ಮಾನನಷ್ಟ ಮೊಕದ್ದಮೆಯಲ್ಲಿ ಕಂಗನಾ ರನೌತ್ಗೆ ಜಾಮೀನು
ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ಕಂಗನಾ ರನೌತ್ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ನಟಿ ಕಂಗನಾ ರನೌತ್ಗೆ ಜಾಮೀನು ದೊರಕಿದೆ.
ಕಳೆದ ವರ್ಷ ನಟಿ ಕಂಗನಾ ರನೌತ್ ಅವರು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರ ಬಗ್ಗೆ ಆಧಾರ ರಹಿತ ಹೇಳಿಕೆ ನೀಡಿದ್ದರು. ಇದರಿಂದ ತಮ್ಮ ಮಾನನಷ್ಟವಾಗಿದೆ ಎಂದು ಆರೋಪಿಸಿ ಜಾವೇದ್ ಅಖ್ತರ್ ಅವರು ಪ್ರಕರಣ ದಾಖಲಿಸಿದ್ದರು.
ಮಾರ್ಚ್ 1 ರಂದು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಂಗನಾ ವಿರುದ್ಧ ವಾರೆಂಟ್ ಹೊರಡಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾದ ಕಂಗನಾ ಜಾಮೀನಿಗೆ ಮನವಿ ಸಲ್ಲಿಸಿದ್ದರು ಜೊತೆಗೆ ವಾರೆಂಟ್ ಅನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಅಂತೆಯೇ ಇಂದು (ಮಾರ್ಚ್ 25) ರಂದು ಕಂಗನಾಗೆ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. 20,000 ನಗದು ಭದ್ರತೆ 15,000 ಆಸ್ತಿ ಭದ್ರತೆ ನೀಡಿ ಜಾಮೀನು ಪಡೆದಿದ್ದಾರೆ ಕಂಗನಾ ರನೌತ್.
ಇದೇ ದಿನ ಕಂಗನಾಗೆ ಕರ್ನಾಟಕ ಹೈಕೋರ್ಟ್ನಿಂದಲೂ ಸಿಹಿ ಸುದ್ದಿ ದೊರೆತಿದೆ. ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಕಂಗನಾ ಮಾಡಿದ್ದ ಟ್ವೀಟ್ ಬಗ್ಗೆ ತುಮಕೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ರಮೇಶ್ ನಾಯಕ್ ಎಂಬುವರು ದೂರು ದಾಖಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದರು. ಆದರೆ ಕರ್ನಾಟಕ ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ. ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟರು ಯಾಂತ್ರಿಕವಾಗಿ ತೀರ್ಪು ನೀಡಿದ್ದಾರೆ. ಅಪರಾಧ ಎಸಗಲಾಗಿದೆಯೇ ಇಲ್ಲವೆ ಎಂಬ ಪರಿಶೀಲನೆ ನಡೆಸಿದೆ ಆದೇಶ ನೀಡಲಾಗಿದೆ ಹಾಗಾಗಿ ಅರ್ಜಿಯ ಪುನರ್ ವಿಚಾರಣೆ ಅವಶ್ಯಕತೆ ಇದೆ ಎಂದು ಹೇಳಿ ತುಮಕೂರು ಜೆಎಂಎಫ್ಸಿಗೆ ಪ್ರಕರಣವನ್ನು ಮರಳಿ ಕಳುಹಿಸಲಾಗಿದೆ.
ರೈತರ ಬಗ್ಗೆ ಮಾಡಿದ್ದ ಟ್ವೀಟ್ ಬಗ್ಗೆ ನಟಿ ಕಂಗನಾ ವಿರುದ್ಧ ಬೆಳಗಾವಿ ಮ್ಯಾಜಿಸ್ಟ್ರೇಟ್ ಟ್ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಾಗಿತ್ತು.


Click it and Unblock the Notifications











