕೂ ನಾನು ಅರ್ಹಳಲ್ಲ. ಕೊನೆಗೆ ತಿಳಿದಿದ್ದೇನೆಂದರೆ, ಅಲ್ಲಿ ಪ್ರೀತಿಯೂ ಇರಲಿಲ್ಲ, ಬದ್ಧತೆಯೂ ಇರಲಿಲ್ಲ' ಎಂದು ಜಿಯಾ ಬರೆದಿದ್ದಳು ಎನ್ನಲಾಗಿದೆ.

ಆ ಪತ್ರದಲ್ಲಿ ನೋವಿತ್ತು
"ನಿನಗಾಗಿ ಯಾವತ್ತೂ ಒಳ್ಳೆಯದನ್ನು ಬಯಸಿದೆ. ನನ್ನಲ್ಲಿದ್ದ ಅಲ್ಪಹಣವನ್ನು ನಿನಗಾಗಿ ವ್ಯಯಿಸಲು ಸಿದ್ಧವಿದ್ದೆ. ಗೋವಾ ಪ್ರವಾಸ ನಿನ್ನ ಹುಟ್ಟುಹಬ್ಬಕ್ಕಾಗಿ ನಾನು ನೀಡಿದ ಗಿಫ್ಟ್. ನೀನು ನನಗೆ ಮೋಸ ಮಾಡುತ್ತಿದ್ದುದು ತಿಳಿದಿದ್ದರೂ ನಿನಗಾಗಿ ನನ್ನ ಸಮಯ ಹಣ ಮೀಸಲಿಟ್ಟೆ.
ನನ್ನನ್ನು ಮತ್ತಷ್ಟು ಘಾಸಿಮಾಡಿದಾಗ ಇಷ್ಟವಿಲ್ಲದಿದ್ದರೂ ಗರ್ಭಪಾತ ಮಾಡಿಸಿಕೊಂಡೆ. ಆದರೆ, ನೀನು ನನ್ನ ಹುಟ್ಟುಹಬ್ಬದ ಸಂಭ್ರಮ ಹಾಳುಮಾಡಿದೆ. ಪ್ರೇಮಿಗಳ ದಿನದಂದೂ ನನ್ನಿಂದ ದೂರವಿದ್ದೆ.ಇನ್ನೂ ನನ್ನಿಂದ ಸಹಿಸಲು ಸಾಧ್ಯವಿಲ್ಲ. ನಾನು ಮುಕ್ತಿ ಪಡೆಯಬೇಕಿದೆ."
ಹೊಸ ಪತ್ರ ಕೊನೆ ನುಡಿ
"ನೀನು ದೇವರು ನನಗಾಗಿ ಕಳಿಸಿದ ವ್ಯಕ್ತಿ. ನಿನಗೆ ನನ್ನಿಂದ ಏನು ಬೇಕೋ ಪಡೆದಿಕೋ, ನಿನ್ನ ಅಪ್ಪ, ಅಮ್ಮ ಧನ್ಯತೆ ಅನುಭವಿಸುವಂತೆ ನಾನು ನಡೆದುಕೊಳ್ಳುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ನೀನು ಸಹಾಯ ನೀಡಿದ್ದೆ ಅದನ್ನು ನಾನು ನಿನಗೆ ಬೇಕಾದ್ದು ನೀಡಲು ಸಿದ್ಧಳಾಗಿದ್ದೇನೆ" ಎಂದು ಹೇಳಲಾಗಿದೆ.
"ಮೊದಲ ಪತ್ರ ಹಾಗೂ ಎರಡನೇ ಪತ್ರದ ಕೈ ಬರಹ, ಬರೆದಿರುವ ದಿನಾಂಕ ಸಮಯ ಹಾಗೂ ಬರೆದಿರುವವರ ಮಾನಸಿಕ ಸ್ಥಿತಿ ಆಧಾರದ ಮೇಲೆ ವರದಿ ಹೊರ ಬೀಳಲಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಮತ್ತೇನೆ ಬಂದರೂ ನಂಬಬೇಡಿ. ಅಧಿಕೃತ ಹೇಳಿಕೆಗೆ ಸ್ವಲ್ಪ ಕಾಯಿರಿ" ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

Click it and Unblock the Notifications











