ಮುಗ್ಗರಿಸಿದ 'ರಾಮ್ ಸೇತು'- 'ಥ್ಯಾಂಕ್ಗಾಡ್'? ತಡೆಯೋಕೆ ಶಿವನನ್ನು ಎಲ್ಲಿಂದ ತರಬೇಕು ಸೈನ್ಯನಾ?
ಬಾಲಿವುಡ್ನಲ್ಲಿ ಮತ್ತೆ 'ಕಾಂತಾರ' ಕೈ ಮೇಲಾಗಿದೆ. ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾದ 'ರಾಮ್ ಸೇತು' ಹಾಗೂ 'ಥ್ಯಾಂಕ್ಗಾಡ್' ಚಿತ್ರಗಳಿಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು' ಚಿತ್ರಕ್ಕಿಂತ 'ಕಾಂತಾರ' ಸೂಪರ್ ಎನ್ನುವ ಮಾತುಗಳು ಹಿಂದೆ ಪ್ರೇಕ್ಷಕರಿಂದ ಕೇಳಿಬರ್ತಿದೆ. ಇನ್ನು ಮೂರ್ನಾಲ್ಕು ವಾರ ಬಾಲಿವುಡ್ನಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಇದು 'ಕಾಂತಾರ' ಚಿತ್ರಕ್ಕೆ ಪ್ಲಸ್ ಆಗಲಿದೆ.
ದೇಶ ವಿದೇಶಗಳಲ್ಲೂ 'ಕಾಂತಾರ' ಸಿನಿಮಾ ಜೋರಾಗಿ ಸದ್ದು ಮಾಡ್ತಿದೆ. ಕಳೆದ 25 ದಿನಗಳಿಂದಲೂ ಪ್ರೇಕ್ಷಕರ ಮೊದಲ ಆಯ್ಕೆ ಎನಿಸಿಕೊಂಡಿದೆ. ಈ ಮೂರ್ನಾಲ್ಕು ವಾರಗಳಲ್ಲಿ ಬಿಡುಗಡೆಯಾದ ಎಲ್ಲಾ ಹಿಂದಿ ಸಿನಿಮಾಗಳು ಸೈಲೆಂಟ್ ಆಗಿದೆ. ಹಿಂದಿ, ತೆಲುಗು, ಮಲಯಾಳಂನಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಅಚ್ಚರಿ ಎಂದರೆ ವಿದೇಶಗಳಲ್ಲಿ 'ಕಾಂತಾರ' ತೆಲುಗು ವರ್ಷನ್ ನೋಡಲು ಪ್ರೇಕ್ಷಕರು ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಬೇರೆ ಸಿನಿಮಾಗಳ ಸೋಲು ಕನ್ನಡ ಚಿತ್ರಕ್ಕೆ ವರವಾಗಿ ಪರಿಣಮಿಸಿದೆ. ಹಿಂದಿ ವರ್ಷನ್ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಸುಳಿವು ಸಿಗುತ್ತಿದೆ.
ಈ ವಾರ ಬಿಡುಗಡೆಯಾಗಿರುವ 'ರಾಮ್ ಸೇತು' ಮತ್ತು 'ಥ್ಯಾಂಕ್ಗಾಡ್' ಸಿನಿಮಾಗಳು ಕೂಡ ಬಹಳ ದಿನ ಥಿಯೇಟರ್ನಲ್ಲಿ ಉಳಿಯುವ ಸುಳಿವು ಸಿಗುತ್ತಿಲ್ಲ. ಯಾಕೆಂದರೆ ಎರಡೂ ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. 'ರಾಮಸೇತು' ಕಥೆ ಎನ್ನುವ ಕಾರಣಕ್ಕೆ ಥಿಯೇಟರ್ಗೆ ಹೋದವರಿಗೆ ನಿರಾಸೆ ಎದುರಾಗುತ್ತಿದೆ.

ಬಾಲಿವುಡ್ ದೊಡ್ಡ ಚಿತ್ರಗಳಿಗೆ ಹಿನ್ನಡೆ
ಅಭಿಷೇಕ್ ಶರ್ಮಾ ನಿರ್ದೇಶನದ 'ರಾಮ್ ಸೇತು' ಚಿತ್ರದಲ್ಲಿ ಪುರಾತತ್ವಶಾಸ್ತ್ರಜ್ಞನಾಗಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಇನ್ನು ಫ್ಯಾಂಟಸಿ ಸೋಷಿಯಲ್ ಡ್ರಾಮಾ 'ಥ್ಯಾಂಕ್ ಗಾಡ್' ಅಜಯ್ ದೇವಗನ್ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರಾ, ರಕುಲ್ ಪ್ರೀತ್ ಸಿಂಗ್ ಮಿಂಚಿದ್ದಾರೆ. 'ರಾಮ್ಸೇತು' 2800 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ತೆರೆಗೆ ಬಂದರೆ, 'ಥ್ಯಾಂಕ್ ಗಾಡ್' ಚಿತ್ರಕ್ಕೆ 2000ಕ್ಕೂ ಹೆಚ್ಚು ಸ್ಕ್ರೀನ್ ಸಿಕ್ಕಿದೆ. ಆದರೆ ಪ್ರೇಕ್ಷಕರು ಮಾತ್ರ ಸಿನಿಮಾಗಳನ್ನು ನೋಡಿ ಬೇಸರಗೊಂಡಿದ್ದಾರೆ. ವಿಮರ್ಶಕರಿಗೂ ಸಿನಿಮಾ ಇಷ್ಟವಾಗಿಲ್ಲ. ರಶ್ಮಿಕಾ ಮಂದಣ್ಣ, ಅಮಿತಾಬ್ ನಟನೆಯ 'ಗುಡ್ಬೈ' ಹಾಗೂ ಆಯುಷ್ಮಾನ್ ಕುರಾನಾ ನಟನೆಯ 'ಡಾಕ್ಟರ್ ಜಿ' ಸಿನಿಮಾಗಳು ಬಂದು ಹೋಗಿದ್ದೇ ಕೆಲವರಿಗೆ ಗೊತ್ತಾಗಲಿಲ್ಲ.

ರಾಮ್ಸೇತು ರಹಸ್ಯದ ಕಥೆ
'ರಾಮ್ಸೇತು' ಪ್ರಾಕೃತಿಕವೋ ಅಥವಾ ಮನುಷ್ಯ ನಿರ್ಮಿತವೋ ಎನ್ನುವ ಚರ್ಚೆಯ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಕೆರಳಿಸಿತ್ತು. ಬಹಳ ರೋಚಕ ಕಾನ್ಸೆಪ್ಟ್ ಆರಿಸಿಕೊಂಡಿರುವ ನಿರ್ದೇಶಕರು ಒಳ್ಳೆ ಕಥೆ, ಚಿತ್ರಕಥೆ ಮಾಡಿ ಸಿನಿಮಾ ಮಾಡುವಲ್ಲಿ ಎಡವಿದ್ದಾರೆ. ಇನ್ನು ಸಿನಿಮಾ ಗ್ರಾಫಿಕ್ಸ್ ಬಗ್ಗೆ ಕೂಡ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ನಟನೆ ಸೊಗಸಾಗಿದೆ. ಆದರೆ ಇನ್ನು ಉಳಿದಂತೆ ಎಲ್ಲಾ ವಿಭಾಗಗಳಲ್ಲೂ ಚಿತ್ರತಂಡ ಒಳ್ಳೆ ಅವಕಾಶವನ್ನು ಕಳೆದುಕೊಂಡಂತೆ ಕಾಣುತ್ತಿದೆ.

ಅಜಯ್ ದೇವಗನ್ಗೆ ಕೈಕೊಟ್ಟ ಗಾಡ್?
ಇಂದ್ರ ಕುಮಾರ್ ನಿರ್ದೇಶನ್ 'ಥ್ಯಾಂಕ್ ಗಾಡ್' ಚಿತ್ರಕ್ಕೂ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ರೀಮೆಕ್ ಸಿನಿಮಾ ಕೊಂಚಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆದರೂ ಸಂಪೂರ್ಣವಾಗಿ ದೊಡ್ಡಮಟ್ಟದ ಗೆಲುವು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಮೌತ್ ಟಾಕ್ನಿಂದ ಒಂದು ವೇಳೆ ಸಿನಿಮಾ ಗೆಲ್ಲಬಹುದು ಎನ್ನುವ ಲೆಕ್ಕಚಾರ ಶುರುವಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ಗಳ 2 ದೊಡ್ಡ ಸಿನಿಮಾಗಳಿಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಸದ್ಯಕ್ಕಂತೂ ಬಿಟೌನ್ನಲ್ಲಿ 'ಕಾಂತಾರ' ಕ್ರೇಜ್ ಕಮ್ಮಿ ಆಗುವ ಸುಳಿವು ಸಿಗುತ್ತಿಲ್ಲ. ಸೋಮವಾರ, ಮಂಗಳವಾರ ಕೂಡ ದೀಪಾವಳಿ ಸಂಭ್ರಮದಲ್ಲಿ 'ಕಾಂತಾರ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ದೇಶ ವಿದೇಶಗಳಲ್ಲೂ 'ಕಾಂತಾರ' ಹವಾ
ತಮಿಳಿನಲ್ಲಿ 'ಸರ್ದಾರ್' ಸೇರಿದಂತೆ ಒಂದಷ್ಟು ಸಿನಿಮಾಗಳು ಬಂದಿದೆ. ತೆಲುಗಿನಲ್ಲೂ ಒಂದಷ್ಟು ಸಿನಿಮಾಗಳು ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದಿದೆ. ಕನ್ನಡದಲ್ಲಿ 'ಹೆಡ್ಬುಷ್' ಸಿನಿಮಾ ತೆರೆಕಂಡಿದೆ. ಆದರೆ ಎಲ್ಲಾ ಕಡೆ 'ಕಾಂತಾರ' ಸಿನಿಮಾದ್ದೇ ಸದ್ದು ಜೋರಾಗಿದೆ. ಆಂಧ್ರ, ತೆಲಂಗಾಣ, ಕೇರಳದಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಬರೀ ಕನ್ನಡ ಸಿನಿಮಾಗಳ ಆರ್ಭಟ ನಡೀತಿದೆ. ಈ ಸಾಲಿಗೆ ಶೀಘ್ರದಲ್ಲೇ 'ಗಂಧದಗುಡಿ' ಸೇರಿಕೊಳ್ಳಲಿದೆ.


Click it and Unblock the Notifications











