ಕ್ರಿಕೆಟ್ ದಂತಕತೆ ಕಪಿಲ್ ದೇವ್ ಗೆ ಹೃದಯಾಘಾತ: ಶೀಘ್ರ ಚೇತರಿಕೆಗೆ ಸಿನಿಗಣ್ಯರ ಪಾರ್ಥನೆ
ಭಾರತದ ಕ್ರಿಕೆಟ್ ದಂತಕತೆ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಮಾಜಿ ನಾಯಕ ಕಪಿಲ್ ದೇವ್ಗೆ ಹೃದಯಾಘಾತವಾಗಿದೆ. ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಕಪಿಲ್ ದೇವ್ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಆಘಾತವುಂಟು ಮಾಡಿದ್ದು, ಕಪಿಲ್ ದೇವ್ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ಬಗ್ಗೆ ಎ ಎನ್ ಐ ಟ್ವೀಟ್ ಮಾಡಿದ್ದು, ಎದೆ ನೋವಿನ ಕಾರಣ ಕ್ರಿಕೆಟಿಗ ಕಪಿಲ್ ದೇವ್ ಅಕ್ಟೋಬರ್ 23, ರಾತ್ರಿ 1ಗಂಟೆಗೆ ಫೋರ್ಟಿಸ್ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ತುರ್ತು ವಿಭಾಗಕ್ಕೆ ಬಂದರು. ತಕ್ಷಣ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಪಿಲ್ ದೇವ್ ಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಅನೇಕರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸಿನಿಮಾ ಗಣ್ಯರು ಸಹ ಕಪಲ್ ದೇವ್ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

ಈ ಬಗ್ಗೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಟ್ವೀಟ್ ಮಾಡಿ, 'ಕಪಿಲ್ ದೇವ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಬೇಗ ಗುಣಮುಖರಾಗಿ ಸರ್' ಎಂದು ಟ್ವೀಟ್ ಮಾಡಿದ್ದಾರೆ.
ನಟಿಯರಾದ ರಿಚಾ ಚಡ್ಡಾ, ಪಾಯಲ್ ಘೋಷ್ ಸಹ ಟ್ವೀಟ್ ಮಾಡಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಇನ್ನೂ ಕನ್ನಡದ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ, "ಕ್ರಿಕೆಟ್ ಪ್ರಪಂಚದ ಶ್ರೇಷ್ಠ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿರುವ ಕಪಿಲ್ ದೇವ್ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಚೇತರಿಕೆ ನಿಮ್ಮ ಬೌಲಿಂಗ್ ಅಷ್ಟೆ ವೇಗವಾಗಿರಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

61 ವರ್ಷದ ಕಪಿಲ್ ದೇವ್, 1983ರಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗ ನಾಯಕನಾಗಿದ್ದರು. ಭಾರತದ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿದ ಕ್ಷಣ ಸಿನಿಮಾ ಮೂಲಕ ತೆರೆಮೇಲೆ ಬರುತ್ತಿದೆ. 83 ಹೆಸರಿನಲ್ಲಿ ಸಿನಿಮಾ ತಯಾರಾಗಿದ್ದು, ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ನಟ ರಣ್ವೀರ್ ಸಿಂಗ್ ನಿಭಾಯಿಸಿದ್ದಾರೆ. ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











