ವಿವಾದಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಬಂಧನ
'ಕೆಜಿಎಫ್ 2', 'RRR' ಸೇರಿದಂತೆ ಒಳ್ಳೆಯ ಸೂಪರ್ ಹಿಟ್ ಸಿನಿಮಾಗಳನ್ನು ಸಹ ತೀರ ಕಳಪೆ, ತಲೆ ನೋವಿನ ಸಿನಿಮಾಗಳು ಎಂದೆಲ್ಲ ವಿಮರ್ಶೆ ಮಾಡಿದ್ದ ಕಮಾಲ್ ಆರ್ ಖಾನ್ ಅನ್ನು ಇಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್, ನಟ-ನಟಿಯರ ಖಾಸಗಿ ಜೀವನದ ಬಗ್ಗೆ ಹೇಳಿಕೆ, ಕೆಟ್ಟ ಸಿನಿಮಾ ವಿಮರ್ಶೆ ಮಾಡುವ ಕಮಾಲ್ ಆರ್ ಖಾನ್, ತಮ್ಮ ಹಳೆಯ ಟ್ವೀಟ್ನಿಂದಾಗಿ ಇದೀಗ ಬಂಧನಕ್ಕೆ ಒಳಗಾಗಿದ್ದಾರೆ.
2020 ರಲ್ಲಿ ಕಮಾಲ್ ಆರ್ ಖಾನ್ ಮಾಡಿದ್ದ ದ್ವೇಷಪೂರ್ಣ ಟ್ವೀಟ್ನ ವಿರುದ್ಧ ರಾಹುಲ್ ಕನ್ವಾಲ್ ಎಂಬುವರು ಮುಂಬೈನ ಮಲಾಡ್ ಪೊಲೀಸರಿಗೆ ದೂರು ನೀಡಿದ್ದರು. ಕಮಾಲ್ ಆರ್ ಖಾನ್ ಭಾರತದಲ್ಲಿ ವಾಸಿಸುತ್ತಿರಲಿಲ್ಲವಾದ್ದರಿಂದ ಅವರ ಬಂಧನ ಸಾಧ್ಯವಾಗಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಕಮಾಲ್ ಆರ್ ಖಾನ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಬಂದ ಕೂಡಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.

2020 ರಲ್ಲಿ ನಟ ಇರ್ಫಾನ್ ಖಾನ್ ಹಾಗೂ ರಿಶಿ ಕಪೂರ್ ಅವರುಗಳು ನಿಧನ ಹೊಂದಿದಾಗ ಕಮಾಲ್ ಆರ್ ಖಾನ್ ಕೀಳು ಅಭಿರುಚಿಯಿಂದ ಕೂಡಿದ ಟ್ವೀಟ್ಗಳನ್ನು ಮಾಡಿದ್ದರು. ರಿಶಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದ ಟ್ವೀಟ್ ಮಾಡಿದ್ದ ಕಮಾಲ್ ಆರ್ ಖಾನ್, ''ಇನ್ನೆರಡು ದಿನದಲ್ಲಿ ಮದ್ಯದ ಅಂಗಡಿಗಳು ತೆರೆದು ಬಿಡುತ್ತವೆ ಅಂಥಹಾ ಅರ್ಜೆಂಟ್ ಏನಿತ್ತು'' ಎಂದು ಪ್ರಶ್ನಿಸಿದ್ದರು. ಇರ್ಫಾನ್ ಖಾನ್ ಮರಣದ ಸಮಯದಲ್ಲಿಯೂ ದಾವೂದ್ ಇಬ್ರಾಹಿಂಗೆ ಲಿಂಕ್ ನೀಡಿ ಟ್ವೀಟ್ ಒಂದನ್ನು ಮಾಡಿದ್ದರು.
ಕಮಾಲ್ ಆರ್ ಖಾನ್ರ ಈ ಟ್ವೀಟ್ಗಳ ವಿರುದ್ಧ ಶಿವಸೇನಾ ಪಕ್ಷದ ಸದಸ್ಯ ರಾಹುಲ್ ಕನ್ವಾಲ್ ಅವರು ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಮಾಲ್ ಆರ್ ಖಾನ್ ಟ್ವೀಟ್ಗಳು ಈ ಹಿಂದೆಯೂ ಹಲವು ಬಾರಿ ವಿವಾದ ಎಬ್ಬಿಸಿವೆ. ಸ್ಟಾರ್ ನಟ-ನಟಿಯರ ಬಗ್ಗೆ ಹಲವು ಬಾರಿ ತೀರ ಕೆಟ್ಟದಾಗಿ ಕಮಾಲ್ ಆರ್ ಖಾನ್ ಟ್ವೀಟ್ ಮಾಡಿದ್ದಿದೆ. ಈ ಹಿಂದೆ ಎರಡು ಬಾರಿ ಅವರ ಟ್ವಿಟ್ಟರ್ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದಾಗಿಯೂ ಕಮಾಲ್ ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ.
ಯಶ್ ವಿರುದ್ಧ ವಿಷ ಕಾರಿದ್ದ ಈತ , ಯಶ್ ಚಿತ್ರ ಶೇರ್ ಮಾಡಿ ಭೋಜ್ಪುರಿ ನಟನಂತೆ ಇದ್ದಾನೆಂದು, 'ವಿಕ್ರಂ' ಸಿನಿಮಾದ ಮುಂದೆ 'ಕೆಜಿಎಫ್ 2' ಬಚ್ಚಾ ಎಂದು ಹೇಳಿದ್ದ. ಕೆಜಿಎಫ್ 2 ಸಿನಿಮಾ ತಲೆನೋವಿನ ಸಿನಿಮಾ ಎಂದೂ, ಸಂಜಯ್ ದತ್, 'ಕೆಜಿಎಫ್ 2' ಗಿಂತಲೂ 'ಶಂಶೇರಾ' ಸಿನಿಮಾದಲ್ಲಿ ಡೇಂಜರಸ್ ಆಗಿದ್ದಾರೆಂದೂ ಹೇಳಿದ್ದರು.


Click it and Unblock the Notifications











