ಚೆನ್ನೈ ಎಕ್ಸ್ ಪ್ರೆಸ್ ಮಿಸ್ ಮಾಡಿಕೊಂಡ ಕರೀನಾ
ನಿರ್ದೇಶಕ ರೋಹಿತ್ ಶೆಟ್ಟಿಯವರ ಬರಲಿರುವ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರಕ್ಕೆ ಶಾರುಖ್ ಖಾನ್ ಎದುರು ನಾಯಕಿಯಾಗಿ ಕರೀನಾ ಕಪೂರ್ ನಟಿಸುತ್ತಿಲ್ಲ. ಈ ವಿಷಯವನ್ನು ನಿರ್ದೇಶಕ ರೋಹಿತ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. "ನಾನು ಈ ಚಿತ್ರಕ್ಕಾಗಿ ಕರೀನಾರನ್ನು ಸಂಪರ್ಕಿಸಿಲ್ಲ. ನಾನು ನಿರ್ದೇಶಿಸಲಿರುವ ಚೆನ್ನೈ ಎಕ್ಸ್ ಪ್ರೆಸ್ ಯಾವ ರೀತಿಯ ಚಿತ್ರವೆಂಬುದು ಕರೀನಾರಿಗೆ ಗೊತ್ತಿದೆ. ಮುಂದೆ ನಾವಿಬ್ಬರೂ ಒಟ್ಟಾಗಿ ಚಿತ್ರ ಮಾಡಲಿದ್ದೇವೆ" ಎಂದಿದ್ದಾರೆ.
ಹಬ್ಬಿರುವ ಗಾಳಿಸುದ್ದಿ ಬಗ್ಗೆ ಸುದ್ದಿ ಮಾಧ್ಯಮವೊಂದರ ವಿಶೇಷ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ರೋಹಿತ್ ಶೆಟ್ಟಿ, "ಕೇವಲ ಹತ್ತು ದಿನಗಳು ಕಾದರೆ ನಮ್ಮ ಚಿತ್ರದ ನಾಯಕಿ ಯಾರೆಂಬುದು ಎಲ್ಲರಿಗೂ ತಿಳಿಯಲಿದೆ" ಎಂದಿದ್ದಾರೆ. ಒಂದು ಕಡೆ ಕರೀನಾ ನಟಿಸುತ್ತಾರೆ ಎಂದು ಸುದ್ದಿಯಾಗುತ್ತಿದ್ದರೆ ಇನ್ನೊಂದೆಡೆ ದೀಪಿಕಾ ಪಡುಕೋಣೆ ಎನ್ನಲಾಗುತ್ತಿದೆ. ಇದೆಲ್ಲಕ್ಕೂ ರೋಹಿತ್ ತೆರೆ ಎಳೆದಿದ್ದಾರೆ.
ರೋಹಿತ್ ಶೆಟ್ಟಿಯ ಬರಲಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ವಿಶೇಷತೆಯೆಂದರೆ, ಈ ಚಿತ್ರದಲ್ಲಿ ಅವರ ಹಿಂದಿನ ಎಲ್ಲಾ ಚಿತ್ರಗಳಲ್ಲಿ ನಟಿಸಿದ್ದ ಅಜಯ್ ದೇವಗನ್ ಇಲ್ಲ. ಬದಲಿಗೆ ಶಾರುಖ್ ಎಂಟ್ರಿಯಾಗಿದೆ. ಈ ಬಗ್ಗೆಯೂ ಸ್ಪಷ್ಟೀಕರಣ ನೀಡಿರುವ ಶೆಟ್ಟಿ "ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲ. ಇಬ್ಬರೂ ಮೊದಲಿನಂತೆ ಚೆನ್ನಾಗಿದ್ದೇವೆ. ಜನರು ಈ ಬಗ್ಗೆ ಕೇಳಲಾರರು ಎಂದುಕೊಂಡಿದ್ದೇನೆ' ಎಂದಿದ್ದಾರೆ.
ತಮ್ಮ ಚಿತ್ರದಲ್ಲಿ ಅಜಯ್ ದೇವಗನ್ ನಟಿಸುವ ಯಾವುದೇ ಛಾನ್ಸ್ ಇರುವುದನ್ನು ತಳ್ಳಿಹಾಕಿರುವ ರೋಹಿತ್ ಶೆಟ್ಟಿ, ನನ್ನ ಚಿತ್ರದ ಸ್ಕ್ರಿಪ್ಟ್ ವರ್ಕ್ ಹೆಚ್ಚುಕಡಿಮೆ ಮುಗಿದಿದೆ. ಹೀಗಾಗಿ ಅಜಯ್ ನಟಿಸುವ ಯಾವುದೇ ಅವಕಾಶವಿಲ್ಲ. ಇನ್ನೆರಡು ತಿಂಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಹೀರೋಯಿನ್ ಫೈನಲ್ ಆಗಲಿದೆ ಎಂದು ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











