ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್: ರಾಜ್ಯ ಹೈಕೋರ್ಟ್ನಲ್ಲಿ ಕಂಗನಾ ನಿರಾಳ
ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದ ನಟಿ ಕಂಗನಾ ರನೌತ್ ವಿರುದ್ಧ ದೇಶದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿಯೂ ಸಹ ದಾಖಲಾಗಿತ್ತು. ಆದರೆ ಈಗ ಇದೇ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕಂಗನಾ ಪರವಾಗಿ ಆದೇಶ ನೀಡಿದೆ.
ಹೊಸ ರೈತ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿರೋಧಿಸಿ ಟ್ವೀಟ್ ಮಾಡಿದ್ದ ಕಂಗನಾ, ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಈ ಟ್ವೀಟ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.
ತುಮಕೂರು ಜೆಎಂಎಫ್ಸಿಯಲ್ಲಿ ವಕೀಲರೊಬ್ಬರು ಕಂಗನಾ ವಿರುದ್ಧ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲಿಸರಿಗೆ ಸೂಚನೆ ನೀಡಿತ್ತು.

ಆದರೆ ಈಗ ಕಂಗನಾ ವಿರುದ್ಧ ಎಫ್ಐಆರ್ ದಾಖಲು ಮಾಡುವುದಕ್ಕೆ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್, ಅರ್ಜಿಯನ್ನು ಪುನರ್ ವಿಚಾರಣೆ ಮಾಡುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿದೆ.
''ಆದೇಶ ನೀಡಿರುವ ಮ್ಯಾಜಿಸ್ಟ್ರೇಟರು, ಅಪರಾಧ ಎಸಗಿರುವುದನ್ನು ಧೃಡೀಕರಿಸುವ ಯಾವ ಅಂಶವೂ ದೂರಿನಲ್ಲಿ ಇಲ್ಲ ಎಂಬುದನ್ನು ಪರಿಗಣಿಸಿಲ್ಲ. ಅರ್ಜಿದಾರರು ದೂರಿನಲ್ಲಿ ಸಲ್ಲಿಸಿರುವ ವಿಷಯಗಳು ಅಪರಾಧ ಎಂದು ಪರಿಗಣಿಸಲ್ಪಡಬಲ್ಲುದೇ ಎಂಬುದನ್ನು ಮತ್ತೊಮ್ಮೆ ಪುನರ್ ವಿಮರ್ಶಿಸಬೇಕಾಗಿದೆ'' ಎಂದು ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಚ್.ಪಿ.ಸಂದೇಶ್ ಹೇಳಿದ್ದಾರೆ.
ತುಮಕೂರು ಜೆಎಂಎಫ್ಸಿಯಲ್ಲಿ ರಮೇಶ್ ನಾಯಕ್ ಎಂಬ ವಕೀಲರು 'ಕಂಗನಾ ಅವರು ತಮ್ಮ ಟ್ವೀಟ್ನಿಂದ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಮಾಡುತ್ತಿದ್ದಾರೆ. ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದಾರೆ' ಎಂದು ದೂರು ದಾಖಲಿಸಿದ್ದರು. ಕಂಗನಾ ಪರವಾಗಿ ವಾದ ಮಾಡಿದ ರಿಜ್ವಾನ್ ಸಿದ್ಧಿಖಿ ಅವರು ವಾದ ಮಂಡಿಸಿದ್ದರು.


Click it and Unblock the Notifications











