ಕಣ್ಣೀರು ಹಾಕುತ್ತಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಕಂಗನಾ
ಕಳೆದೆರಡು ದಿನದಿಂದ ಕಂಗನಾ ರನೌತ್ ಬಹಳ ದುಃಖದಲ್ಲಿದ್ದಂತಿದೆ. ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ನೋಡಿ ದುಃಖ, ಬೇಸರ, ಆಕ್ರೋಶ, ಹತಾಶೆ ಒಟ್ಟೊಟ್ಟಿಗೆ ಅಡರಿ ಅದನ್ನೆಲ್ಲಾ ಟ್ವಿಟ್ಟರ್ ಮೂಲಕ ಹೊರಹಾಕುತ್ತಿದ್ದರು ಕಂಗನಾ. ಆದರೆ ಇಂದು ಹಠಾತ್ತನೆ ಟ್ವಿಟ್ಟರ್, ಕಂಗನಾ ಅವರ ಖಾತೆಯನ್ನೇ ರದ್ದು ಮಾಡುಬಿಟ್ಟಿದೆ.
Recommended Video
ದ್ವೇಷ ಹರಡುವ, ಸುಳ್ಳು ಮಾಹಿತಿ ಒಳಗೊಂಡ, ಹಿಂಸೆಗೆ ಪ್ರಚೋದನೆ ನೀಡುವ ಟ್ವೀಟ್ಗಳನ್ನು ಮಾಡಿದ್ದಾರೆಂದು ಟ್ವಿಟ್ಟರ್ ಸಂಸ್ಥೆ ಕಂಗನಾರ ಖಾತೆಯನ್ನು ರದ್ದು ಮಾಡಿದೆ. ಟ್ವಿಟ್ಟರ್ ಖಾತೆ ರದ್ದಾದ ಕೂಡಲೇ ಕಂಗನಾರ ದುಃಖ ಕಟ್ಟೆ ಒಡೆದು ಕಣ್ಣೀರಾಗಿ ಹೊರಬಂದಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ಕಂಗನಾ, ಪಶ್ಚಿಮ ಬಂಗಾಳದಲ್ಲಿ ಭಾರಿ ಹಿಂಸಾಚಾರ ನಡೆಯುತ್ತಿದೆ. ಹಿಂದುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಆದರೆ ಈ ವಿಡಿಯೋದಲ್ಲಿಯೂ ಸಹ ಕಂಗನಾ ಕೆಲವು ತಪ್ಪು ಮಾಹಿತಿ ಹಾಗೂ ಅತಿರಂಜಿತವಾಗಿ ವಿಷಯವನ್ನು ಮಂಡಿಸಿದ್ದಾರೆ.
'ನಾವೆಲ್ಲ ನೋಡುತ್ತಿದ್ದೀವಿ ಬಂಗಾಳದಿಂದ ಮನಕಲುಕುವ ಚಿತ್ರಗಳು ಬರುತ್ತಿವೆ. ಬಹಿರಂಗವಾಗಿ ಕೊಲೆಗಳಾಗುತ್ತಿವೆ, ಅತ್ಯಾಚಾರಗಳಾಗುತ್ತಿವೆ, ಮನೆಗಳನ್ನು ಸುಟ್ಟು ಹಾಕಲಾಗುತ್ತಿದೆ. ಆದರೆ ಪ್ರಗತಿಪರರು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ಬಿಬಿಸಿ, ಟೆಲಿಗ್ರಾಫ್, ಟೈಮ್ಸ್, ಗಾರ್ಡಿಯನ್ ಆಗಲಿ ಈ ಬಗ್ಗೆ ವರದಿ ಮಾಡುತ್ತಿಲ್ಲ' ಎಂದಿದ್ದಾರೆ ಕಂಗನಾ.

ಹಿಂದುಗಳ ಜೀವ ಅಷ್ಟೋಂದು ಅಗ್ಗವೆ?: ಕಂಗನಾ
'ಭಾರತದ ವಿರುದ್ಧ ಎಂಥಹಾ ಪಿತೂರಿ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಹಿಂದುಗಳ ರಕ್ತ ಅಷ್ಟೋಂದು ಅಗ್ಗವೇ? ಅಥವಾ ನಾವೆಲ್ಲರೂ ದೊಡ್ಡ ಪಿತೂರಿಗೆ ನಾವು ಬಲಿಯಾಗುತ್ತಿದ್ದೇವಾ?' ಎಂದಿದ್ದಾರೆ ಕಂಗನಾ.

''ದೇಶದ್ರೋಹಿಗಳಿಗೆ ಏಕೆ ಅಷ್ಟೋಂದು ಹೆದರುತ್ತೀರಿ?''
''ನಾನು ನಮ್ಮ ಸರ್ಕಾರವನ್ನು ಬಹುವಾಗಿ ಬೆಂಬಲಿಸುವವಳು, ಆದರೆ ಇಂದು ನಾನು ಬಹಳ ಬೇಸರಗೊಂಡಿದ್ದೇನೆ. ಬಂಗಾಳದಲ್ಲಿ ರಕ್ತದ ಕೋಡಿ ಹರಿಯುತ್ತಿದೆ. ನೀವು ಅದರ ವಿರುದ್ಧ ಧರಣಿ ಮಾಡಲು ಯೋಜಿಸುತ್ತಿದ್ದೀರಿ. ಅದನ್ನು ವಿರೋಧಿಸಲು ಯೋಚಿಸುತ್ತಿದ್ದೀರಿ, ಯಾಕೆ ನೀವು ದೇಶದ್ರೋಹಿಗಳಿಂದ ಅಷ್ಟೋಂದು ಹೆದರುತ್ತಿದ್ದೀರಿ?' ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ ಕಂಗನಾ.

ರಾಷ್ಟ್ರಪತಿ ಆಡಳಿತ ಹೇರಿ: ಕಂಗನಾ ರನೌತ್
'ದೇಶದ್ರೋಹಿಗಳಿಗೆ ಏಕೆ ನೀವು ಹೆದರುತ್ತಿದ್ದೀರಿ? ದೇಶದ್ರೋಹಿಗಳೇ ದೇಶವನ್ನು ನಡೆಸುತ್ತಾರೇನು ಈಗ? ಈಗ ರಾಷ್ಟ್ರಪತಿ ಆಡಳಿತದ ಅವಶ್ಯಕತೆ ಇದೆ. ಜವಾಹಾರ್ ಲಾಲ್ ನೆಹರು 8 ಅಥವಾ 12 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ್ದರು. ಇಂದಿರಾಗಾಂಧಿ 50 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ್ದರು. ಮನಮೋಹನ್ ಸಿಂಗ್ 10-12 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ್ದರು. ನೀವು ಏಕೆ ಹೆದರುತ್ತಿದ್ದೀರಿ?'' ಎಂದು ಅಳುತ್ತಾ ಪ್ರಶ್ನೆ ಮಾಡಿದ್ದಾರೆ ಕಂಗನಾ.

ಕೇವಲ ಪ್ರತಿಭಟನೆ ಮಾಡುತ್ತಾ ಕೂರಬೇಕಾ?: ಕಂಗನಾ
''ಈ ದೇಶವನ್ನು ದೇಶದ್ರೋಹಿಗಳು ನಡೆಸುತ್ತಾರೇನು? ಅಮಾಯಕರ ಹತ್ಯೆ ಆದಾಗಲೂ ನಾವು ಕೇವಲ ಪ್ರತಿಭಟನೆ ಮಾಡುತ್ತಾ ಕೂರಬೇಕೇನು? ಆದಷ್ಟು ಬೇಗ ಈ ನರಮೇಧವನ್ನು ನಿಲ್ಲಿಸಿ ಎಂದು ನಮ್ಮ್ ಸರ್ಕಾರದ ಬಳಿ ನಾನು ಮನವಿ ಮಾಡುತ್ತೇನೆ'' ಎಂದಿದ್ದಾರೆ ಕಂಗನಾ ರನೌತ್.


Click it and Unblock the Notifications











